ಅಂತ್ಯಕ್ರಿಯೆಗೆ ಎಲ್ಲಾ ಸಿದ್ಧವಾಗಿದ್ದಾಗ ಬದುಕಿ ಬಂದ ವ್ಯಕ್ತಿ!
ಬೆಳಗಾವಿ, ನವೆಂಬರ್ 22 : ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದರು. ಅಂತ್ಯಕ್ರಿಯೆಗೆ ಸಕಲ ಸಿದ್ಧತೆಗಳು ನಡೆದಿತ್ತು. ಆದರೆ, ಆಂಬ್ಯುಲೆನ್ಸ್ನಲ್ಲಿ ಶವವನ್ನು ತರುವಾಗ ಆತ ಜೀವಂತವಾಗಿರುವು ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಪುರಸಭೆ ಸದಸ್ಯ ಸಂಗಪ್ಪ ಖೇತಗೌಡರ ಅಚ್ಚರಿಯ ರೀತಿಯಲ್ಲಿ ಬದುಕುಳಿದಿದ್ದು, ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅನಾರೋಗ್ಯದ ಕಾರಣ ಸಂಗಪ್ಪ ಖೇತಗೌಡರ ಅವರನ್ನು ಮಹಾರಾಷ್ಟ್ರದ ಆಸ್ಪತ್ರೆಯೊಂದಕ್ಕೆ ದಾಖಲು ಮಾಡಲಾಗಿತ್ತು. ಮೆದುಳಿನ ರಕ್ತಸ್ರಾವದಿಂದ ಚೇತರಿಕೆ ಕಾಣದೇ ದೇಹದ ಚಲನೆ ನಿಂತು ಹೋಗಿತ್ತು. ಮಂಗಳವಾರ ವೃದ್ಯರು ಸಂಗಪ್ಪ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರಿಗೆ ಹೇಳಿದ್ದರು.

ರಾಯಭಾಗ ತಾಲೂಕಿನ ಮುಗಳಖೋಡದಲ್ಲಿರು ಸಂಗಪ್ಪ ಖೇತಗೌಡರ ಮನೆಗೂ ವಿಚಾರ ತಲುಪಿತು. ಜನರು ಅವರ ಮನೆ ಮುಂದೆ ಜಮಾಯಿಸಿದರು. ಸ್ಮಶಾನದಲ್ಲಿ ಗುಂಡಿ ತೋಡಿ ಶವಕ್ಕಾಗಿ ಎಲ್ಲರೂ ಕಾದು ಕುಳಿತಿದ್ದರು.
ಮಂಗಳವಾರ ಸಂಜೆ ಆಸ್ಪತ್ರೆಯಿಂದ ಆಂಬ್ಯುಲೆನ್ಸ್ ಮೂಲಕ ಶವವನ್ನು ಗ್ರಾಮಕ್ಕೆ ತರಲಾಗುತ್ತಿತ್ತು. ಈ ಸಮಯದಲ್ಲಿ ಸಂಗಪ್ಪ ಖೇತಗೌಡರ ಕೈ-ಕಾಲು ಅಲ್ಲಾಡಿಸಿದ್ದಾರೆ. ತಕ್ಷಣ ಅವರನ್ನು ಹಾರೂಗೇರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.
ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಸಂಗಪ್ಪ ಖೇತಗೌಡರ ಅವರನ್ನು ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಮಶಾನದಲ್ಲಿ ತೋಡಿದ್ದ ಗುಂಡಿಗೆ ಕೋಳಿಯನ್ನು ಹಾಕಿ ಅಂತ್ಯ ಸಂಸ್ಕಾರ ಮಾಡಲಾಗಿದೆ.












Click it and Unblock the Notifications