ಮಹಾಮೇಳಾವಕ್ಕೆ ಮಹಾರಾಷ್ಟ್ರ ಸಚಿವರನ್ನು ಆಹ್ವಾನಿಸಿದ ಎಂಇಎಸ್
ಬೆಳಗಾವಿ, ನವೆಂಬರ್ 10 : ಕರ್ನಾಟಕ ಸರ್ಕಾರದ ವಿಧಾನಮಂಡಲ ಅಧಿವೇಶನಕ್ಕೆ ಪರ್ಯಾಯವಾಗಿ ಎಂಇಎಸ್ ಮಹಾಮೇಳಾವ ಆಯೋಜನೆ ಮಾಡಲಿದೆ. ಮಹಾಮೇಳಾವಕ್ಕೆ ಮಹಾರಾಷ್ಟ್ರದ ಸಚಿವರನ್ನು ಆಹ್ವಾನಿಸಲಾಗಿದೆ.
ನವೆಂಬರ್ 13ರಿಂದ ಹತ್ತು ದಿನಗಳ ಕಾಲ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಅಧಿವೇಶನದ ಮೊದಲ ದಿನ ಮರಾಠಿ ಮಹಾ ಮೇಳಾವ ಆಯೋಜಿಸಲು ಎಂಇಎಸ್ ಸಿದ್ಧತೆ ನಡೆಸಿದೆ.

ಈ ಮೇಳಾವ ಕಾರ್ಯಕ್ರಮಕ್ಕೆ ಮಹಾರಾಷ್ಟ್ರದ ನಾಯಕರನ್ನು ಬೆಳಗಾವಿಗೆ ಕರೆಸಲಾಗುತ್ತಿದೆ. ಅವರ ಕೈಯಿಂದ ಭಾಷಾ ವೈಷಮ್ಯದ ಭಾಷಣ ಮಾಡಿಸಲು ಎಂಇಎಸ್ ನಾಯಕರು ಉದ್ದೇಶಿಸಿದ್ದು, ಮಹಾರಾಷ್ಟ್ರದ ನಾಯಕರಿಗೆ ಆಹ್ವಾನವನ್ನು ನೀಡಿದ್ದಾರೆ.
ಈ ಬಾರಿ ಮಹಾಮೇಳಾವಗೆ ಮಹಾರಾಷ್ಟ್ರದ ಕಂದಾಯ ಸಚಿವ ಚಂದ್ರಕಾಂತ ದಾದಾ ಪಾಟೀಲ ಮುಖ್ಯ ಅತಿಥಿಯಾಗಿ ಬರುತ್ತಿದ್ದಾರೆ. ಕಂದಾಯ ಖಾತೆಯ ಜೊತೆ ಮಹಾರಾಷ್ಟ್ರದ ಗಡಿ ಉಸ್ತುವಾರಿ ಮಂತ್ರಿಯೂ ಇವರೇ ಆಗಿದ್ದಾರೆ. ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಧನಂಜಯ ಮುಂಡೆ ಅವರನ್ನು ಕೂಡಾ ಆಹ್ವಾನಿಸಲಾಗಿದೆ.
ಕಳೆದ ವರ್ಷ ಬೆಳಗಾವಿ ಜಿಲ್ಲಾಧಿಕಾರಿ ಎನ್.ಜಯರಾಂ ಅವರು ಮರಾಠಿ ಮೇಳಾವದಲ್ಲಿ ಮಹಾರಾಷ್ಟ್ರದ ನಾಯಕರು, ಮಂತ್ರಿಗಳು ಭಾಗವಹಿಸದಂತೆ ನಿಷೇಧ ಹೇರಿದ್ದರು. ಕರ್ನಾಟಕದ ಪೋಲೀಸರು ಮಹಾರಾಷ್ಟ್ರದ ನಾಯಕರನ್ನು ಕಾಗಲ್ ಗ್ರಾಮದಲ್ಲಿ ತಡೆದು, ವಾಪಸ್ ಕಳುಹಿಸಿದ್ದರು.
ಈ ಬಾರಿ ಮಹಾ ನಾಯಕರಿಗೆ ಯಾವುದೇ ರೀತಿಯ ನಿಷೇಧ ಇಲ್ಲವಾಗಿದೆ. ಮೇಳಾವದಲ್ಲಿ ಮೇಯರ್ ಮತ್ತು ಎಂಇಎಸ್ ನಗರ ಸೇವಕರು ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಮೌಖಿಕ ಸೂಚನೆ ನೀಡಿದೆ.
ಈಗಾಗಲೇ ಎಂಇಎಸ್ ಮೇಳಾವಕ್ಕೆ ಅನುಮತಿ ನೀಡುವಂತೆ ಕೋರಿ ಬೆಳಗಾವಿ ಪೊಲೀಸರಿಗೆ ಮನವಿ ಮಾಡಿದ್ದಾರೆ. ಕರ್ನಾಟಕ ಸರ್ಕಾರ ಎಂಇಎಸ್ ಉದ್ಧಟತನ ತಡೆಯಲು ಏನು ಮಾಡುತ್ತದೆ? ಕಾದು ನೋಡಬೇಕು.












Click it and Unblock the Notifications