ನೀರಿನ ಮಹತ್ವ ಸಾರಲು ಸರ್ಕಾರದಿಂದ 'ಜಲಾಮೃತ' ಯೋಜನೆ
ಬೆಳಗಾವಿ, ಜೂನ್ 8: ರಾಜ್ಯದಲ್ಲಿ ಜಲಕ್ಷಾಮದ ಮುನ್ಸೂಚನೆ ದೊರೆತಿದೆ. ನೀರಿನ ಲಭ್ಯತೆ ದಿನ ಕಳೆದಂತೆ ಕುಗ್ಗುತ್ತಿದೆ. ಅದರಲ್ಲೂ ಪ್ರಸ್ತುತ ವರ್ಷ ರಾಜ್ಯದ ಬಹುಪಾಲು ನದಿ, ಕೆರೆ ಕಟ್ಟೆಗಳು ಒಣಗಿವೆ, ಇದೇ ಕಾರಣದೊಂದಿಗೆ, ಕೈಗೊಳ್ಳಲಾಗುತ್ತಿರುವ ಬರ ಪರಿಹಾರದ ಕ್ರಮಗಳೂ ಈ ಕ್ಷಣದ ತುರ್ತುಗಳಿಗೆ ಪ್ರಯೋಜನವಾಗುತ್ತಿದೆಯೇ ಹೊರತು, ದೀರ್ಘಕಾಲದ ಮಾರ್ಗೋಪಾಯದಂತೆ ತೋರುತ್ತಿಲ್ಲ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ವತಿಯಿಂದ 'ಜಲಾಮೃತ' ಎಂಬ ಯೋಜನೆಯನ್ನು ರೂಪಿಸಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ 'ಜಲಾಮೃತ'ದ ಭಾಗವಾಗಿ ಅಭಿಯಾನ ಆರಂಭಗೊಳ್ಳಲಿದ್ದು, ವಿಧಾನ ಪರಿಷತ್ತಿನ ವಿರೋಧ ಪಕ್ಷ ದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಈ ಕುರಿತು ವಿವರಿಸಿದ್ದಾರೆ. 'ಜಲಾಮೃತ ಯೋಜನೆಯ ಭಾಗವಾಗಿ ಕರ್ನಾಟಕ ಸರ್ಕಾರ 2019 ಅನ್ನು ಜಲವರ್ಷ ಎಂದು ಘೋಷಣೆ ಮಾಡಿದೆ. ಜಲಾಮೃತ ಅಭಿಯಾನ ಮುಖ್ಯವಾಗಿ ಜಲಸಾಕ್ಷರತೆ, ಜಲ ಸಂರಕ್ಷಣೆ, ಜಲ ಪುನಶ್ಚೇತನ ಮತ್ತು ಜಲಮೂಲಗಳ ಸೃಜಿಸುವಿಕೆ ಎಂಬ 4 ಆಧಾರ ಸ್ತಂಭಗಳನ್ನು ಅಳವಡಿಸಿಕೊಂಡಿದೆ. ನೀರಿನ ಪ್ರಜ್ಞಾವಂತ ಬಳಕೆ, ಹಸಿರೀಕರಣವನ್ನೂ ಈ ಯೋಜನೆ ಒಳಗೊಂಡಿದೆ' ಎಂದು ಮಾಹಿತಿ ನೀಡಿದರು ಅವರು.
ಜನಸಮೂಹದ ಸಹಭಾಗಿತ್ವದಲ್ಲಿ ಆಂದೋಲನವಾಗಿ ರೂಪಿಸುವ ಪ್ರಯತ್ನಿಸಲಾಗುತ್ತಿದ್ದು, ಜನರಲ್ಲಿ ನೀರಿನ ಕುರಿತು ಅರಿವು ಮೂಡಿಸುವುದು ಮತ್ತು ಅವರನ್ನು ಕ್ರಿಯಾಶೀಲವಾಗಿ ತೊಡಗುವಂತೆ ಮಾಡುವುದು ಈ ಆಂದೋಲನದ ಮುಖ್ಯ ಉದ್ದೇಶವಾಗಿದೆ. ಇಡೀ ವರ್ಷ ಆಂದೋಲನ ನಡೆಯುವುದು ವಿಶೇಷ.

ಆದೋಲನದ ಭಾಗವಾಗಿ, ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಜೂನ್ 11ರಂದು ರಾಜ್ಯಾದ್ಯಂತ ಸಾರ್ವಜನಿಕರು ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಕನಿಷ್ಠ 30 ಲಕ್ಷ ಸಸಿಗಳನ್ನು ನೆಡಲು ತೀರ್ಮಾನಿಸಲಾಗಿದೆ. ಇದರ ಜೊತೆ ಈ ವರ್ಷದಲ್ಲಿ 20 ಸಾವಿರ ಚೆಕ್ ಡ್ಯಾಂಗಳನ್ನು ಹೊಸದಾಗಿ ನಿರ್ಮಿಸುವ ಹಾಗೂ 14 ಸಾವಿರ ಕೆರೆ ಕಟ್ಟೆ, ಕಲ್ಯಾಣಿ ಗೋಡೆಕಟ್ಟೆಗಳನ್ನು ಪುನರುಜ್ಜೀವಗೊಳಿಸಲೂ ಕಾರ್ಯಕ್ರಮಗಳನ್ನೂ ಸರ್ಕಾರ ರೂಪಿಸಿದೆ.
'ಬೆಳಗಾವಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯತ್, ತಾಲ್ಲೂಕ್ ಪಂಚಾಯತ್, ಜಿಲ್ಲಾ ಪಂಚಾಯತ್ ಸದಸ್ಯರು, ಜನಪ್ರತಿನಿಧಿಗಳು ಪರಿಸರ ರಕ್ಷಣೆಗೆ ಮುಂದಾಗಬೇಕು, ಹಸಿರು ಬೆಳೆಸಿ ದೇಶ ಉಳಿಸಿ ಘೋಷಣೆಯೊಂದಿಗೆ ನೀರಿನ ಸದ್ಬಳಕೆ ಬಗ್ಗೆ ಜನಜಾಗೃತಿ ಮೂಡಿಸಬೇಕು, ಗ್ರಾಮಗಳಲ್ಲಿ ಪರಿಸರ ರಕ್ಷಣೆಗಾಗಿ ಸಸಿಗಳನ್ನು ನಡೆಸುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮಹಾಂತೇಶ ಕವಟಗಿಮಠ ಅವರು ಕರೆ ನೀಡಿದ್ದಾರೆ.












Click it and Unblock the Notifications