ರಾಜ್ಯದ 5 ರಾಷ್ಟ್ರೀಯ ಹೆದ್ದಾರಿಗಳಿಗೆ ಶಂಕುಸ್ಥಾಪನೆ ಮಾಡಿದ ಗಡ್ಕರಿ
ಬೆಳಗಾವಿ, ಫೆಬ್ರವರಿ 28; ಕೇಂದ್ರ ರಸ್ತೆ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಸೋಮವಾರ 238 ಕಿ. ಮೀ. ಉದ್ದದ 5 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಬೆಳಗಾವಿಯಲ್ಲಿ ಶಂಕುಸ್ಥಾಪನೆ ಮಾಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ, ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲ್, ಕೇಂದ್ರ ನವೀನ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ಬೆಳಗಾವಿಯಲ್ಲಿ ಇಂದು ರಸ್ತೆ ಕ್ರಾಂತಿ ಆಗುತ್ತಿದೆ. ಇಂದು 5 ರಾಷ್ಟ್ರೀಯ ಹೆದ್ದಾರಿಗಳ ಲೋಕಾರ್ಪಣೆಯಾಗಿದೆ" ಎಂದರು.
ಕಾರ್ಯಕ್ರಮಕ್ಕೂ ಮುನ್ನ ಹುಬ್ಬಳ್ಳಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ಇಂದು ರಾಜ್ಯದಲ್ಲಿ ಚಾಲನೆ ಸಿಗಲಿರುವ ಮಹತ್ವಾಕಾಂಕ್ಷಿ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಂದ ಮುಂದಿನ ದಿನಗಳಲ್ಲಿ ಕರ್ನಾಟಕದ ಸಾರಿಗೆ ಚಿತ್ರಣವೇ ಬದಲಾಗಲಿದೆ" ಎಂದರು.

"ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಭಿವೃದ್ಧಿಪರವಾದ ಯೋಜನೆಗಳಿಂದ ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಕ್ಕೆ ಭದ್ರ ಬುನಾದಿಯಾಗಲಿದೆ" ಎಂದು ಹೇಳಿದರು.
"ಇಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿಯವರು ಹಲವಾರು ಯೋಜನೆಗಳಿಗೆ ಚಾಲನೆ ಹಾಗೂ ಲೋಕಾರ್ಪಣೆ ಮಾಡಲಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರ ರಾಜ್ಯದ ಬಗೆಗಿನ ಕಳಕಳಿಯಿಂದ ಹಲವಾರು ಅಭಿವೃದ್ಧಿ ಯೋಜನೆಗಳು ಕರ್ನಾಟಕದಲ್ಲಿ ಅನುಷ್ಠಾನವಾಗಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಹಾಗೂ ರಾಜ್ಯ ಹೆದ್ದಾರಿಗಳ ಉನ್ನತೀಕರಣದ ಯೋಜನೆಗಳು ಜಾರಿಯಾಗುತ್ತಿವೆ" ಎಂದು ತಿಳಿಸಿದರು.
ಯಾವ-ಯಾವ ಕಾಮಗಾರಿಗಳು
* ಬೆಳಗಾವಿ-ಸಂಕೇಶ್ವರ ಬೈಪಾಸ್ 6 ಪಥದ ರಸ್ತೆ (40 ಕಿ. ಮೀ.). ಯೋಜನಾ ವೆಚ್ಚ 1,479.3 ಕೋಟಿ ರೂ.ಗಳು. ಒಂದು ಟೋಲ್ ಪ್ಲಾಜಾ ಬರುತ್ತದೆ. 39 ಬಸ್ ನಿಲ್ದಾಣ, 4 ಗ್ರೇಡ್ ಸಪರೇಟರ್, 14 ಟ್ರಕ್ ನಿಲುಗಡೆ ಸ್ಥಳಗಳು ನಿರ್ಮಾಣ.
* ಸಂಕೇಶ್ವರ ಬೈಪಾಸ್-ಮಹಾರಾಷ್ಟ್ರ ಗಡಿ ತನಕ ರಸ್ತೆ (37.836 ಕಿ. ಮೀ.) ಯೋಜನಾ ವೆಚ್ಚ 1,388 ಕೋಟಿ ರೂ.ಗಳು. 16 ಬಸ್ ನಿಲ್ದಾಣ, 3 ಗ್ರೇಡ್ ಸಪರೇಟರ್, ಟೋಲ್ ಪ್ಲಾಜಾ ನಿರ್ಮಾಣ.
* ಸಾಂಕ್ಷೇಲಿಯಂ-ಜಾಂಬೋಟಿ-ಬೆಳಗಾವಿ ರಸ್ತೆ (69.19 ಕಿ. ಮೀ.) ಉದ್ದದ ಕಾಮಗಾರಿ. ಯೋಜನಾ ವೆಚ್ಚ 246.78 ಕೋಟಿ ರೂ.ಗಳು. 9 ಬಸ್ ನಿಲ್ದಾಣ, ಟೋಲ್ ಪ್ಲಾಜಾ ನಿರ್ಮಾಣವಾಗಲಿದೆ.
* ವಿಜಯಪುರ-ಮುಂಡರಗಿ (79.7 ಕಿ. ಮೀ.) ಉದ್ದದ ದ್ವಿಪಥ ಕಾಮಗಾರಿ. ಯೋಜನಾ ವೆಚ್ಚ 766.64 ಕೋಟಿ. ಸಿದ್ದಾಪುರ-ವಿಜಯಪುರ ದ್ವಿಪಥ ರಸ್ತೆ ವಿಸ್ತರಣೆ ಕಾಮಗಾರಿ (11.62 ಕಿ. ಮೀ.). ಯೋಜನಾ ವೆಚ್ಚ 90.13 ಕೋಟಿ.
* ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ 6 ಪಥದ ರಸ್ತೆಯಾಗಿ ಅಗಲೀಕರಣ. 1014.79 ಕೋಟಿ ರೂ. ವೆಚ್ಚದಲ್ಲಿ 30.6 ಕಿ. ಮೀ. ರಸ್ತೆ ನಿರ್ಮಾಣ. 2 ವರ್ಷದಲ್ಲಿ ಕಾಮಗಾರಿ ಪೂರ್ಣ.
ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, "ನಿತಿನ್ ಗಡ್ಕರಿ ಕರ್ನಾಟಕಕ್ಕೆ ಅತೀ ಹೆಚ್ಚು ಅನುದಾನ ನೀಡಿದ್ದಾರೆ. ಹಿಂದಿನ ಎಲ್ಲ ದಾಖಲೆ ಮೀರಿ ಪ್ರಧಾನಿ ಮೋದಿಯವರು ಗ್ರಾಮ ಸಡಕ್ ಯೋಜನೆಗೆ ಅನುದಾನ ನೀಡಿದ್ದಾರೆ. 2014 ರವರೆಗೆ 91,000 ಕಿ. ಮೀ. ರಸ್ತೆ ನಿರ್ಮಾಣವಾಗಿತ್ತು. ಈಗ 1.41 ಲಕ್ಷ ಕಿ. ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿದೆ" ಎಂದರು.












Click it and Unblock the Notifications