ಲಕ್ಷ್ಮಿದೇವಿ ದೇವಸ್ಥಾನದಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು
ಬೆಳಗಾವಿ, ಅಕ್ಟೋಬರ್ 28: ಬೆಳಗಾವಿ ತಾಲ್ಲೂಕಿನ ಮಣ್ಣಿಕೇರಿ ಗ್ರಾಮದ ಶ್ರೀ ಲಕ್ಷ್ಮಿದೇವಿ ದೇವಸ್ಥಾನದಲ್ಲಿ ಲಕ್ಷಾಂತರ ಮೌಲ್ಯದ ಚಿನ್ನದ ಆಭರಣಗಳು ಹಾಗೂ ಸಾವಿರಾರು ರುಪಾಯಿ ನಗದು ಹಣವನ್ನು ಸೋಮವಾರ ರಾತ್ರಿ ಕಳ್ಳತನ ಮಾಡಲಾಗಿದೆ.
ರಾತ್ರಿ ವೇಳೆ ಕಳ್ಳರು ದೇವಸ್ಥಾನದ ಮುಖ್ಯದ್ವಾರ ಮತ್ತು ಗರ್ಭಗುಡಿಯ ಬಾಗಿಲನ್ನು ಮುರಿದಿದ್ದು, ಲಕ್ಷ್ಮೀದೇವಿಯ ಕೊರಳಲ್ಲಿದ್ದ ಬಂಗಾರದ 5 ಗ್ರಾಂ ಸರ, 20 ಗ್ರಾಂ ಬೋರಮಾಳ, 5 ಗ್ರಾಂ 3 ಮಂಗಳಸೂತ್ರ, 35 ಗ್ರಾಂ, ತಿಕ್ಕೆ, 5 ಗ್ರಾಂ ಕಿವಿಯೋಲೆ ಆಭರಣಗಳು ಹಾಗೂ 630 ಗ್ರಾಂ ಬೆಳ್ಳಿ ಗುಂಡಗಾಡಿಗೆ, 50 ಗ್ರಾಂ ಬೆಳ್ಳಿ ತೊಟ್ಟಿಲು ಮತ್ತು ದೇಣಿಗೆ ಪೆಟ್ಟಿಗೆಯಲ್ಲಿದ್ದ 5000 ನಗದು ಹಣವನ್ನು ದೊಚಿದ್ದಾರೆ.
ದೇವಸ್ಥಾನಲ್ಲಿನ ಒಟ್ಟು 3,62,000 (ಮೂರು ಲಕ್ಷದ ಅರವತ್ತೆರಡು ಸಾವಿರ) ರೂ. ಮೌಲ್ಯದ ಆಭರಣ ಹಾಗೂ 5000 ರೂಪಾಯಿ ಹಣ ಕಳ್ಳತನವಾಗಿದೆ ಎಂದು ಕಾಕತಿ ಪೊಲೀಸ್ ಠಾಣೆಯಲ್ಲಿ ಮಣ್ಣಿಕೇರಿ ಗ್ರಾಮದ ಪಂಚರು ಪ್ರಕರಣ ದಾಖಲಿಸಿದ್ದಾರೆ.

ಮಣ್ಣಿಕೇರಿ ಗ್ರಾಮಕ್ಕೆ ಕಾಕತಿ ಪಿಐ ಆರ್.ಹಳ್ಳೂರ, ಪಿಎಸ್ಐ ಅವಿನಾಶ ಯರಗೊಪ್ಪ, ಪಿಎಸ್ಐ (ಕ್ರೈಂ) ಆರ್.ಟಿ ಲಕ್ಕನಗೌಡರ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.

ಎರಡು ವರ್ಷದ ಹಿಂದಷ್ಟೇ ಪಕ್ಕದ ಕೇದನೂರ ಗ್ರಾಮದಲ್ಲಿ ಎರಡು ದೇವಸ್ಥಾನದಲ್ಲಿನ ದೇವಿಯ ಲಕ್ಷಾಂತರ ರುಪಾಯಿ ಮೌಲ್ಯದ ಆಭರಣಗಳ ಕಳ್ಳತನವಾಗಿತ್ತು. ಆದರೆ ಇಲ್ಲಿಯವರೆಗೆ ಆ ಕಳ್ಳತನಕ್ಕೆ ಸಂಭಂದಿಸಿದಂತೆ ಒಂದೇ ಒಂದು ಆಭರಣ ಹುಡುಕಿ ಕಳ್ಳನನ್ನು ಸೆರೆ ಹಿಡಿಯಲಾಗಲಿಲ್ಲ. ಇದರ ಹಿಂದೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ.












Click it and Unblock the Notifications