ಬೆಳಗಾವಿಯ ಅಮಿತ್ ಶಾ ಕಾರ್ಯಕ್ರಮ ರದ್ದುಪಡಿಸಲು ಪತ್ರ!
ಬೆಳಗಾವಿ, ಜನವರಿ 15: ಜನವರಿ 17ರಂದು ಬೆಳಗಾವಿಯಲ್ಲಿ ಬಿಜೆಪಿಯ 'ಜನಸೇವಕ' ಸಮಾವೇಶ ನಡೆಯಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮ ರದ್ದುಗೊಳಿಸಿ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ.
ಬಿಜೆಪಿಯ 'ಜನಸೇವಕ' ಸಮಾವೇಶ ರದ್ದುಪಡಿಸಿ ಇಲ್ಲವೇ ಕೋವಿಡ್ ಮಾರ್ಗಸೂಚಿ ಹಿಂಪಡೆಯಿರಿ ಎಂದು ಆರ್ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ಗೆ ಪತ್ರ ಬರೆದಿದ್ದಾರೆ. ಇಲ್ಲವಾದಲ್ಲಿ ಕರ್ನಾಟಕ ಹೈಕೋರ್ಟ್ಗೆ ಪಿಐಎಲ್ ಸಲ್ಲಿಕೆ ಮಾಡುವುದಾಗಿ ಹೇಳಿದ್ದಾರೆ.

ಕೋವಿಡ್ ಭೀತಿಯ ನಡುವೆಯೂ ಜನವರಿ17ರಂದು 'ಜನಸೇವಕ' ಸಮಾವೇಶವನ್ನು ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿದೆ. ಸಮಾವೇಶಕ್ಕೆ 3 ಲಕ್ಷ ಜನರನ್ನು ಸೇರಿಸುವುದಾಗಿ ಬಿಜೆಪಿಯವರು ಹೇಳಿದ್ದಾರೆ ಎಂದು ಭೀಮಪ್ಪ ಗಡಾದ್ ಪತ್ರದಲ್ಲಿ ತಿಳಿಸಿದ್ದಾರೆ.
ಕೋವಿಡ್ ಮಾರ್ಗಸೂಚಿಯಂತೆ ದೇವಾಲಯ ಪ್ರವೇಶ, ಜಾತ್ರೆ ರದ್ದು ಮಾಡಲಾಗಿದೆ. ಕಳೆದ 10 ತಿಂಗಳಿನಿಂದ ಸವದತ್ತಿ ಯಲ್ಲಮ್ಮ ದೇವಾಲಯ ಬಂದ್ ಆಗಿದೆ. ಕೋವಿಡ್ ನಿಯಂತ್ರಣಕ್ಕಾಗಿ ಕೋಟ್ಯಾಂತರ ರೂಪಾಯಿಯನ್ನು ಸರ್ಕಾರ ಖರ್ಚು ಮಾಡುತ್ತಿದೆ. ಮಾಸ್ಕ್ ಧರಿಸದ ಸಾಮಾನ್ಯ ಜನರಿಗೆ ದಂಡ ಹಾಕಲಾಗುತ್ತಿದೆ.
ಜನವರಿ 17ರಂದು ಮೂರು ಲಕ್ಷ ಸೇರಿ ಸಮಾವೇಶ ನಡೆಸುತ್ತೇವೆ ಎಂದು ಬಿಜೆಪಿಯವರು ಹೇಳಿದ್ದಾರೆ. ರಾಜಕಾರಣಿಗಳಿಗೆ ಒಂದು ಕಾನೂನು, ಜನಸಾಮಾನ್ಯರಿಗೆ ಒಂದು ಕಾನೂನಾ?. 'ಜನಸೇವಕ' ಸಮಾವೇಶ ರದ್ದುಗೊಳಿಸಿ, ಇಲ್ಲವಾದರೆ ಕೋವಿಡ್ ಮಾರ್ಗಸೂಚಿ ಹಿಂಪಡೆಯಿರಿ ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
ಜನವರಿ 14ರ ವರದಿಯಂತೆ ಬೆಳಗಾವಿಯಲ್ಲಿ 8 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 26,458. ಇದುವರೆಗೂ ಜಿಲ್ಲೆಯಲ್ಲಿ 342 ಜನರು ಮೃತಪಟ್ಟಿದ್ದಾರೆ.












Click it and Unblock the Notifications