ಜಾರಕಿಹೊಳಿ vs ಹೆಬ್ಬಾಳ್ಕರ್: ಮತ್ತೊಂದು ಪ್ರತಿಷ್ಠೆಯ ಕಣವಾದ ಬೆಳಗಾವಿ ಪರಿಷತ್ ಚುನಾವಣೆ
ಬೆಳಗಾವಿ, ನವೆಂಬರ್ 24: ಕರ್ನಾಟಕದ ರಾಜಕಾರಣ ಒಂದು ತೂಕವಾದರೆ, ಗಡಿ ಜಿಲ್ಲೆ ಬೆಳಗಾವಿ ರಾಜಕಾರಣದ್ದೆ ಒಂದು ತೂಕ. ಇಲ್ಲಿ ಕುಟುಂಬ ರಾಜಕಾರಣ ಬಹಳ ಸದ್ದು ಮಾಡುತ್ತದೆ. ಇಲ್ಲಿ ಏನೇ ರಾಜಕೀಯ ಸುದ್ದಿಗಳಾದರೂ ಪ್ರತಿಷ್ಠೆಗಾಗಿ ನಡೆದಿರುತ್ತದೆ. ಸದ್ಯ ವಿಧಾನ ಪರಿಷತ್ ಚುನಾವಣೆಯೂ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಲಖನ್ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದರಿಂದಾಗಿ ಬೆಳಗಾವಿ ಕ್ಷೇತ್ರದ ಚುನಾವಣಾ ಕಣ ಕುತೂಹಲಕ್ಕೆ ಕಾರಣವಾಗಿದೆ.
ಮಂಗಳವಾರ ಲಖನ್ ಜಾರಕಿಹೊಳಿ ಬೆಳಗಾವಿ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರವನ್ನು ಸಲ್ಲಿಕೆ ಮಾಡಿದರು. ಈ ಸಂದರ್ಭದಲ್ಲಿ ಅಮರನಾಥ ಜಾರಕಿಹೊಳಿ ಮತ್ತು ಅಂಬಿರಾವ್ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.
ಬೆಳಗಾವಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ನ 2 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣಾ ಕಾಳಗ ಭಾರೀ ಸದ್ದು ಮಾಡುತ್ತಿದೆ. ಕಾಂಗ್ರೆಸ್ ಪಕ್ಷದಿಂದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ, ಬಿಜೆಪಿ ಪಕ್ಷದಿಂದ ಮಹಾಂತೇಶ ಕವಟಗಿಮಠ ನಾಮಪತ್ರ ಸಲ್ಲಿಸಿದ್ದಾರೆ. ಮತ್ತೊಂದೆಡೆ ಪಕ್ಷೇತರ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ನಾಮಪತ್ರ ಸಲ್ಲಿಸುವ ಮೂಲಕ ಬೆಳಗಾವಿಯಲ್ಲಿ ಮತ್ತೊಂದು ರಾಜಕೀಯ ಪ್ರತಿಷ್ಠೆಯ ಜಿದ್ದಾಜಿದ್ದಿ ಕಾಣಬಹುದು.

