Karnataka Rain: ಬೆಳಗಾವಿಯಲ್ಲಿ ಭರ್ಜರಿ ಮಳೆ- ತಂಪೆರೆದ ಮೇಘರಾಜ
ಚಿಕ್ಕೋಡಿ ಮಾರ್ಚ್ 26: ಬಿಸಿಲಿನ ಬೇಗೆಗೆ ಹೈರಾಣಾಗಿದ್ದ ಬೆಳಗಾವಿಯ ಚಿಕ್ಕೋಡಿ ಮಂದಿಗೆ ವರುಣ ತಂಪನೆರೆದಿದ್ದಾನೆ. ಕೆಲ ದಿನಗಳ ಹಿಂದೆ ವರ್ಷದ ಮೊದಲ ಮಳೆ ಕುಂದಾನಗರಿಯಲ್ಲಿ ಆಗಿತ್ತು. ಇಂದು ಮತ್ತೆ ಮಳೆಯಾಗಿದೆ. ಇದರಿಂದ ಜನ ಖುಷ್ ಆಗಿದ್ದಾರೆ.
ರಾಜ್ಯದಲ್ಲಿ ಬರಗಾಲ ಆವರಿಸಿದೆ. ಎಲ್ಲಿ ನೋಡಿದರೂ ನೀರು ಕಾಣ ಸಿಗುತ್ತಿಲ್ಲ. ಕೆರೆ ಕಟ್ಟೆಗಳು ಬರಿದಾಗಿವೆ. ಜಲಾಶಯಗಳಲ್ಲಿ ಬೇಡಿಕೆಯಷ್ಟು ನೀರಿಲ್ಲ. ಬೋರ್ವೆಲ್ಗಳು ಒಣಗಿ ಹೋಗಿವೆ. ನೀರಿಲ್ಲದೆ ನಿತ್ಯ ಜನ ಬಿಂದಿಗೆ ಹಿಡಿದುಕೊಂಡು ಓಡಾಡುವಂತ ಸ್ಥಿತಿ ಇದೆ. ಆದರೆ ಕುಂದಾನಗರಿ ಬೆಳಗಾವಿಯಲ್ಲಿ ಇಂದು ಭರ್ಜರಿ ಮಳೆಯಾಗಿದೆ.

ಬೆಳಗಾವಿಯಲ್ಲಿ ಈಗಾಗಲೇ ನಿತ್ಯ ಮೋಡ ಕವಿದ ವಾತಾವರಣ ಇರುತ್ತದೆ. ಹೀಗಾಗಿ ವಾತಾವರಣ ತಂಪಾಗಿದೆ. ಕಳೆದ ಕೆಲ ದಿನಗಳಿಂದ ತಣ್ಣನೆಯ ವಾತಾವರಣವಿದ್ದು ಸಂಜೆಯಾದರೆ ಮಳೆ ಮೋಡ ಕಾಣಿಸುತ್ತಿದೆ. ಬೆಳಗಾವಿ ನಗರದಲ್ಲಿ ಗುಡುಗು ಸಹಿತ ಮಳೆಯಾಗುತ್ತಿದೆ. ರಾತ್ರಿ ಮಳೆ ಮತ್ತಷ್ಟು ಜೋರಾಗುವ ಸಾಧ್ಯತೆ ಕೂಡ ಇದೆ.
ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಗುಡುಗು ಸಹಿತ ಇಂದು ಬೆಳಗಾವಿಯ ಚಿಕ್ಕೋಡಿ ಮತ್ತು ರಾಯಭಾಗದಲ್ಲಿ ಮಳೆಯಾಗಿದೆ. ಇದಕ್ಕೆ ಜನರು ಸಂತಸ ವ್ಯಕ್ತಪಡಿಸಿದ್ದಾರೆ. ದಿಢೀರ್ ಮಳೆಯಿಂದಾಗಿ ವಾಹನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾದ್ರೂ ಜನರು ಮೊದಲು ಭೂಮಿ ತಂಪಾಗಲಿ ಎಂದು ಹೇಳುವ ಮಾತುಗಳ ಕೇಳಿ ಬಂದವು.

