ನಾನು ಆರ್.ಎಸ್.ಎಸ್ ನಿಂದ ಬಂದವನು ಅದಕ್ಕೆ ಹೆಮ್ಮೆ ಇದೆ : ಸಿ.ಟಿ.ರವಿ
ಬೆಳಗಾವಿ, ನವೆಂಬರ್ 22 : "ನಾನು ಆರ್.ಎಸ್.ಎಸ್ ಹಿನ್ನೆಲೆಯಿಂದ ಬಂದವನು ಈ ಬಗ್ಗೆ ನನಗೆ ಹೆಮ್ಮೆ ಇದೆ' ಎಂದು ಬಿ.ಜೆ.ಪಿ ಶಾಸಕ ಸಿ.ಟಿ.ರವಿ ಸದನದಲ್ಲಿ ಗುಡುಗಿದರು.
ಸದನದಲ್ಲಿ ಆರ್.ಎಸ್.ಎಸ್ ವಿಷಯ ಚರ್ಚೆ ಬರಲು ಕಾರಣ ಗಣಿ ಭೂವಿಜ್ಞಾನ ಸಚಿವ ವಿನಯ್ ಕುಲಕರ್ಣಿ. ವಿಧಾನಸಭೆ ಪ್ರಶ್ನೋತ್ತರ ಕಲಾಪಕ್ಕೆ ಗಣಿ ಭೂ ವಿಜ್ಞಾನ ಸಚಿವ ವಿನಯ್ ಕುಲಕರ್ಣಿ ಅವರು ಹಾಜರಾಗದೇ ಇರುವ ಬಗ್ಗೆ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಆಗ ವಿನಯ್ ಕುಲಕರ್ಣಿ ಪರವಾಗಿ ಬಸವರಾಜ ರಾಯರೆಡ್ಡಿ ಅವರು ಗಣಿ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲು ಮುಂದಾದರು ಇದರಿಂದ ಮತ್ತಷ್ಟು ಕೆರಳಿದ ವಿಪಕ್ಷಗಳು ವಿನಯ್ ಕುಲಕರ್ಣಿ ಅವರದ್ದು ಬೇಜವಾಬ್ದಾರಿ ವರ್ತನೆ ಎಂದು ಕೂಗಾಡಿದರು.
ಜೆಡಿಎಸ್ ಶಾಸಕಾಂಗ ನಾಯಕ ಕುಮಾರ ಸ್ವಾಮಿ ಅವರು "ಇತ್ತೀಚೆಗೆ ಸಚಿವರಿಗೆ ಧರ್ಮ ಪ್ರಚಾರ ಮುಖ್ಯವಾಗಿದೆ ಹಾಗಾಗಿ ಬಂದಿಲ್ಲವೇನೊ' ಎಂದು ವ್ಯಂಗ್ಯದ ಛಾಟಿ ಬೀಸಿದರು. ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಕೂಡ ಈ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು.
ಇದೇ ಸಂಧರ್ಭದಲ್ಲಿ ಸಿ.ಟಿ.ರವಿ ಅವರು ಸಚಿವರ ಬೇಜವಬ್ದಾರಿಯನ್ನು ವಚನದ ಮೂಲಕ ಟೀಕಿಸುವ ಭರದಲ್ಲಿ ಬಸವಣ್ಣನ ಅವರ ವಚನವೊಂದನ್ನು ಹೇಳಿದರು.
ಆಗ ರಾಯರೆಡ್ಡಿ ಅವರು ಸಿ.ಟಿ.ರವಿ ಅವರನ್ನುದ್ದೇಶಿಸಿ "ನೀವು ಆರ್.ಎಸ್.ಎಸ್ ನವರು ನಿಮಗೂ ಬಸವಣ್ಣನವರಿಗೂ ಸಂಬಂಧವಿಲ್ಲ ಬಿಡಿ' ಎಂದು ರೇಗಿಸಿದರು.
ಇದರಿಂದ ಕೆರಳಿದ ಸಿ.ಟಿ.ರವಿ "ನಾನು ಆರ್.ಎಸ್.ಎಸ್ ಹಿನ್ನೆಲೆಯಿಂದ ಬಂದವನು ಈ ಬಗ್ಗೆ ನನಗೆ ಹೆಮ್ಮೆ ಇದೆ' ಎಂದು ರಾಯರೆಡ್ಡಿ ಅವರ ಬಾಯಿ ಮುಚ್ಚಿಸಿದರು.
"ಸಚಿವರ ಆರೋಗ್ಯ ಸರಿಯಿಲ್ಲ ಅವರು ವೈದ್ಯರ ಬಳಿ ಹೋಗಿದ್ದಾರೆ ಚಿಕಿತ್ಸೆ ಪಡೆದು ಬರುತ್ತಾರೆ' ಎಂದು ಮುಖ್ಯ ಸಚೇತಕ ಅಶೋಕ ಪಟ್ಟಣ ಸದನಕ್ಕೆ ಮಾಹಿತಿ ನೀಡಿದ ಮೇಲೆ ಗದ್ದಲ ತಣ್ಣಗಾಯಿತು.












Click it and Unblock the Notifications