ಸಿಎಂ ಬೇಕಾದ್ರೆ ಅವರಪ್ಪನ ಮೇಲೆ ಆಣೆ ಹಾಕೊಳ್ಳಿː ಎಚ್ಡಿಕೆ
Recommended Video

ಬೆಳಗಾವಿ, ಜನವರಿ 05: ರಾಜ್ಯದ 224 ಕ್ಷೇತ್ರಗಳಲ್ಲಿಯೂ ಜೆಡಿಎಸ್ ಅಭ್ಯರ್ಥಿಗಳನ್ನು ನಿಲ್ಲಿಸುತ್ತೇನೆ. 113 ಸೀಟುಗಳನ್ನು ಗೆಲ್ಲಿಸುವ ಗುರಿ ಇಟ್ಟು ಪಕ್ಷದ ಸಂಘಟನೆ ಮಾಡುತ್ತಿದ್ದೇನೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಭಾವಿ ಹಾಗು ದೊಡ್ಡ ದೊಡ್ಡ ನಾಯಕರ ಮನೆ ಬಾಗಿಲು ಕಾಯದೆ, ಕೆಳಹಂತದ ನಾಯಕರನ್ನು ಗುರುತಿಸಿ ಅವರಿಗೆ ಟಿಕೆಟ್ ಕೊಡುವ ನಿರ್ಧಾರ ಮಾಡಿದ್ದೇನೆ ಎಂದು ಅವರು ಬೆಳಗಾವಿಯಲ್ಲಿ ಶುಕ್ರವಾರ ಹೇಳಿದರು.
ಸಿದ್ದರಾಮಯ್ಯ ಪ್ರತಿಯೊಂದು ಕಾರ್ಯಕ್ರಮದಲ್ಲಿ, 'ಅವರಪ್ಪನ ಮೇಲೆ ಆಣೆ ಅವರು ಸರ್ಕಾರ ರಚಿಸಲ್ಲ' ಅಂತ ಹೇಳ್ತಾರೆ. ನಮ್ಮಪ್ಪಂದಿರೇನು ಇವರಿಗೆ ಬಿಟ್ಟಿ ಸಿಕ್ಕಿದ್ದಾರಾ? ಬೇಕಾದ್ರೆ ಸಿಎಂ ಅವರಪ್ಪನ ಮೇಲೆ ಆಣೆ ಹಾಕೊಳ್ಳಿ ಎಂದು ಕುಮಾರಸ್ವಾಮಿ ಸಿಎಂ ಸಿದ್ರಾಮಯ್ಯನವರಿಗೆ ತಿರುಗೇಟು ನೀಡಿದರು.
ಮುಖ್ಯಮಂತ್ರಿ ಸ್ಥಾನದ ಘನತೆ ಗೌರವ ಕಡಿಮೆ ಮಾಡಬೇಡಿ. ಸಿದ್ರಾಮಯ್ಯನವರೇ ನೀವ್ ಯಾವ ಯಾವ ಟೈಮಲ್ಲಿ ಯಾರ್ಯಾರ ಕಾಲ್ ಹಿಡಿದ್ರಿ ಅನ್ನೋದು ನಂಗೆ ಗೊತ್ತಿದೆ. ಜೆಡಿಎಸ್ ಪಕ್ಷದಲ್ಲಿ ಡಿಸಿಎಂ ಆಗಿ ಕೆಲಸ ಮಾಡಿದ್ದೀರಿ. ಆವಾಗ ಜೆಡಿಎಸ್ ಅಪ್ಪ ಮಕ್ಕಳ ಪಕ್ಷ ಅಂತ ಗೊತ್ತಿರಲಿಲ್ವಾ? ಬಹಳ ಹಗುರವಾಗಿ ಮಾತನಾಡಬೇಡಿ ಎಂದು ಸಿಎಂಗೆ ಹೆಚ್ಡಿಕೆ ಚಾಟಿ ಬೀಸಿದರು.

ಜೆಡಿಎಸ್ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಲಿ
ಸಿದ್ರಾಮಯ್ಯ ಯಾರು ಅನ್ನೋದು ಈ ರಾಜ್ಯದ ಜನರಿಗೆ ಗೊತ್ತಾಗಿದ್ದು ಜೆಡಿಎಸ್ ಪಕ್ಷದಿಂದ. ಈಗ ಜೆಡಿಎಸ್ ಪಕ್ಷ ಅಪ್ಪ ಮಕ್ಕಳ ಪಕ್ಷ ಎಂದು ಹೇಳುತ್ತಿರುವ ಸಿದ್ರಾಮಯ್ಯ, ಜೆಡಿಎಸ್ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಲಿ, ಇಲ್ಲ ಅಂದ್ರೆ ರಾಜ್ಯದ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

