ಬೆಳಗಾವಿ : ಗುರುವಾರದ ಕಲಾಪದ ಮುಖ್ಯಾಂಶಗಳು
ಬೆಳಗಾವಿ, ಡಿ. 11 : ಪ್ರಭು ಚೌವಾಣ್ ವಿರುದ್ಧ ಕ್ರಮ ಕೈಗೊಳ್ಳಬೇಕು, ವಸತಿ ಸಚಿವ ಅಂಬರೀಶ್ ರಾಜೀನಾಮೆ ನೀಡಬೇಕು ಎಂಬ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಡುವಿನ ವೈಯಕ್ತಿಕ ಪ್ರತಿಷ್ಠೆಗೆ ಗುರುವಾರದ ಕಲಾಪ ಬಲಿಯಾಗಿದೆ. ಇಂದು ಬೆಳಗ್ಗೆಯಿಂದ ಎರಡು ಬಾರಿ ಸದನವನ್ನು ಮುಂದೂಡಿ, ಸ್ಪೀಕರ್ ಕಚೇರಿಯಲ್ಲಿ ಸರ್ವ ಪಕ್ಷಗಳ ಸಭೆ ನಡೆಸಿದರೂ ಕಲಾಪ ನಡೆಸಲು ಸಾಧ್ಯವಾಗಲಿಲ್ಲ. ಉಭಯ ಪಕ್ಷಗಳ ವಾಕ್ಸಮರದಿಂದಾಗಿ ಕಲಾಪವನ್ನು ಶುಕ್ರವಾರ ಬೆಳಗ್ಗೆ 9.30ಕ್ಕೆ ಸ್ಪೀಕರ್ ಮುಂದೂಡಿದ್ದಾರೆ.
ಕಲಾಪ ಮುಂದೂಡಿಕೆ : ಪ್ರಭು ಚೌವಾಣ್ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಸ್ಪೀಕರ್ ಕಚೇರಿಯಲ್ಲಿ ನಡೆದ ಸರ್ವಪಕ್ಷಗಳ ಸಭೆ ಯಾವುದೇ ನಿರ್ಧಾರವನ್ನು ಕೈಗೊಳ್ಳದೆ ಅಂತ್ಯಗೊಂಡಿದೆ. ನಂತರ ಸದನದಲ್ಲಿ ಕಲಾಪ ಪುನಃ ಆರಂಭವಾಯಿತು. ಆದರೆ, ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ಮಾತಿನ ಚಕಮಕಿಯಿಂದಾಗಿ ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಯಿತು.
ಶೆಟ್ಟರ್ ಪತ್ರಿಕಾಗೋಷ್ಠಿ : ಸದನದ ಹೊರಗೆ ಪತ್ರಿಕಾಗೋಷ್ಠಿ ನಡೆಸಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಕಾಟಾಚಾರಕ್ಕೆ ಸರ್ಕಾರ ಅಧಿವೇಶನ ಕರೆದಿದೆ. ಕಬ್ಬು, ಈರುಳ್ಳಿ ಬೆಳೆಗಾರರ ಸಮಸ್ಯೆ ಬಗ್ಗೆ ಚರ್ಚಿಸಲು ಸರ್ಕಾರಕ್ಕೆ ಆಸಕ್ತಿ ಇಲ್ಲ. ಆದ್ದರಿಂದ ಆಡಳಿತ ಪಕ್ಷದ ಸದಸ್ಯರೇ ಸದನದಲ್ಲಿ ಗಲಾಟೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸ್ಪೀಕರ್ ಕಚೇರಿಯಲ್ಲಿ ಸಭೆ : ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ಕಚೇರಿಯಲ್ಲಿ ಸರ್ವ ಪಕ್ಷಗಳ ಸಭೆ ನಡೆಯುತ್ತಿದೆ. ಕಾಂಗ್ರೆಸ್ ಸದಸ್ಯರು ಪ್ರಭು ಚೌವಾಣ್ ಅವರನ್ನು ಎರಡು ದಿನ ಸದನದಿಂದ ಅಮಾನತುಗೊಳಿಸಬೇಕೆಂದು ಸ್ಪೀಕರ್ ಅವರಿಗೆ ಒತ್ತಾಯಿಸುತ್ತಿದ್ದಾರೆ. ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಇದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಇತ್ತ ವಸತಿ ಸಚಿವ ಅಂಬರೀಶ್ ಮತ್ತು ದಾವಣೆಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಬುಧವಾರ ಸದನದಲ್ಲಿ ಒಟ್ಟಾಗಿ ಮೊಬೈಲ್ನಲ್ಲಿ ವಿಡಿಯೋ ನೋಡುತ್ತಿದ್ದರು. ಸದ್ಯ ಬಿಜೆಪಿ ಸದಸ್ಯರು ಕಲಾಪ ಆರಂಭವಾಗುತ್ತಿದ್ದಂತೆ ಅಂಬರೀಶ್ ರಾಜೀನಾಮೆಗೆ ಒತ್ತಾಯ ಮಾಡಲು ನಿರ್ಧರಿಸಿದ್ದಾರೆ. ಪರಿಷತ್ನಲ್ಲಿಯೂ ಈ ಬಗ್ಗೆ ಒತ್ತಾಯಿಸಲು ಬಿಜೆಪಿ ನಿರ್ಧರಿಸಿದೆ.
ಪರಿಷತ್ ಕಲಾಪದಲ್ಲಿ ಮೊಬೈಲ್ ನಿಷೇಧ : ಲ್ವಿಧಾನಪರಿಷತ್ನಲ್ಲಿಯೂ ಪ್ರಭು ಚೌವಾಣ್ ಪ್ರಕರಣ ಪ್ರತಿಧ್ವನಿಸಿದೆ. ಕಾಂಗ್ರೆಸ್ ಸದಸ್ಯೆ ಮೋಟಮ್ಮ ಅವರು ಈ ಬಗ್ಗೆ ಪರಿಷತ್ನಲ್ಲಿ ವಿಷಯ ಪ್ರಸ್ತಾಪಿಸಿದ್ದಾರೆ. ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ಪರಿಷತ್ನಲ್ಲಿ ಮೊಬೈಲ್ ಸ್ವಿಚ್ ಆಫ್ ಆಗಿರಬೇಕು. ಸದಸ್ಯರು ಮೊಬೈಲ್ ಬಳಸುವುದನ್ನು ಕಂಡರೆ ಕಸಿದುಕೊಳ್ಳಲಾಗುತ್ತದೆ. ವಾಪಸ್ ನೀಡುವ ಬಗ್ಗೆ ನಂತರ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಸದನದಲ್ಲಿ ಚೌವಾಣ್ ಪ್ರಕರಣದ ಪ್ರತಿಧ್ವನಿ : ಬೆಳಗಾವಿ ಚಳಿಗಾಲದ ಅಧಿವೇಶನದ ಮೂರನೇ ದಿನದ ಕಲಾಪ ಆರಂಭವಾಗಿದೆ. ಸದನದಲ್ಲಿ 'ಬಿಜೆಪಿ ಶೇಮ್ ಶೇಮ್' ಎಂದು ಕಾಂಗ್ರೆಸ್ ನಾಯಕರು ಘೋಷಣೆ ಕೂಗುತ್ತಿದ್ದಾರೆ. ಬಿಜೆಪಿ ಶಾಸಕ ಪ್ರಭು ಚೌವಾಣ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಒತ್ತಾಯಿಸುತ್ತಿದ್ದು, ಚೌವಾಣ್ ಸದನಕ್ಕೆ ಆಗಮಿಸಿದ್ದಾರೆ.
ಗುರುವಾರದ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಶಾಸಕರು ಪ್ರಭು ಚೌವಾಣ್ ಫೋಟೋಗಳನ್ನು ನೋಡಿದ ವಿಷಯ ಪ್ರಸ್ತಾಪಿಸಿದರು. ಬಿಜೆಪಿ ಶೇಮ್ ಶೇಮ್ ಎಂದು ಘೋಷಣೆ ಕೂಗಲು ಆರಂಭಿಸಿದರು. ಸಭಾಧ್ಯಕ್ಷರ ಮುಂಭಾಗಕ್ಕೆ ಆಗಮಿಸಿದ ಶಾಸಕರು ಪ್ರತಿಪಕ್ಷ ನಾಯಕ ಶೆಟ್ಟರ್ ಜೊತೆ ಮಾತಿನ ಚಕಮಕಿ ನಡೆಸಿದರು. [ಶಾಸಕ ಚೌವಾಣ್ ಯಾರು?]

ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಪ್ರಭು ಚೌವಾಣ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ. ಕಡೂರು ಶಾಸಕ ವೈ.ಎಸ್.ವಿ.ದತ್ತಾ ಅವರು ಕರ್ನಾಟಕದ ವಿಧಾನಸಭೆಗೆ ದೇಶದಲ್ಲಿಯೇ ಗೌರವವಿದೆ. ಶಾಸಕರ ವರ್ತನೆಯಿಂದಾಗಿ ಇದಕ್ಕೆ ಧಕ್ಕೆ ಬಂದಿದೆ. ಆದ್ದರಿಂದ ಚೌವಾಣ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಮನವಿ ಮಾಡಿದ್ದಾರೆ. [ಬುಧವಾರದ ಕಲಾಪದ ಮುಖ್ಯಾಂಶಗಳು]
ಘಟನೆ ಖಂಡಿಸಿದ ಜಯಚಂದ್ರ : ಸದನದಲ್ಲಿ ಮಾತನಾಡಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು, ಶಾಸಕರು ಗೌರವದಿಂದ ನಡೆದುಕೊಳ್ಳಬೇಕು, ಶಾಸಕರ ಇಂತಹ ವರ್ತನೆ ಸರಿಯಲ್ಲ, ನಿನ್ನೆಯ ಘಟನೆ ವಿಧಾನಸಭೆಗೆ ಕಪ್ಪುಚುಕ್ಕೆ ಎಂದು ಪ್ರಭು ಚೌವಾಣ್ ಅವರ ವರ್ತನೆಯನ್ನು ಖಂಡಿಸಿದರು.
ಘಟನೆ ಖಂಡಿಸಿದ ಶೆಟ್ಟರ್ : ಸದನದಲ್ಲಿ ಮಾತನಾಡಿ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ಇಂತಹ ಕೆಲಸವನ್ನು ಯಾವ ಪಕ್ಷದ ನಾಯಕರು ಮಾಡಿದರೂ ತಪ್ಪು, ಸ್ಪೀಕರ್ ಅವರು ಸದನದವೊಳಗೆ ಮೊಬೈಲ್ ನಿಷೇಧ ಮಾಡುವುದು ಸೇರಿದಂತೆ ಕ್ರಮಗಳನ್ನು ಕೈಗೊಳ್ಳಬಹುದು. ಜನಪ್ರತಿನಿಧಿಗಳಾಗಿ ನಾವು ನಮ್ಮ ವರ್ತನೆಯನ್ನು ತಿದ್ದಿಕೊಳ್ಳಬೇಕು ಎಂದು ಹೇಳಿದರು.
ಕುಮಾರಸ್ವಾಮಿ ಪ್ರತಿಕ್ರಿಯೆ : ಬುಧವಾರ ಸದನಲ್ಲಿ ನಡೆದ ಘಟನೆ ಎಲ್ಲರೂ ತಲೆ ತಗ್ಗಿಸುವಂತಹದ್ದು, ಶಾಸಕರಾಗಿ ನಮಗೆ ನಮ್ಮದೇ ಅದ ಜವಾಬ್ದಾರಿಗಳಿವೆ. ನಮ್ಮ ಇಂತಹ ವರ್ತನೆಯಿಂದ ಮಾಧ್ಯಮಗಳಿಗೆ ಆಹಾರವಾಗುತ್ತಿದ್ದೇವೆ. ಇಂದು ಹಲವಾರು ಗಂಭೀರ ವಿಚಾರಗಳ ಬಗ್ಗೆ ಚರ್ಚೆಗಳು ನಡೆಬೇಕಾಗಿದೆ. ಆದ್ದರಿಂದ ಈ ವಿಷಯದಲ್ಲಿ ಸಮಯ ವ್ಯರ್ಥ ಮಾಡುವುದು ಬೇಡ ಎಂದು ಜೆಡಿಎಸ್ ಶಾಸಕಾಂಗ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.












Click it and Unblock the Notifications