ಬಿಸಿಲಿನಿಂದ ಸುಸ್ತಾಗಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಚಿಕ್ಕೋಡಿ, ರಾಯಬಾಗ ಭಾಗದಲ್ಲಿ ಮಳೆಯಾಗಿದೆ. ಮಳೆಯಿಂದಾಗಿ ರಸ್ತೆಯಲ್ಲಿ ನೀರು ಹರಿಯಿತು. ಮಧ್ಯಾಹ್ನ ಸುರಿದ ಮಳೆಯಿಂದಾಗಿ ರಸ್ತೆಬದಿ ವ್ಯಾಪಾರಕ್ಕೆ ಅಡಚಣೆ ಉಂಟಾಯ್ತು.
ಈ ವರ್ಷ ಉತ್ತಮ ಮಳೆಯಾಗುವ ನಿರೀಕ್ಷೆಗಳಿವೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಈ ಬಾರಿ ಜೂನ್ ಮೊದಲ ವಾರದಲ್ಲಿಯೇ ಮುಂಗಾರು ಮಾರುತಗಳು ಕೇರಳ ತಲುಪಲಿವೆ ಎನ್ನಲಾಗುತ್ತಿದೆ. ಮಾರ್ಚ್ 27 ಅಥವಾ ಮಾರ್ಚ್ 28ರಂದು ಹವಾಮಾನ ಇಲಾಖೆಯಿಂದ ಅಧಿಕೃತ ಮಾಹಿತಿ ಬರಲಿದೆ ಎಂದು ಸಚಿವ ಕೃಷ್ಣಬೈರೇಗೌಡರು ಹೇಳಿದ್ದಾರೆ.
ಈಗ ಕೆಲ ಬೇರೆ ಬೇರೆ ಏಜೆನ್ಸಿಗಳ ರಿಪೋರ್ಟ್ ಪ್ರಕಾರ ನಮ್ಮ ರಾಜ್ಯದಲ್ಲಿ ವಾಡಿಕೆಗಿಂತ ಜಾಸ್ತಿ ಮಳೆಯಾಗವು ಸಾಧ್ಯತೆ ಇದೆ. ಮಳೆ ಹೆಚ್ಚಾಗಬಹುದು ಎಂಬ ಮುನ್ಸೂಚನೆ ಬರ್ತಿದೆ. ನೋಡೋಣ IMD ಮುನ್ಸೂಚನೆ ಬಂದ ನಂತರ ನಮಗೆ ಅಧಿಕೃತವಾಗಲಿದೆ ಎಂದು ಕೃಷ್ಣಬೈರೇಗೌಡರು ಮಾಹಿತಿ ನೀಡಿದ್ದಾರೆ.
ಕಳೆದ ಶುಕ್ರವಾರ ಬೆಳಗ್ಗೆಯೇ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಹಲವು ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕೊಟೆಕರ್ ಪ್ರದೇಶದಲ್ಲಿ 100 ಮಿಮೀ ಮಳೆಯಾಗಿದೆ. ಮೊದಲ ಬಾರಿಗೆ ರಾಜ್ಯದಲ್ಲಿ ಈ ವರ್ಷ 100 ಮಿಮೀ ಮಳೆ ಸುರಿದಿದೆ, ಅದೂ ಕೂಡ ಮಳೆಗಾಲಕ್ಕೆ ಮುನ್ನವೇ!
ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿ 53 ಮಿಮೀ, ಕಿಣ್ಯಾ 42.5 ಮಿಮೀ ಮಳೆಯಾಗಿದೆ. ಉಡುಪಿ ಜಿಲ್ಲೆಯ ಮಲ್ಲಾರುವಿನಲ್ಲಿ 54.5 ಮಿಮೀ, ಉಳಿಯರಗೋಳಿಯಲ್ಲಿ 22 ಮಿ.ಮೀ ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರದ ವರದಿಯಲ್ಲಿ ತಿಳಿಸಿದೆ.












Click it and Unblock the Notifications