ಸಾವಿನ ಮನೆಯಲ್ಲಿ ರಾಜಕಾರಣ ಮಾಡುತ್ತಿವೆ
ಕರಾವಳಿಯಲ್ಲಿ ನಡೆಯುತ್ತಿರುವ ಕೋಮು ಗಲಭೆಯ ವಿಚಾರದಲ್ಲಿ ಕಾಂಗ್ರೆಸ್ ಹಾಗು ಬಿಜೆಪಿ ಸಾವಿನ ಮನೆಯಲ್ಲಿ ರಾಜಕಾರಣ ಮಾಡುತ್ತಿವೆ. ಗಲಭೆಗಳನ್ನು ನಿಯಂತ್ರಣ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ದೀಪಕ್ ಎಂಬ ಯುವಕನನ್ನು ಕೊಲೆ ಮಾಡಿದ ಆರೋಪಿಗಳ ಬಂಧನವಾಗಿ ನಾಲ್ಕು ದಿನ ಕಳೆದಿವೆ. ಕೊಲೆಗೆ ಕಾರಣ ಏನು ಎಂಬುದನ್ನು ಪತ್ತೆ ಮಾಡಲು ಈ ಸರ್ಕಾರದಿಂದ ಸಾಧ್ಯವಾಗಿಲ್ಲ ಎಂದು ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಮದ್ಯದ ದರ ಹೆಚ್ಚಿಸಿ ಬಡವರ ಜೇಬಿಗೆ ಕತ್ತರಿ
ಸರ್ಕಾರ ರಾಜ್ಯದ ಜನರಿಗೆ ಅನ್ನಭಾಗ್ಯ ನೀಡಿ, ಮದ್ಯದ ದರ ಹೆಚ್ಚಿಸಿ ಬಡವರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.
ಮುಂಬರುವ ಚುನಾವಣೆಯಲ್ಲಾಗಲಿ ಅಥವಾ ಚುನಾವಣೆ ನಡೆದು ಅತಂತ್ರ ಪರಿಸ್ಥಿತಿ ನಿರ್ಮಾಣವಾದಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್ ಜೊತೆ ಕೈ ಜೋಡಿಸುವುದಿಲ್ಲ ಎಂದು ಖಂಡತುಂಡವಾಗಿ ಹೇಳಿದರು.

113 ಸೀಟುಗಳನ್ನು ಗೆಲ್ಲಿಸುವ ಗುರಿ
ರಾಜ್ಯದ 224 ಕ್ಷೇತ್ರಗಳಲ್ಲಿಯೂ ಜೆಡಿಎಸ್ ಅಭ್ಯರ್ಥಿಗಳನ್ನು ನಿಲ್ಲಿಸುತ್ತೇನೆ. 113 ಸೀಟುಗಳನ್ನು ಗೆಲ್ಲಿಸುವ ಗುರಿ ಇಟ್ಟು ಪಕ್ಷದ ಸಂಘಟನೆ ಮಾಡುತ್ತಿದ್ದೇನೆ. ಪ್ರಭಾವಿ ಹಾಗು ದೊಡ್ಡ ದೊಡ್ಡ ನಾಯಕರ ಮನೆ ಬಾಗಿಲು ಕಾಯದೇ ಕೆಳಹಂತದ ನಾಯಕರನ್ನು ಗುರುತಿಸಿ ಅವರಿಗೆ ಟಿಕೆಟ್ ಕೊಡುವ ನಿರ್ಧಾರ ಮಾಡಿದ್ದೇನೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕದಿಂದ ಕನಿಷ್ಠ 45 ಸೀಟು ಗೆಲ್ಲುವ ವಿಶ್ವಾಸ
ಉತ್ತರ ಕರ್ನಾಟಕದಿಂದ ಕನಿಷ್ಠ 45 ಸೀಟು ಗೆಲ್ಲುವ ವಿಶ್ವಾಸವಿದೆ. ಸ್ವಂತ ಬಲದಿಂದ ಜೆಡಿಎಸ್ ಎಲ್ಲೆಡೆ ಸ್ಪರ್ಧಿಸಲಿದೆ. ಸತೀಶ ಜಾರಕಿಹೊಳಿ ಅವರು ರಾಯಚೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದರು. ಆದರೆ, ಪಕ್ಷ ಸೇರ್ಪಡೆಯಾಗುವ ಯಾವುದೇ ಚರ್ಚೆ ನಡೆದಿಲ್ಲ. ಪಕ್ಷದ ಸಿದ್ಧಾಂತಕ್ಕೆ ಬೆಲೆ ಕೊಟ್ಟು ನಡೆದುಕೊಳ್ಳುವವರಿಗೆ ಸ್ವಾಗತ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.












Click it and Unblock the Notifications