ಲಖನ್ ಬೆನ್ನಿಗೆ ಜಾರಕಿಹೊಳಿ ಸಹೋದರರು
ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಹೊರತುಪಡಿಸಿ ಉಳಿದೆಲ್ಲ ಜಾರಕಿಹೊಳಿ ಸಹೋದರರು ಲಖನ್ ಬೆನ್ನಿಗೆ ನಿಂತಿದ್ದು, ಸತೀಶ್ ಜಾರಕಿಹೊಳಿ ಮಾತ್ರ ಕುಟುಂಬಕ್ಕಿಂತ ಪಕ್ಷವೇ ಮುಖ್ಯ ಎಂದಿದ್ದಾರೆ.
ಇದೇ ವೇಳೆ ತಮ್ಮ ಲಖನ್ಗೆ ಟಾಂಗ್ ನೀಡಿರುವ ಸತೀಶ್ ಜಾರಕಿಹೊಳಿ, ಸಿಂಗಲ್ ಅಭ್ಯರ್ಥಿ, ಸಿಂಗಲ್ ಮತ ಎಂಬುದು ಕಾಂಗ್ರೆಸ್ ತತ್ವ. ಇದೇ ಲಖನ್ ಮತ್ತು ರಮೇಶ್ ಜಾರಕಿಹೊಳಿ ಲೋಕಸಭಾ ಉಪ ಚುವಾವಣೆಯಲ್ಲಿ ನನ್ನ ವಿರುದ್ಧ ಹಣ ಹಂಚಿ ನನ್ನನ್ನು ಸೋಲಿಸಿದ್ದಾರೆ. ಆ ನೋವು ನಮಗೆ ಹಾಗೂ ನಮ್ಮ ಕಾರ್ಯಕರ್ಯರಿಗೂ ಇದೆ. ಲಖನ್ ಜಾರಕಿಹೊಳಿ ಚುನಾವಣೆ ನಿಲ್ಲೋದು ಡೌಟು. ಪಕ್ಷದ ವರಿಷ್ಠರು ಒಳ್ಳೆಯ ಅವಕಾಶ ಕೊಡ್ತಿವಿ ಅಂದ್ರೆ ವಾಪಸ್ ಪಡೆಯುತ್ತಾರೆ. ಲಖನ್ ಜಾರಕಿಹೊಳಿ ಜೊತೆಗೆ ಮಾತನಾಡುವ ಪ್ರಶ್ನೆ ಇಲ್ಲ ಎಂದಿದ್ದಾರೆ.

ಕಾಂಗ್ರೆಸ್ ಸೋಲಿಸುವುದೇ ಗುರಿ ಎಂದ ರಮೇಶ್
ಸತೀಶಣ್ಣ ಸೇರಿದಂತೆ ಎಲ್ಲರ ಆಶೀರ್ವಾದ ನಮ್ಮ ಮೇಲೆ ಇದೆ. ನಾವೇ ಗೆಲ್ಲೋದು ಎನ್ನುವ ಮೂಲಕ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಉಳಿದ ಜಾರಕಿಹೊಳಿ ಸಹೋದರರಿಗೆ ಟಾಂಗ್ ನೀಡಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿಯನ್ನು ಶತಾಯ ಗತಾಯ ಸೋಲಿಸಲು ರಮೇಶ್ ಜಾರಹೊಳಿ ಪಣ ತೊಟ್ಟಿದ್ದಾರೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಮ್ಮ ಕಿರಿಯ ಸಹೋದರ ಲಖನ್ ಜಾರಕಿಹೊಳಿಯನ್ನು ಎರಡನೇ ಪ್ರಾಶಸ್ತ್ಯ ಮತಕ್ಕಾಗಿ ಕಣಕ್ಕಿಳಿಸಿದ್ದಾರೆ. ನಾವು ಲಖನ್ಗೆ ಬಿಜೆಪಿ ಟಿಕೆಟ್ ಕೇಳಿಲ್ಲ. ನಮ್ಮ ಮೊದಲ ಆದ್ಯತೆ ನಮ್ಮ ಪಕ್ಷದ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಗೆಲ್ಲಬೇಕು. ಎರಡನೇಯದು ಕಾಂಗ್ರೆಸ್ ಅಭ್ಯರ್ಥಿ ಸೋಲಬೇಕು. ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಏನೇನು ಮಾಡಬೇಕು ಎಂಬುದನ್ನು ಚರ್ಚಿಸಲು ದೆಹಲಿಗೆ ಹೋಗುತ್ತಿದ್ದೇನೆ ಎಂದಿದ್ದರು.

ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಯಾರ ಕೈ ಹಿಡಿಯಲಿದ್ದಾರೆ
ಇದೇ ವೇಳೆ ವಿಧಾನ ಪರಿಷತ್ ಚುನಾವಣೆ ಹೆಬ್ಬಾಳ್ಕರ್ vs ಜಾರಕಿಹೊಳಿ ಚುನಾವಣೆಯೇ ಎಂಬ ಪ್ರಶ್ನೆಗೆ ಕೆರಳಿದ ರಮೇಶ್ ಜಾರಕಿಹೊಳಿ ಥೂ.. ಥೂ.. ಎನ್ನುವ ಮೂಲಕ ಕಿಡಿಕಾರಿದರು. ಇನ್ನು ಲಖನ್ ನಾಮಪತ್ರ ಹಿಂಪಡೆಯುತ್ತಾರೆ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಲಖನ್ ಜಾರಕಿಹೊಳಿ, ಸತೀಶ್ ಏನೇ ಹೇಳಿದರೂ ನಮ್ಮ ಅಣ್ಣ, ನಾನು ನಾಮಪತ್ರ ಹಿಂಪಡೆಯುವ ಚಾನ್ಸ್ ಇಲ್ಲ ಎಂದರು.
ಲಖನ್ ಎಂಟ್ರಿಯಿಂದ ಎಲ್ಲ ಕ್ಷೇತ್ರಗಳಿಗಿಂತ ಬೆಳಗಾವಿ ಕ್ಷೇತ್ರದ ರಾಜಕೀಯ ಎಲ್ಲರ ಗಮನ ಸೆಳೆದಿದೆ. ಯಾರು ಗೆಲ್ಲುತ್ತಾರೆ ಎಂಬ ರಾಜಕೀಯ ಲೆಕ್ಕಾಚಾರಗಳು ಜೋರಾಗಿವೆ. ಆದರೆ ಮತದಾರರಾದ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಯಾರ ಕೈ ಹಿಡಿಯಲಿದ್ದಾರೆ ಎಂಬುದಕ್ಕೆ ಫಲಿತಾಂಶದ ದಿನದವರೆಗೂ ಕಾಯಲೇಬೇಕಿದೆ. ಲಖನ್ ಜಾರಕಿಹೊಳಿ ಕಾಂಗ್ರೆಸ್ಗೆ ಪೆಟ್ಟು ಕೊಡ್ತಾರಾ, ಬಿಜೆಪಿಯ ಮತ ಪೆಟ್ಟಿಗೆಗೆ ಕೈ ಹಾಕುತ್ತಾರಾ ಎನ್ನುವುದರ ಮೇಲೆ ಫಲಿತಾಂಶ ಅವಲಂಬಿತವಾಗಿದೆ.

ಡಿಸೆಂಬರ್ 10ರಂದು ಮತದಾನ
ಕರ್ನಾಟಕ ವಿಧಾನ ಪರಿಷತ್ಗೆ ಚುನಾವಣೆ ಘೋಷಣೆಯಾಗಿದ್ದು, 2022ರ ಜನವರಿ 5ರಂದು 25 ಪರಿಷತ್ ಸದಸ್ಯರ ಅಧಿಕಾರ ಅವಧಿ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ತೆರವಾಗಲಿರುವ 25 ವಿಧಾನ ಪರಿಷತ್ ಸ್ಥಾನಗಳಿಗೆ ಡಿಸೆಂಬರ್ 10ರಂದು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ಡಿ.10ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 14ಕ್ಕೆ ಮತ ಎಣಿಕೆ ನಡೆದು, ಫಲಿತಾಂಶ ಹೊರ ಬೀಳಲಿದೆ. ನವೆಂಬರ್ 16ರಂದು ಅಧಿಸೂಚನೆ ಹೊರಡಿಸಲಾಗಿದ್ದು, ನವೆಂಬರ್ 23 ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿತ್ತು. ನಾಮಪತ್ರ ವಾಪಸ್ ಪಡೆಯಲು ನವೆಂಬರ್ 26 ಕೊನೆಯ ದಿನವಾಗಿದೆ.












Click it and Unblock the Notifications