ಪ್ರತಿಭಟನೆ ಬಿಟ್ಟು ಚರ್ಚೆಗೆ ಬನ್ನಿ : ಕಾಗೋಡು ಕರೆ
ಬೆಳಗಾವಿ, ಡಿ.8 : ಸುವರ್ಣಸೌಧದಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅವಕಾಶವಿದೆ. ಪ್ರತಿಭಟನೆಯ ಮಾರ್ಗ ಬಿಟ್ಟು ಅಧಿವೇಶನದಲ್ಲಿ ಭಾಗವಹಿಸುವಂತೆ ವಿಧಾನಸಭೆಯ ಅಧ್ಯಕ್ಷ ಕಾಗೋಡು ತಿಮ್ಮಪ್ಪ ಪ್ರತಿಪಕ್ಷಗಳಿಗೆ ಕರೆ ನೀಡಿದ್ದಾರೆ.
ಸೋಮವಾರ ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು, ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ನಡೆಸಲು, ಸಚಿವರಿಗೆ ಪ್ರಶ್ನೆ ಕೇಳದೆ ಬಹಿಷ್ಕಾರ ಹಾಕಲು ಪ್ರತಿಪಕ್ಷಗಳಿಗೆ ಅವಕಾಶವಿದೆ ಎಂದರು ಹೇಳಿದರು. [ಬೆಳಗಾವಿ ಅಧಿವೇಶನ ಹೋರಾಟಗಳ ಕರ್ಮಭೂಮಿ!]

ವಿಧಾನಸಭೆ ಕಲಾಪದಲ್ಲಿ ಪ್ರತಿಪಕ್ಷಗಳು ಪಾಲ್ಗೊಂಡರೆ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಆದ್ದರಿಂದ ಪ್ರತಿಭಟನೆಯ ನಿರ್ಧಾರವನ್ನು ಕೈಬಿಟ್ಟು ಅಧಿವೇಶನದಲ್ಲಿ ಪಾಲ್ಗೊಳ್ಳಿ ಎಂದು ಸ್ಪೀಕರ್ ಕರೆ ನೀಡಿದರು. [ಅಧಿವೇಶನ : ನಾಲ್ವರು ಸಚಿವರು ಬಿಜೆಪಿ ಟಾರ್ಗೆಟ್]
ಡಿ.10 ರಿಂದ 20ರವರೆಗೆ ಚಳಿಗಾಲದ ಅಧಿವೇಶನ ನಡೆಯಲಿದ್ದು, ಡಿ.13ರ 2ನೇ ಶನಿವಾರ, ಡಿ.14ರ ಭಾನುವಾರ ಮಾತ್ರ ರಜೆ ಇದೆ. ಅಧಿವೇಶನಕ್ಕಾಗಿ 1352 ಪ್ರಶ್ನೆಗಳನ್ನು ಸ್ವೀಕರಿಸಲಾಗಿದೆ. ಅದರಲ್ಲಿ 1115 ಚುಕ್ಕೆ ಗುರುತಿನ ಪ್ರಶ್ನೆಗಳಾಗಿವೆ. 113 ಗಮನ ಸೆಳೆವ ಪ್ರಶ್ನೆಗಳಿವೆ ಎಂದು ಕಾಗೋಡು ತಿಮ್ಮಪ್ಪ ಮಾಹಿತಿ ನೀಡಿದರು.
ಮೂರು ವಿಧೇಯಕಗಳು : ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಮೂರು ವಿಧೇಯಕಗಳನ್ನು ಮಂಡಿಸಲಾಗುತ್ತದೆ. ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರಸ್ತಾಪಿಸಿರುವ ಎಸ್ಮಾ ಜಾರಿ ಸಂಬಂಧ ವಿಧೇಯಕ, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕವನ್ನು ಸರ್ಕಾರ ವಾಪಸ್ ಪಡೆಯಲು ಮುಂದಾಗಿದ್ದು, ಈ ಕುರಿತು ಅಧಿವೇಶನದಲ್ಲಿ ಚರ್ಚೆ ನಡೆಯಲಿದೆ.












Click it and Unblock the Notifications