ಸೋಫಾ ತರಲಿಲ್ಲವೆಂದು ಬೆಳಗಾವಿಯಲ್ಲಿ ನವವಿವಾಹಿತೆ ಆತ್ಮಹತ್ಯೆ
ಬೆಳಗಾವಿ, ಅಕ್ಟೋಬರ್ 22: ಮದುವೆ ಆದ ಮೂರೇ ತಿಂಗಳಿಗೆ ನವವಿವಾಹಿತೆಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಅ.21ರಂದು ಬೆಳಗಾವಿ ತಾಲೂಕಿನ ಸುಳಗಾ ಗ್ರಾಮದಲ್ಲಿ ನಡೆದಿದೆ.
ಜ್ಯೋತಿ ಜೋಪಡೆ (19) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಮೂರು ತಿಂಗಳ ಹಿಂದೆಯಷ್ಟೇ ಜ್ಯೋತಿ ಉಚಗಾಂವ್ ಗ್ರಾಮದ ನಿಖಿಲ್ ಎಂಬಾತನ ಜತೆಗೆ ವಿವಾಹ ಆಗಿದ್ದರು. ನಿಖಿಲ್ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು.
ದಸರಾ ಹಬ್ಬಕ್ಕೆಂದು ಜ್ಯೋತಿ ಕೆಲ ದಿನಗಳ ಹಿಂದೆಯಷ್ಟೇ ತವರು ಮನೆಗೆ ಬಂದಿದ್ದರು. ಈ ವೇಳೆ ಸೋಫಾ ಸೆಟ್ ತಂದುಕೊಡುವಂತೆ ಜ್ಯೋತಿ ತಂದೆ ಮುಂದೆ ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಜ್ಯೋತಿ ತಂದೆ ಸ್ಪಂದಿಸಿಲ್ಲ. ಸೋಫಾ ತಂದುಕೊಟ್ಟಿಲ್ಲ. ಇಷ್ಟಕ್ಕೇ ಕೋಪಗೊಂಡು ಜ್ಯೋತಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅ.21ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸ್ಥಳಕ್ಕೆ ಕಾಕತಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನವವಿವಾಹಿತೆ ಜ್ಯೋತಿ ಸಾವಿನಿಂದ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications