ಮರಾಠಿ ಪುಂಡರಿಂದ ಕೆಎಸ್ಆರ್ಟಿಸಿ ಕಂಡಕ್ಟರ್ ಮೇಲೆ ಹಲ್ಲೆ; ಭುಗಿಲೆದ್ದ ಕನ್ನಡಿಗರ ಆಕ್ರೋಶ
ಕರ್ನಾಟಕದಲ್ಲಿ ಕನ್ನಡಿಗರ ಮೇಳೆ ಪರಭಾಷಿಕರ ದಬ್ಬಾಳಿಕೆ ಹೊಸದೇನಲ್ಲ. ಶುಕ್ರವಾರ ಬೆಳಗಾವಿಯಲ್ಲಿ ಮರಾಠಿ ಪುಂಡರು ಸರ್ಕಾರಿ ಬಸ್ ನಿರ್ವಾಹಕನ ಮೇಲೆ ಮನ ಬಂದಂತೆ ಥಳಿಸಿದ್ದಾರೆ. ವಯಸ್ಸಾಗಿದೆ ಎನ್ನುವುದನ್ನು ಕೂಡ ನೋಡದೆ ಹೊಡೆದಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಮರಾಠಿ ಬರುವುದಿಲ್ಲ ಎನ್ನುವ ಕಾರಣಕ್ಕೆ ಮರಾಠಿ ಪುಂಡರು ಕನ್ನಡ ನಾಡಲ್ಲೇ ಕನ್ನಡಿಗನಿಗೆ ಹೊಡೆದಿದ್ದಾರೆ.
ಬೆಳಗಾವಿ ತಾಲೂಕಿನ ಸಣ್ಣ ಬಾಳೆಕುಂದ್ರಿಯಲ್ಲಿ ಈ ಘಟನೆ ನಡೆದಿದೆ. ಮರಾಠಿ ಮಾತನಾಡಲು ಬರುವುದಿಲ್ಲ ಎಂದಿದ್ದಕ್ಕೆ ಕೆಎಸ್ಆರ್ ಟಿಸಿ ಚಾಲಕ ಮತ್ತು ನಿರ್ವಾಹಕನ ಮೇಲೆ ಹಲ್ಲೆ ಮಾಡಲಾಗಿದೆ. ಗಾಯಗೊಂಡಿರುವ ನಿರ್ವಾಹಕ ಮಹಾದೇವ ಹುಕ್ಕೇರಿ ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಮಾಧ್ಯಮಗಳು ಮುಂದೆ ಘಟನೆಯ ಬಗ್ಗೆ ವಿವರಣೆ ನೀಡಿದ ಮಹಾದೇವ ಹುಕ್ಕೇರಿ ಕಣ್ಣೀರು ಹಾಕಿದ್ದಾರೆ. ಬೆಳಗಾವಿ ನಗರ ಸಾರಿಗೆ ಬಸ್ ನಿಲ್ದಾಣದಿಂದ ಯುವಕ ಹಾಗೂ ಯುವತಿ ಬಸ್ ಹತ್ತಿದ್ದಾರೆ ಟಿಕೆಟ್ ಪಡೆಯುವಂತೆ ಕಂಡಕ್ಟರ್ ಮಹಾದೇವ ಕನ್ನಡದಲ್ಲಿ ಕೇಳಿದ್ದಕ್ಕೆ ಯುವರಿ ಆಧಾರ್ ಕಾರ್ಡ್ ತೋರಿಸಿ ಎರಡು ಉಚಿತ ಟಿಕೆಟ್ ಕೇಳಿದ್ದಾರೆ. ಮಹಿಳೆಯರಿಗೆ ಮಾತ್ರ ಉಚಿತವಿದ್ದು, ಯುವಕ ಟಿಕೆಟ್ ಪಡೆಯಬೇಕು ಎಂದು ಮಹಾದೇವ ತಿಳಿಸಿದ್ದಾರೆ.
ಇದರಿಂದ ಸಿಟ್ಟುಗೊಂಡಿರುವ ಯುವಕ ಮರಾಠಿಯಲ್ಲಿ ಮಹಾದೇವ ಅವರಿಗೆ ನಿಂದಿಸಲು ಆರಂಭಿಸಿದ್ದಾನೆ. ಕನ್ನಡದಲ್ಲಿ ಯಾಕೆ ಬೊಗಳುತ್ತೀಯಾ ಮರಾಠಿ ಕಲಿ ಎಂದು ಬೆದರಿಕೆ ಹಾಕಿದ್ದಾನೆ, ನಮ್ಮೂರಿಗೆ ಬಂದಾಗ ನಿನ್ನ ನೋಡಿಕೋತಿನಿ ಎಂದಿದ್ದಲ್ಲದೆ, ಬಸ್ ಬಾಳೆಕುಂದ್ರಿಗೆ ಬಂದಾಗ ಹಲವರನ್ನು ಫೋನ್ ಮಾಡಿ ಕರೆಸಿಕೊಂಡು ನಿರ್ವಾಹಕ ಮತ್ತು ಚಾಲಕನ ಮೇಲೆ ಹಲ್ಲೆ ಮಾಡಿದ್ದಾನೆ.
ಕನ್ನಡಿಗರ ಆಕ್ರೋಶ
ಮರಾಠಿ ಪುಂಡರ ವರ್ತನೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕನ್ನಡ ಪರ ಸಂಘಟನೆಗಳು ಮರಾಠಿ ಪುಂಡರ ವಿರುದ್ಧ ಹಲವು ಕಡೆಗಳಲ್ಲಿ ಪ್ರತಿಭಟನೆ ಮಾಡಲಾಗಿದೆ. ಮಹಾರಾಷ್ಟ್ರಕ್ಕೆ ಸೇರಿದ ಬಸ್ಗಳನ್ನು ತಡೆದು ಪ್ರತಿಭಟನೆ ನಡೆಸಿದ್ದಲ್ಲದೆ ಹಲವು ಕಡೆ ಮಸಿ ಕೂಡ ಬಳಿಯಲಾಗಿದೆ.
ಕರ್ನಾಟಕದಲ್ಲಿ ಕನ್ನಡಿಗರು, ಅದರಲ್ಲೂ ಸರ್ಕಾರಿ ನೌಕರರ ಮೇಲೆ ರಾಜಾರೋಷವಾಗಿ ಹಲ್ಲೆ ಮಾಡಿದ್ದಾರೆ ಎಂದರೆ ಅವರಿಗೆ ಕಾನೂನಿನ ಭಯ ಇನ್ನೆಷ್ಟಿರಬೇಕು ಎಂದು ಕನ್ನಡಿಗರು ಪ್ರಶ್ನೆ ಮಾಡಿದ್ದಾರೆ. ಕೂಡಲೇ ಹಲ್ಲೆ ಮಾಡಿದವರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕನ್ನಡಪರ ಸಂಘಟನೆಗಳು ಘಟನೆಯನ್ನು ಖಂಡಿಸಿ ಬೃಹತ್ ಪ್ರತಿಭಟನೆ ಮಾಡಲು ಕೂಡ ಯೋಜಿಸುತ್ತಿವೆ.












Click it and Unblock the Notifications