ಕಾಗವಾಡ ಉಪ ಚುನಾವಣೆ; ಬಿಜೆಪಿಗೆ ಹಿನ್ನಡೆ ತಂದ ಮಾಜಿ ಶಾಸಕ
ಬೆಳಗಾವಿ, ನವೆಂಬರ್ 05 : ಕಾಗವಾಡ ಕ್ಷೇತ್ರದ ಉಪ ಚುನಾವಣೆ ಬಿಜೆಪಿ ಟಿಕೆಟ್ ಯಾರಿಗೆ?. ಈ ಬಗ್ಗೆ ಇನ್ನೂ ಪಕ್ಷದ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಬಿಜೆಪಿ ನಾಯಕರ ವಿರುದ್ಧ ಅಸಮಾಧಾನಗೊಂಡಿರುವ ಮಾಜಿ ಶಾಸಕ ರಾಜು ಕಾಗೆ ಬಿಜೆಪಿ ತೊರೆಯುವ ಸೂಚನೆ ನೀಡಿದ್ದಾರೆ.
ಕಾರ್ಯಕರ್ತರ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ರಾಜು ಕಾಗೆ, "ಶೀಘ್ರವೇ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ" ಎಂದು ಹೇಳಿದರು. ಕಾಗವಾಡ ಕ್ಷೇತ್ರದ ರಾಜಕೀಯದಲ್ಲಿ ಈ ಹೇಳಿಕೆ ಚರ್ಚೆಗೆ ಕಾರಣವಾಗಿದೆ.
2018ರ ಚುನಾವಣೆಯಲ್ಲಿ ಕಾಂಗ್ರೆಸ್ನ ಶ್ರೀಮಂತ ಪಾಟೀಲ 83,060 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಈಗ ಶಾಸಕ ಸ್ಥಾನದಿಂದ ಅವರು ಅನರ್ಹರಾಗಿದ್ದಾರೆ. ಡಿಸೆಂಬರ್ 5ರಂದು ಉಪ ಚುನಾವಣೆ ನಡೆಸಲು ದಿನಾಂಕ ನಿಗದಿಯಾಗಿದೆ.
ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದು ಸೋತಿದ್ದ ರಾಜು ಕಾಗೆ ಉಪ ಚುನಾವಣೆ ಟಿಕೆಟ್ ತಮಗೆ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಕಾಗವಾಡ ಅಥವ ಅಥಣಿ ಕ್ಷೇತ್ರದಿಂದ ಉಪ ಚುನಾವಣೆ ಕಣಕ್ಕಿಳಿಯುತ್ತೇನೆ ಎಂದು ಘೋಷಣೆ ಮಾಡಿದ್ದಾರೆ.

ರಾಜು ಕಾಗೆ ಹೇಳಿದ್ದೇನು?
"ಶೀಘ್ರವೇ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ. ಕಾಗವಾಡ ಅಥವ ಅಥಣಿ ಕ್ಷೇತ್ರದಿಂದ ಉಪ ಚುನಾವಣೆ ಕಣಕ್ಕಿಳಿಯುತ್ತೇನೆ" ಎಂದು ರಾಜು ಕಾಗೆ ಹೇಳಿದ್ದಾರೆ.

ಬಿಜೆಪಿಗೆ ಇಕ್ಕಟ್ಟು
ಉಪ ಚುನಾವಣೆಯಲ್ಲಿ ಅನರ್ಹ ಶಾಸಕ ಶ್ರೀಮಂತ ಪಾಟೀಲ್ ಪುತ್ರ ಶ್ರೀನಿವಾಸ ಪಾಟೀಲ್ಗೆ ಟಿಕೆಟ್ ನೀಡಲು ಬಿಜೆಪಿ ಬಯಸಿತ್ತು. ಆದರೆ, ರಾಜು ಕಾಗೆ ನಡೆ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. "ಉಪ ಚುನಾವಣೆ ಟಿಕೆಟ್ ಹಂಚಿಕೆ ಮಾಡುವಾಗ ನಿಷ್ಠಾವಂತರನ್ನು ಕಡೆಗಣಿಸಬೇಡಿ" ಎಂಬುದು ರಾಜು ಕಾಗೆ ಮನವಿಯಾಗಿದೆ.

32 ಸಾವಿರ ಮತಗಳ ಸೋಲು
2018ರ ಚುನಾವಣೆಯಲ್ಲಿ ರಾಜು ಕಾಗೆ ಕಾಗವಾಡದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದರು. 50118 ಮತಗಳನ್ನು ಪಡೆದು ಕಾಂಗ್ರೆಸ್ನ ಶ್ರೀಮಂತ ಪಾಟೀಲ್ ವಿರುದ್ಧ 32,942 ಮತಗಳ ಅಂತರದಿಂದ ಸೋಲು ಕಂಡಿದ್ದರು. ಆದ್ದರಿಂದ, ಉಪ ಚುನಾವಣೆ ಟಿಕೆಟ್ ನೀಡುವ ಬಗ್ಗೆ ಬಿಜೆಪಿ ಖಾತ್ರಿ ನೀಡಿಲ್ಲ.

ಹುಬ್ಬಳ್ಳಿ ಸಭೆಗೆ ಗೈರು
ಉಪ ಚುನಾವಣೆ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಹುಬ್ಬಳ್ಳಿಯಲ್ಲಿ ಸಭೆ ನಡೆಸಿದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ನಡೆದ ಸಭೆ ರಾಜು ಕಾಗೆ ಗೈರಾಗಿದ್ದರು. ಸಭೆಗೆ ಬಂದಿದ್ದ ಅವರ ಬೆಂಬಲಿಗರು ಟಿಕೆಟ್ ರಾಜು ಕಾಗೆಗೆ ಕೊಡಬೇಕು ಎಂದು ಒತ್ತಾಯಿಸಿದ್ದರು.












Click it and Unblock the Notifications