ಬೆಳಗಾವಿ ಉಪಚುನಾವಣೆ ಬಿಜೆಪಿ ಟಿಕೆಟ್ ಫೈನಲ್? ಕೋರ್ ಕಮಿಟಿಯಲ್ಲಿ ಈ 3 ಆಕಾಂಕ್ಷಿಗಳ ಹೆಸರು ಚರ್ಚೆ
ಬೆಂಗಳೂರು, ಮಾರ್ಚ್ 21: ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ನಿಗದಿ ಪಡಿಸಿದೆ.
ಏಪ್ರಿಲ್ 17ರ ಶನಿವಾರ ಮತದಾನ ನಡೆಯಲಿದ್ದು, ಮೇ 2ರಂದು ಮತ ಎಣಿಕೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಮಾರ್ಚ್ ಮೂವತ್ತರವರೆಗೆ ಸಮಯ ಇರುವುದರಿಂದ, ಎರಡು ರಾಷ್ಟ್ರೀಯ ಪಕ್ಷಗಳು ಅವಸರದ ನಿರ್ಣಯವನ್ನು ತೆಗೆದುಕೊಳ್ಳುತ್ತಿಲ್ಲ.
ಬಿಜೆಪಿಯ ಭದ್ರಕೋಟೆ ಎಂದೇ ಹೆಸರಾಗಿರುವ ಬೆಳಗಾವಿ ಕ್ಷೇತ್ರದ ಟಿಕೆಟ್ ಗೆ ಪಕ್ಷದಲ್ಲಿ ಭಾರೀ ಪೈಪೋಟಿ ಏರ್ಪಟ್ಟಿದೆ. ಇರುವ ಒಂದು ಕ್ಷೇತ್ರಕ್ಕೆ ಸುಮಾರು ಅರವತ್ತು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ.
ಶನಿವಾರ (ಮಾ 20) ನಡೆದ ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ಬೆಳಗಾವಿ ಕ್ಷೇತ್ರದ ಅಭ್ಯರ್ಥಿ ಆಯ್ಕೆಯ ವಿಚಾರವನ್ನು ರಾಜ್ಯ ಮುಖಂಡರ ವಿವೇಚನೆಗೆ ಬಿಡಲಾಗಿದೆ. ಸಭೆಯಲ್ಲಿ ಮೂವರು ಹೆಸರು ಚರ್ಚೆಗೆ ಬಂದಿದೆ ಎಂದು ಹೇಳಲಾಗುತ್ತಿದೆ.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ
ಯಡಿಯೂರಪ್ಪನವರ ಸರಕಾರ ಅಧಿಕಾರಕ್ಕೆ ಬಂದ ನಂತರ ಎದುರಾಗುತ್ತಿರುವ ಮತ್ತೊಂದು ಉಪಚುನಾವಣೆ ಇದಾಗಿದೆ. ಈ ಬಾರಿಯ ಪರಿಸ್ಥಿತಿ ಬಿಜೆಪಿಗೆ ಅಷ್ಟೇನೂ ಸುಲಭವಾಗಿಲ್ಲ. ಬೆಲೆ ಏರಿಕೆ, ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ, ಯತ್ನಾಳ್ ಸತತ ಆರೋಪ ಹೊರಿಸುತ್ತಿರುವುದರಿಂದ ಸಿಎಂ ಯಡಿಯೂರಪ್ಪನವರಿಗೆ ಇದೊಂದು ಅಗ್ನಿಪರೀಕ್ಷೆಯ ಸಮಯವಾಗಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ
ಕ್ಷೇತ್ರದ ಕೆಲವೊಂದು ಹೆಸರಾಂತ ವೈದ್ಯರೂ ಬಿಜೆಪಿ ಟಿಕೆಟ್ ಗಾಗಿ ಲಾಬಿ ನಡೆಸುತ್ತಿದ್ದಾರೆ ಎನ್ನುವ ಮಾಹಿತಿಯಿದೆ. ಇದರ ಜೊತೆಗೆ, ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ್ ಪಾಟೀಲ್ ಜೊತೆಗೆ ಇನ್ನೂ ಕೆಲವು ಪ್ರಭಾವೀ ಮುಖಂಡರು ಟಿಕೆಟ್ ಗಾಗಿ ಪ್ರಯತ್ನಿಸುತ್ತಿದ್ದಾರೆ. ಆದರೆ, ಕೋರ್ ಕಮಿಟಿಯಲ್ಲಿ ಮೂವರು ಹೆಸರು ಚರ್ಚೆಗೆ ಬಂದಿದೆ.

ದಿ.ಅಂಗಡಿಯವರ ಪುತ್ರಿ ಮತ್ತು ಸಚಿವ್ ಶೆಟ್ಟರ್ ಸೊಸೆ ಶ್ರದ್ದಾ ಶೆಟ್ಟರ್
ಅರುಣ್ ಸಿಂಗ್ ನೇತೃತ್ವದ ಸಭೆಯಲ್ಲಿ ಮೂವರ ಹೆಸರು ಚರ್ಚೆಗೆ ಬಂದಿದೆ. ಬಹುತೇಕ ಈ ಮೂವರಲ್ಲಿ ಒಬ್ಬರಿಗೆ ಟಿಕೆಟ್ ಸಿಗುವುದು ಖಾತ್ರಿ ಎಂದು ಹೇಳಲಾಗುತ್ತಿದೆ. ದಿ.ಅಂಗಡಿಯವರ ಪುತ್ರಿ ಮತ್ತು ಸಚಿವ್ ಶೆಟ್ಟರ್ ಸೊಸೆ ಶ್ರದ್ದಾ ಶೆಟ್ಟರ್, ಉದ್ಯಮಿ ಪ್ರಭಾಕರ ಕೋರೆ ಮತ್ತು ಸಚಿವ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಹೆಸರು ಚರ್ಚೆಗೆ ಬಂದಿದೆ.

ಅಂಗಡಿ ನಿಧನದ ಅನುಕಂಪ
ಬಿಜೆಪಿಯ ಭದ್ರಕೋಟೆ ಜೊತೆಗೆ ಅಂಗಡಿ ನಿಧನದ ಅನುಕಂಪ ಇರುವುದರಿಂದ ಪಕ್ಷದ ಟಿಕೆಟ್ ಗೆ ಇನ್ನಿಲ್ಲದ ಪೈಪೋಟಿ ನಡೆಯುತ್ತಿದೆ. ಮಹಾಂತೇಶ ಕವಟಗಿಮಠ, ರಾಜೀವ್ ಟೋಪಣ್ಣನವರ್ ಅವರೂ ಟಿಕೆಟ್ ಗಾಗಿ ಲಾಬಿ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications