ಮತ್ತೆ ಗಡಿ ಕಿಡಿ ಹೊತ್ತಿಸಲು ಮುಂದಾದ "ಮಹಾ' ಸರ್ಕಾರ: ವಿವಾದಿತ ಪುಸ್ತಕ ಬಿಡುಗಡೆ
ಬೆಳಗಾವಿ, ಜನವರಿ 27: ಮತ್ತೆ ಗಡಿ ವಿಚಾರದ ಬಗ್ಗೆ ಕಿಡಿ ಹೊತ್ತಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದ್ದು, ಬುಧವಾರ ವಿವಾದಿತ ಪುಸ್ತಕ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದೆ.
ಗಡಿ ವಿವಾದ ಕುರಿತ ಪುಸ್ತಕ ಬಿಡುಗಡೆ ಮಾಡಲು ಮಹಾರಾಷ್ಟ್ರ ಸರ್ಕಾರ ನಿರ್ಧಾರ ಮಾಡಿದ್ದು, "ಮಹಾರಾಷ್ಟ್ರ ಕರ್ನಾಟಕ ಸೀಮಾ ವಿವಾದ; ಸಂಘರ್ಷ ಅನಿ ಸಂಕಲ್ಪ' ಹೆಸರಿನ ಪುಸ್ತಕ ಬಿಡುಗಡೆ ಆಗಲಿದೆ.
ಗಡಿಯಲ್ಲಿ ಶಿವಸೇನೆ ಉದ್ಧಟತನ; ಉದ್ಧವ್ ಠಾಕ್ರೆ ಭಾವಚಿತ್ರಕ್ಕೆ ಚಪ್ಪಲಿ ಸೇವೆ
ಗಡಿ ವಿವಾದ ಸಂಘರ್ಷ ಮತ್ತು ಸಂಕಲ್ಪ ಹೆಸರಿನ ಪುಸ್ತಕ ಇಂದು ಬಿಡುಗಡೆಯಾಗಲಿದ್ದು, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮುಂಬೈನಲ್ಲಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.
ಸಿಎಂ ಹಾಗೂ ಶಿವಸೇನೆ ಮುಖ್ಯಸ್ಥರೂ ಆಗಿರುವ ಉದ್ಧವ್ ಠಾಕ್ರೆ, ಪುಸ್ತಕ ಬಿಡುಗಡೆ ಸಮಾರಂಭ ಅಧ್ಯಕ್ಷತೆ ವಹಿಸಲಿರುವ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಸೇರಿ ಹಲವು ನಾಯಕರು ಭಾಗಿಯಾಗುವ ಸಾಧ್ಯತೆ ಇದೆ.
1956 ರಿಂದ 2021ರವರೆಗಿನ ಗಡಿ ವಿವಾದ ಘಟನಾವಳಿಗಳು, ಮಹಾರಾಷ್ಟ್ರದ ನಿಲುವುಗಳ ಬಗ್ಗೆ ಲೇಖನ ಇದಾಗಿದ್ದು, 2004ರಿಂದಲೂ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂಕೋರ್ಟ್ನಲ್ಲಿದೆ.
ಇದೇ ವೇಳೆ ಮಾತನಾಡಿರುವ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾಸಮಿತಿ ಅಧ್ಯಕ್ಷ ಅಶೋಕ್ ಚಂದರಗಿ, ""ವಿವಾದಿತ ಪುಸ್ತಕ ಬಿಡುಗಡೆ ಮಾಡುತ್ತಿರುವುದು ನ್ಯಾಯಾಂಗ ನಿಂದನೆಯಾಗಲಿದೆ. ಪುಸ್ತಕದಲ್ಲಿ ಮಹಾರಾಷ್ಟ್ರದ ಮೊಂಡ ಮತ್ತು ಭಂಡ ವಾದಗಳಿರುವ ಸಾಧ್ಯತೆ ಇದೆ. ಪುಸ್ತಕದಲ್ಲಿನ ಅಂಶಗಳಿಂದ ಉಭಯ ರಾಜ್ಯಗಳ ಮಧ್ಯೆ ಮತ್ತೆ ಸಂಘರ್ಷದ ಕಿಡಿ ಹೊತ್ತಿಸುವ ಸಾಧ್ಯತೆ ಇರುವುದರಿಂದ ಕರ್ನಾಟಕ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಹೆಜ್ಜೆ ಇಡಬೇಕು'' ಎಂದು ಆಗ್ರಹಿಸಿದ್ದಾರೆ.
ಗಡಿ ವಿವಾದದ ಬೆಂಕಿಗೆ ಮಹಾರಾಷ್ಟ್ರ ಸರ್ಕಾರ ತುಪ್ಪ ಸುರಿಯುತ್ತಿದೆ. ಗಡಿ ವಿವಾದ ಸಂಬಂಧ ಬುಧವಾರ ಸಿಎಂ ಉದ್ಧವ್ ಠಾಕ್ರೆ ಅವರು ಉನ್ನತ ಮಟ್ಟದ ಸಭೆ ಕರೆದಿದ್ದಾರೆ. 1956ರಿಂದ 2021ರವರೆಗೂ ನಡೆದ ಘಟನಾವಳಿಗಳ ವಿವರಣೆಯ 530 ಪುಟಗಳ ಪುಸ್ತಕವನ್ನು ಮಹಾರಾಷ್ಟ್ರ ಸರ್ಕಾರ ಬರೆಯಿಸಿದೆ.
ಬೆಳಗಾವಿಯಲ್ಲಿ ಹುತಾತ್ಮ ದಿನ, ಕರಾಳ ದಿನ ಆಚರಣೆ ಬಗ್ಗೆಯೂ ಮಾಹಿತಿ ಇದ್ದು, ಕರ್ನಾಟಕ ಸರ್ಕಾರ ಮರಾಠಿಗರ ಮೇಲೆ ನಿರಂತರ ದೌರ್ಜನ್ಯವೆಸಗುತ್ತಿದೆ ಎಂದು ಬಿಂಬಿಸಲು "ಮಹಾ' ಸರ್ಕಾರ ಹೊರಟಂತಿದೆ.
ಶಿವಸೇನೆ ಸಂಸ್ಥಾಪಕ ಬಾಳಾ ಠಾಕ್ರೆ ರಚಿಸಿರುವ ವಿವಾದಿತ ವ್ಯಂಗ್ಯಚಿತ್ರಗಳು ಪುಸ್ತಕದಲ್ಲಿರುವ ಮಾಹಿತಿ ಇದ್ದು, ಮುಗ್ಧ ಮರಾಠಿಗರ ದಾರಿ ತಪ್ಪಿಸಲು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ನಿರ್ಧರಿಸಿದಂತಿದೆ.