ಪ್ರಚೋದನಕಾರಿ ಭಾಷಣ ಮಾಡದಂತೆ ಎಂಇಎಸ್ ಮೇಲೆ ನಿರ್ಬಂಧ
ಬೆಳಗಾವಿ, ನವೆಂಬರ್ 13 : ಕನ್ನಡ ಭಾಷೆಯ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿ ಜನರ ನಡುವೆ ದ್ವೇಷಮಯ ವಾತಾವರಣ ಸೃಷ್ಟಿಸದಂತೆ ಮತ್ತು ಭಾಷಾ ಸಾಮರಸ್ಯ ಕದಡುವವರನ್ನು ಬೆಳಗಾವಿ ಜಿಲ್ಲಾ ಗಡಿಯೊಳಗೆ ಪ್ರವೇಶಿಸದಂತೆ ನಿರ್ಬಂಧ ಹೇರಿ ಜಿಲ್ಲಾ ದಂಡಾಧಿಕಾರಿ ಎಸ್ ಜಿಯಾವುಲ್ಲಾ ಅವರು ಸೋಮವಾರ ಆದೇಶ ಹೊರಡಿಸಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನವೆಂಬರ್ 13ರಿಂದ ಆರಂಭವಾಗುತ್ತಿದ್ದು, ಮಹಾರಾಷ್ಟ್ರ ಏಕೀಕರಣ ಸಮಿತಿಯವರು ಮಹಾಮೇಳಾವ ಆಯೋಜಿಸಿದ್ದಾರೆ. ಈ ಸಮ್ಮೇಳನದಲ್ಲಿ ಮಹಾರಾಷ್ಟ್ರದ ಜನಪ್ರತಿನಿಧಿಗಳು, ಎಂಇಎಸ್ ನಾಯಕರು ಬರುವ ಮತ್ತು ಕನ್ನಡಿಗರ ವಿರುದ್ಧ ಭಾಷಣ ಮಾಡುವ ಸಂಭವನೀಯತೆಯಿರುವುದರಿಂದ ಈ ಆದೇಶ ನೀಡಲಾಗಿದೆ.

ಜಿಲ್ಲಾಡಳಿತದಿಂದ ಮಹಾಮೇಳಾವಕ್ಕೆ ಅನುಮತಿ ಪಡೆಯದಿದ್ದರೂ ಭಾರೀ ಸಿದ್ಧತೆಗಳು ನಡೆದಿವೆ. ವ್ಯಾಕ್ಸಿನ್ ಡೀಪೋ ಮೈದಾನದ ಒಳಗೆ ಮತ್ತು ಹೊರಗೆ ಮಹಾಮೇಳಾವ ನಡೆಸಲು ಮರಾಠಿಗರು ಸಿದ್ಧತೆ ಮಾಡಿಕೊಂಡಿದ್ದಾರೆ. ಕರ್ನಾಟಕ ಸರಕಾರದ ವಿರುದ್ಧ ಅವಹೇಳನಕಾರಿ ಭಾಷಣಗಳು ಮೂಡಿಬರುವ ಸಾಧ್ಯತೆಗಳೂ ಹೆಚ್ಚಿವೆ.
ಮಹಾಮೇಳಾವದಲ್ಲಿ ಕನ್ನಡಿಗರ ಭಾವಣೆಗೆ ಧಕ್ಕೆ ಉಂಟು ಮಾಡಿ, ಭಾಷಾ ವೈಷಮ್ಯ ಬೆಳೆದು ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವ ಸಾಧ್ಯತೆಗಳು ಹೆಚ್ಚಿವೆ. ಅಲ್ಲದೆ, ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿ ಕೂಡಆಗುವ ಸಂಭವನೀಯತೆ ಇದೆ ಎಂದು ಜಿಲ್ಲಾ ದಂಡಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ 10 ಗಂಟೆಯಿಂದ ನವೆಂಬರ್ 14, ಮಂಗಳವಾರ ಮಧ್ಯರಾತ್ರಿ 11.55ರವರೆಗೆ ಮಹಾಷ್ಟ್ರದ ಜನಪ್ರತಿನಿಧಿಗಳು, ಎಂಇಎಸ್ ಮುಖಂಡರು ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿ ಕಾರ್ಯಕರ್ತರು ಪ್ರಚೋದನಾತ್ಮಕ ಭಾಷಣ ಮಾಡದಂತೆ ನಿರ್ಬಂಧ ಹೇರಲಾಗಿದೆ.












Click it and Unblock the Notifications