ಶಾಸಕಾಂಗ ಸಭೆಯಲ್ಲಿ ಸಿಎಂ ಗರಂ, ಸಚಿವರಿಗೆ ಕ್ಲಾಸ್!
ಬೆಳಗಾವಿ, ಡಿ. 4 : ತಮ್ಮ ಸಚಿವ ಸಂಪುಟದ ಕೆಲವು ಸಚಿವರ ವಿರುದ್ಧ ಸಿಎಂ ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದಿವೆ ಇನ್ನು ಸಚಿವರು ಮೈ ಚಳಿ ಬಿಟ್ಟು ಕೆಲಸ ಮಾಡಬೇಕು ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ಬುಧವಾರ ಬೆಳಗಾವಿಯಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸಿದ ಸಿಎಂ ಶಾಸಕರು ಮತ್ತು ಸಚಿವರು ದೂರುಗಳನ್ನು ಆಲಿಸಿ, ಕೆಲವು ಸಲಹೆಗಳನ್ನು ನೀಡಿದರು.
ಚಳಿಗಾಲದ ಅಧಿವೇಶನ ಎರಡು ದಿನ ಬಾಕಿ ಉಳಿದಿರುವಂತೆಯೇ ಬುಧವಾರ ಸಿಎಂ ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ಸಭೆ ನಡೆಸಿದರು. ಕೆಲವು ಸಚಿವರು ಕೆಡಿಪಿ ಸಭೆಗೆ ಹೋಗುವುದಿಲ್ಲ, ಜಿಲ್ಲಾ ಪ್ರವಾಸ ಮಾಡುತ್ತಿಲ್ಲ, ಪ್ರವಾಸಕ್ಕೆ ತೆರಳಿದಾಗ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡುತ್ತಿಲ್ಲ, ಬೆಂಗಳೂರಿನಲ್ಲಿ ಕೆಪಿಸಿಸಿ ಕಚೇರಿಗೂ ತೆರಳುವುದಿಲ್ಲ ಎಂದು ಸಿಎಂ ಕೆಲವು ಸಚಿವರ ವಿರುದ್ಧ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ವಾರದಲ್ಲಿ ಮೂರು ದಿನ ವಿಧಾನಸೌಧದ ಕಚೇರಿಯಲ್ಲಿ ಕುಳಿತು ಕೆಲಸ ಮಾಡಿ ಎಂದು ಸಚಿವರಿಗ ಸಲಹೆ ನೀಡಿರುವ ಸಿದ್ದರಾಮುಯ್ಯ, ಸರ್ಕಾರ ಆರು ತಿಂಗಳು ಪೂರೈಸಿದೆ. ಇನ್ನೇನಿದ್ದರೂ ಸರಿಯಾಗಿ ಕೆಲಸ ಮಾಡಿ ನಿಮ್ಮ ಶಕ್ತಿ-ಸಾಮರ್ಥ್ಯ ತೋರಿಸಬೇಕು ಎಂದು ಸಚಿವರಿಗೆ ಬಿಸಿ ಮುಟ್ಟಿಸಿದ್ದಾರೆ. ಸಾರ್ವಜನಿಕರ ಜತೆ ಸೌಜನ್ಯದಿಂದ ವರ್ತಿಸಿ ಕೆಪಿಸಿಸಿ ಮತ್ತು ಜಿಲ್ಲಾ ಕಾಂಗ್ರೆಸ್ ಕಚೇರಿಗಳಿಗೆ ಭೇಟಿ ನೀಡಿ ಎಂದು ಸಿಎಂ ಸಚಿವರಿಗೆ ಪಾಠ ಮಾಡಿದ್ದಾರೆ. (ಅಧಿವೇಶನ : ಸರ್ಕಾರದೊಂದಿಗೆ ರೇವಣ್ಣ ಜಟಾಪಟಿ)
ಶಾಸಕರ ದೂರು ದುಮ್ಮಾನಗಳಿಗೆ ಸಚಿವರ ಸ್ಪಂದಿಸುವುದಿಲ್ಲ ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಶಾಸಕರು ಪತ್ರ ತಾವು ಸಚಿವರಿಗೆ ಪತ್ರ ಬರೆದರೆ, ಅದಕ್ಕೆ ಉತ್ತರ ಬರುವುದಿಲ್ಲ, ಕ್ಷೇತ್ರಗಳಲ್ಲೂ ಪ್ರವಾಸ ಮಾಡುತ್ತಿಲ್ಲ ಎಂದು ಸಿಎಂ ಸಮ್ಮಖದಲ್ಲಿ ದೂರು ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಸಿಎಂ ಕೆಲವು ಸಚಿವರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ದೂರುಗಳು ಎಐಸಿಸಿ ಮತ್ತು ಕೆಪಿಸಿಸಿಗೂ ಹೋಗಿವೆ. ಇಂತಹ ದೂರುಗಳು ಕೇಳಿ ಬರದಂತೆ ಕೆಲಸ ಮಾಡಿ ಎಂದು ಸೂಚನೆ ನೀಡಿದರು.
ಹೊಸ ಸೂತ್ರ : ಸಚಿವರ ವಿರುದ್ಧ ಶಾಸಕರು ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಂತೆ ಪ್ರತಿ ಮೂವರು ಶಾಸಕರಿಗೆ ಒಬ್ಬರು ಉಸ್ತುವಾರಿ ಸಚಿವರನ್ನು ನೇಮಿಸಲು ಶಾಸಕಾಂಗ ಪಕ್ಷದ ಸಭೆಯಲ್ಲಿ ಸೂತ್ರ ರಚಿಸಲಾಗಿದೆ. ಇದಕ್ಕೆ ಶಾಸಕರು ಒಪ್ಪಿಗೆ ನೀಡಿದ್ದಾರೆ. ಶಾಸಕರು ತಮ್ಮ ಉಸ್ತುವಾರಿ ಸಚಿವರ ಬಳಿ ಕೆಲಸಗಳನ್ನು ಮಾಡಿಸಿಕೊಳ್ಳುವಂತೆ ಸೂತ್ರ ರೂಪಿಸಲಾಗಿದೆ.












Click it and Unblock the Notifications