ಸಿಐಡಿಗೂ ಮುನ್ನ ತನ್ವೀರ್ ಗೆ ಕ್ಲೀನ್ ಚಿಟ್ ನೀಡಿದ ಸಿಎಂ ಸಿದ್ದು
ಸಚಿವ ತನ್ವೀರ್ ಸೇಠ್ ಅವರಿಗೆ ಸಿಐಡಿ ಸೈಬರ್ ವಿಭಾಗದ ತಂಡ ಕ್ಲೀನ್ ಚಿಟ್ ನೀಡಿರುವುದು ತಿಳಿದಿರಬಹುದು. ಆದರೆ, ಸಿಐಡಿಯವರು ಕ್ಲೀನ್ ಚಿಟ್ ನೀಡುವ ಮೊದಲೇ ಸಿಎಂ ಸಿದ್ದರಾಮಯ್ಯ ಅವರು ಕ್ಲೀನ್ ಚಿಟ್ ನೀಡಿದ್ದು ಈಗ ಚರ್ಚೆಯ ವಿಷಯವಾಗಿದೆ.
ಬೆಳಗಾವಿ, ಡಿಸೆಂಬರ್ 04: ರಾಯಚೂರಿನಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಸಂದರ್ಭದಲ್ಲಿ ಅರೆನಗ್ನ ಚಿತ್ರ ವೀಕ್ಷಿಸಿದ ಆರೋಪ ಹೊತ್ತಿದ್ದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಅವರಿಗೆ ಸಿಐಡಿ ಸೈಬರ್ ವಿಭಾಗದ ತಂಡ ಕ್ಲೀನ್ ಚಿಟ್ ನೀಡಿರುವುದು ತಿಳಿದಿರಬಹುದು. ಆದರೆ, ಸಿಐಡಿಯವರು ಕ್ಲೀನ್ ಚಿಟ್ ನೀಡುವ ಮೊದಲೇ ಸಿಎಂ ಸಿದ್ದರಾಮಯ್ಯ ಅವರು ಕ್ಲೀನ್ ಚಿಟ್ ನೀಡಿದ್ದು ಈಗ ಚರ್ಚೆಯ ವಿಷಯವಾಗಿದೆ.
ಸಿಎಂ ಸಿದ್ದರಾಮಯ್ಯ ಅವರು ಬೆಳಗಾವಿ ಅಧಿವೇಶನ ಮುಕ್ತಾಯಕ್ಕೂ ಮುನ್ನ ಸದನದಲ್ಲಿ ಮಾತನಾಡುತ್ತಾ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ರಾಜೀನಾಮೆ ನೀಡಬೇಕಾಗಿಲ್ಲ, ಅವರು ಯಾವ ತಪ್ಪನ್ನು ಮಾಡಿಲ್ಲ ಎಂದು ಅಶ್ಲೀಲ ಚಿತ್ರ ವೀಕ್ಷಣೆ ಪ್ರಕರಣದಿಂದ ಆರೋಪ ಮುಕ್ತಗೊಳಿಸಿದರು. [ಅರೆನಗ್ನ ಚಿತ್ರ ವೀಕ್ಷಣೆ: ಸಚಿವ ತನ್ವೀರ್ ಸೇಠ್ ಗೆ ಕ್ಲೀನ್ ಚಿಟ್]

ಸಿಐಡಿ ಸೈಬರ್ ದಳದಿಂದ ವಿಚಾರಣಾ ವರದಿಯನ್ನು ಸುವರ್ಣ ವಿಧಾನಸೌಧದಲ್ಲಿ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದರೂ ಅದನ್ನು ಸದನದಲ್ಲಿ ಚರ್ಚೆಗೆ ಒಳಪಡಿಸಿರಲಿಲ್ಲ. ಈ ವರದಿಯಲ್ಲಿ ತನ್ವೀರ್ ಸೇಠ್ ಗೆ ಫೋಟೋ ನೋಡೋ ಉದ್ದೇಶ ಇರಲಿಲ್ಲ, ವಾಟ್ಸಾಪ್ ನಲ್ಲಿ ಬಂದ ಚಿತ್ರಗಳನ್ನು ಸ್ಕ್ರೋಲ್ ಮಾಡಿ ನೋಡುತ್ತಿದ್ದರು, ತನ್ವೀರ್ ವಿರುದ್ಧ ಯಾವುದೇ ಸಾಕ್ಷಿಯಿಲ್ಲ ಎಂದು ಉಲ್ಲೇಖಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ನವೆಂಬರ್ 10 ರಂದು ರಾಯಚೂರಿನಲ್ಲಿ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಸಚಿವ ತನ್ವೀರ್ ಸೇಠ್ ಅಶ್ಲೀಲ ಚಿತ್ರ ವೀಕ್ಷಿಸಿದ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಬಳಿಕ ತಾನು ಉದ್ದೇಶಪೂರ್ವಕವಾಗಿ ನೋಡಿಲ್ಲ. ಟಿಪ್ಪು ಜಯಂತಿ ವಿರೋಧಿಸಿ ಗಲಾಟೆ, ಬೆಳವಣಿಗೆಗಳ ಬಗ್ಗೆ ವಾಟ್ಸಾಪ್ ಬಂದ ಸಂದೇಶಗಳನ್ನು ನೋಡುತ್ತಿದ್ದೆ ಎಂದು ಸೇಠ್ ಸ್ಪಷ್ಟನೆ ನೀಡಿದ್ದರು. ಆದರೆ, ವಿಪಕ್ಷಗಳು ತನ್ವೀರ್ ರಾಜೀನಾಮೆಗೆ ಆಗ್ರಹಿಸಿದ್ದಕ್ಕೆ ಉತ್ತರವಾಗಿ ಸಿಎಂ ಸಿದ್ದರಾಮಯ್ಯ ಅವರು ಕ್ಲೀನ್ ಚಿಟ್ ನೀಡಿದ್ದಾರೆ. ಆದರೆ, ಸಿಐಡಿ ವರದಿ ಪರಿಶೀಲನೆ ನಡೆಸಿ, ಅಗತ್ಯ ಬಿದ್ದರೆ ಕ್ರಮ ಜರುಗಿಸುವುದಾಗಿ ಗೃಹ ಸಚಿವ ಜಿ ಪರಮೇಶ್ವರ ಅವರು ನೀಡಿದ ಹೇಳಿಕೆ ಬೆಲೆ ಕಳೆದುಕೊಂಡಂತಾಗಿದೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications