Yamakanmardi Constituency : ಯಮಕನಮರಡಿಯಲ್ಲಿ ಸತೀಶ್ ಜಾರಕಿಹೊಳಿಗೆ ಬಿಜೆಪಿ ಟಕ್ಕರ್? ವಿಶ್ಲೇಷಣೆ
ಈ ಬಾರಿ ಯಮಕನಮರಡಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ನೇರ ಪೈಪೋಟಿ ಇದೆ. ಕಾಂಗ್ರೆಸ್ ಬಿಜೆಪಿ ಸೆಣಸಲಿವೆ. ಇದಕ್ಕೆ ಸಂಬಂಧಿಸಿದ ವರದಿ, ವಿಶ್ಲೇಷಣೆ ಓದಿ.
ಯಮಕನಮರಡಿ, ಫೆಬ್ರವರಿ 20: ರಾಜ್ಯದ ಮಹತ್ವದ ವಿಧಾನಸಭೆ ಕ್ಷೇತ್ರಗಳಲ್ಲಿ ಬೆಳಗಾವಿ ಜಿಲ್ಲೆಯ ಯಮಕನಮರಡಿಯೂ ಒಂದು. ಇದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನಲ್ಲಿದೆ. ಇದು ಹುಕ್ಕೇರಿಯಿಂದ 16 ಕಿಮೀ ಮತ್ತು ಜಿಲ್ಲಾ ಕೇಂದ್ರ ಬೆಳಗಾವಿಯಿಂದ 35 ಕಿಮೀ ದೂರದಲ್ಲಿದೆ. 2009 ರಲ್ಲಿ ಯಮಕನಮರಡಿ ಗ್ರಾಮ ಪಂಚಾಯ್ತಿ ಆಗಿತ್ತು. ಈಗ ಪಟ್ಟಣ ಪಂಚಾಯತಿ ಆಗಿದೆ.
ಈ ಪಟ್ಟಣ ಪಂಚಾಯ್ತು ಒಟ್ಟು ಭೌಗೋಳಿಕ ವಿಸ್ತೀರ್ಣ 676.78 ಹೆಕ್ಟೇರ್ ಆಗಿದ್ದು, ಇಲ್ಲಿ ಕಪ್ಪು ಹಾಗೂ ಕೆಂಪು ಕಣ್ಣು ಕಂಡುಬರುತ್ತದೆ. ಯಮಕನಮರಡಿ ಕ್ಷೇತ್ರದಲ್ಲಿ ಕೃಷಿ ಪ್ರಧಾನ ಕಸುಬಾಗಿದೆ. ರೈತರು ಕಬ್ಬನ್ನು ಹೆಚ್ಚು ಬೆಳೆಯುತ್ತಾರೆ. ಹುಕ್ಕೇರಿ ಸೇರಿದಂತೆ ಸುತ್ತಮುತ್ತಲ ಕ್ಷೇತ್ರಗಳಲ್ಲಿ ಸಕ್ಕರೆ ಕಾರ್ಖಾನೆಗಳು ಹೆಚ್ಚಿವೆ. ಹೀಗಾಗಿ, ರೈತರು ಕಬ್ಬಿನ ಆಸರೆಯನ್ನು ಹೆಚ್ಚು ಬಯಸುತ್ತಾರೆ. ಇನ್ನು ಈ ಕ್ಷೇತ್ರದಲ್ಲಿ ಹತ್ತಿ, ಹೆಸರು, ಕಡಲೆ, ಶೇಂಗಾ, ಈರುಳ್ಳಿ ಸೇರಿದಂತೆ ಹತ್ತು ಹಲವು ಬೆಳೆಗಳನ್ನು ರೈತರು ಬೆಳೆಯುತ್ತಾರೆ. ಹುಕ್ಕೇರಿ ತಾಲ್ಲೂಕಿನ ಪ್ರಮುಖ ಆರ್ಥಿಕ ಚಟುವಟಿಕೆಗಳಿಗೆ ಯಮಕನಮರಡಿ ಹತ್ತಿರದ ಪಟ್ಟಣವಾಗಿದೆ.
ಯಮಕನಮರಡಿ ಕ್ಷೇತ್ರದಲ್ಲಿ ಬರುವ ಪ್ರಮುಖ ಗ್ರಾಮಗಳೆಂದರೆ, ಹಟ್ಟಿಆಲೂರು, ನಡಿಗುಡಿಕೇತ್ರ, ಅಂಕಲಗುಡಿಕೇತ್ರ, ಘೋಡಗೇರಿ, ತಾನಹತ್ತರಗಿ, ಜಿನರಾಲ್, ಗುಡಗನಹಟ್ಟಿ, ಮಾಸ್ತಿಹೊಳಿ, ದಡಬನಹಟ್ಟಿ, ಮಂಗುತ್ತಿ ಹಾಗೂ ಬೆನಕನಹೊಳಿ.

ಯಮಕನಮರಡಿ ಕ್ಷೇತ್ರದ ರಾಜಕೀಯ ಚರಿತ್ರೆ
ಯಮಕನಮರಡಿ ಕ್ಷೇತ್ರವು 2008ರಲ್ಲಿ ರೂಪುಗೊಂಡಿತು. ಇದು ಮೀಸಲಾತಿ ಕ್ಷೇತ್ರವಾಗಿದೆ. ನಾಯಕ ಸಮುದಾಯಕ್ಕೆ ಸೇರಿದ ಕಾಂಗ್ರೆಸ್ನ ಸತೀಶ್ ಜಾರಕಿಹೊಳಿ ಅವರೇ 2008 ರಿಂದ ಆಯ್ಕೆಯಾಗಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿ ಬಲಿಷ್ಠವಾಗಿದ್ದರೂ, ಜಾರಿಕಿಹೊಳಿ ಕುಟುಂಬದ ಹಿಡಿತವಿದೆ. ಹುಕ್ಕೇರಿಯ ಕತ್ತಿ ಕುಟುಂಬ ಹಾಗೂ ಜಾರಕಿಹೊಳಿ ಕುಟುಂಬದ ಪ್ರತಿಷ್ಠೆಯ ಕದನಕ್ಕೆ ಈ ಕ್ಷೇತ್ರ ಸಾಕ್ಷಿಯಾಗಿದೆ. ಆದರೂ, ಸತೀಶ್ ಜಾರಕಿಜೊಳಿ ವಿರುದ್ಧ ಬಿಜೆಪಿಗೆ ಒಂದು ಬಾರಿಯೂ ಗೆಲುವು ಸಾಧಿಸುವುದಕ್ಕೆ ಸಾಧ್ಯವಾಗಿಲ್ಲ. ಅಹಿಂದ ನಾಯಕರಾಗಿರುವ ಸತೀಶ್ ಜಾರಕಿಹೊಳಿ ಈ ಕ್ಷೇತ್ರದ ಮೇಲೆ ಸಂಪೂರ್ಣ ಹಿಡಿತ ಹೊಂದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

2018ರಲ್ಲಿ ಜಾರಕಿಹೊಳಿ ಟಕ್ಕರ್ ನೀಡಿದ್ದ ಬಿಜೆಪಿ
ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿಗೆ ಬಿಜೆಪಿ ಟಕ್ಕರ್ ನೀಡಿತ್ತು. ಜಾರಕಿಜೊಳಿ ಕುಟುಂಬದ ಪ್ರತಿಷ್ಠೆಯನ್ನು ಶತಾಯುಗತಾಯ ಕುಗ್ಗಿಸಲೇಬೇಕೆಂದು ಕತ್ತಿ ಸಹೋದರಾರ ಉಮೇಶ್ ಕತ್ತಿ ಹಾಗೂ ರಮೇಶ್ ಕತ್ತಿ ಹೋರಾಡಿದ್ದರು. ಯಮಕನಮರಡಿ ಕ್ಷೇತ್ರದ ಹಳ್ಳಿಗಳಲ್ಲಿ ಸಂಚರಿಸಿ ಪ್ರಚಾರ ಮಾಡಿದ್ದರು. ಈ ಹಿನ್ನೆಲೆಯಲ್ಲಿ, ಸತೀಶ್ ಜಾರಕಿಹೊಳಿಗೆ ಭಾರೀ ಪೈಪೋಟಿ ಎದುರಾಗಿತ್ತು. ಈ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಮಾರುತಿ ಅಷ್ಟಗಿ ಅವರು 2850 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಈ ಕ್ಷೇತ್ರದಲ್ಲಿ ಬರುವ ಹೆಬ್ಬಾಳ, ಪಾಶ್ಚಾಪುರ ಮತ್ತು ದಡ್ಡಿ ಜಿಲ್ಲಾ ಪಂಚಾಯತಿ ಕ್ಷೇತ್ರಗಳಲ್ಲಿ ಬಿಜೆಪಿ ಶಕ್ತವಾಗಿದೆ. ಆದರೆ, ಹುದಲಿ, ಕಾಕತಿ ಮತ್ತು ಕಡೋಲಿ ಜಿಲ್ಲಾ ಪಂಚಾಯತಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ನದ್ದೇ ದರ್ಬಾರಿದೆ.

ಸತೀಶ್ ಜಾರಕಿಹೊಳಿ ಕಾಂಗ್ರೆಸ್ನ ಪ್ರಭಾವಿ ನಾಯಕ
ಪ್ರಸ್ತುತ ಯಮನಕನಮರಡಿ ಕ್ಷೇತ್ರದ ಶಾಸಕರಾಗಿರುವ ಸತೀಶ್ ಜಾರಕಿಹೊಳಿ ಕಾಂಗ್ರೆಸ್ನ ಪ್ರಭಾವಿ ನಾಯಕರಾಗಿದ್ದಾರೆ. ಅವರು ಮಾಜಿ ಸಿಎಂ ಸಿದ್ದರಾಮಯ್ಯನವರ ಆಪ್ತರೂ ಹೌದು. ಅಹಿಂದ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾರೆ. 22 ಡಿಸೆಂಬರ್ 2018 ರಿಂದ 23 ಜುಲೈ 2019 ರವರೆಗೆ ಕರ್ನಾಟಕ ಸರ್ಕಾರದ ಅರಣ್ಯ, ಪರಿಸರ ಮತ್ತು ಪರಿಸರ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 2008 ರಿಂದ ಯಮಕನಮರಡಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಅವರು ಎಚ್ಡಿ ಕುಮಾರಸ್ವಾಮಿ ಸಂಪುಟದಲ್ಲಿ ಅರಣ್ಯ ಮತ್ತು ಪರಿಸರ ಸಚಿವರಾಗಿದ್ದರು. ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಅಬಕಾರಿ ಸಚಿವರಾಗಿದ್ದರು.

ಯಮಕನಮರಡಿ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳು
ಯಮಕನಮರಡಿಯಲ್ಲಿ ಈ ಬಾರಿಯೂ ಕಾಂಗ್ರೆಸ್ನಿಂದ ಸತೀಶ್ ಜಾರಕಿಹೊಳಿ ಅವರೇ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಒಂದು ವೇಳೆ, ಯಮಕನಮರಡಿಯಲ್ಲಿ ಜಾರಕಿಹೊಳಿ ಸ್ಪರ್ಧಿಸದೇ ಬೇರೆ ಕ್ಷೇತ್ರಕ್ಕೆ ಹೋದರೆ, ಅವರ ಪುತ್ರಿ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿಬಂದಿವೆ. ಇನ್ನು ಬಿಜೆಪಿಯಿಂದ ಮಾರುತಿ ಅಷ್ಟಗಿ, ಜೆಡಿಎಸ್ನಿಂದ ಶಂಕರ್ ಬರ್ಮ ಗಸ್ತಿ ಸ್ಪರ್ಧಿಸುವ ಸಾಧ್ಯತೆಗಳಿವೆ.
ಕ್ಷೇತ್ರದ ಮತದಾರ ವಿವರ (2018ರಲ್ಲಿ ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ)
ಪುರುಷರು: 93,481
ಮಹಿಳೆಯರು - 93,368
ಒಟ್ಟು: 1,86,859












Click it and Unblock the Notifications