'ನಾನು ದೇಶ ಕಾಯುತ್ತೇನೆ, ನನ್ನ ಕುಟುಂಬಕ್ಕೆ ರಕ್ಷಣೆ ಇಲ್ಲ'
ಬೆಳಗಾವಿ, ಆಗಸ್ಟ್. 25 : 'ನಾನು ದೇಶವನ್ನು ಕಾಪಾಡುತ್ತೇನೆ. ಆದರೆ, ನನ್ನ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ' ಇದು ಯೋಧರೊಬ್ಬರ ಹೇಳಿಕೆ. ಹೌದು, ಶ್ರೀನಗರದಲ್ಲಿ ದೇಶದ ಗಡಿ ಕಾಯುತ್ತಿರುವ ಬೆಳಗಾವಿ ಮೂಲದ ಯೋಧ ಈ ರೀತಿಯ ಹೇಳಿಕೆ ನೀಡಿದ್ದು, ಅದರ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಬೆಳಗಾವಿ ಮೂಲದ ಯೋಧ ವಿಠಲ್ ಕಡಕೋಳ್ ವಿಡಿಯೋ ಮೂಲಕ ಸರ್ಕಾರಕ್ಕೆ ತನ್ನ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ. ವಿಡಿಯೋದಲ್ಲಿ ಪ್ರತಿದಿನ ನಾನು ಪಾಕಿಸ್ತಾನ, ಚೀನಾದಿಂದ ಬೆದರಿಕೆ ಎದುರಿಸುತ್ತೇನೆ. ಆದರೆ, ದೇಶವನ್ನು ಕಾಯುತ್ತೇನೆ ಎಂದು ವಿಠಲ್ ಹೇಳಿದ್ದಾರೆ.

ನನ್ನ ಕುಟುಂಬದಲ್ಲಿ ವಯಸ್ಸಾದ ತಂದೆ-ತಾಯಿಗಳಿದ್ದಾರೆ. ಗ್ರಾಮದ ಕೆಲವು ಜನರಿಂದ ಅವರು ಬೆದರಿಕೆ ಎದುರಿಸುತ್ತಿದ್ದಾರೆ. ಗ್ರಾಮದ ಪ್ರಭಾವಿ ವ್ಯಕ್ತಿಗಳು ತುಂಡು ಭೂಮಿಗಾಗಿ ತನ್ನ ಕುಟುಂಬಕ್ಕೆ ಬೆದರಿಕೆ ಹಾಕುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇರುವ ಚಿಕ್ಕ ಜಮೀನಿನಲ್ಲಿ ನಾವು ದನಗಳನ್ನು ಕಟ್ಟಿಹಾಕುತ್ತಿದ್ದೇವೆ. ಆದರೆ, ಗ್ರಾಮದ ಕೆಲವು ಜನರು ಆ ಭೂಮಿಯನ್ನು ಬಿಡಬೇಕು. ಅಲ್ಲಿ ಶಾಲೆ ಮತ್ತು ಅಂಗನವಾಡಿಗೆ ತೆರಳಲು ದಾರಿ ಮಾಡಬೇಕು ಎಂದು ಹೇಳುತ್ತಿದ್ದಾರೆ. ಇದಕ್ಕೆ ನಿರಾಕರಿಸಿದಾಗ ಕುಟುಂಬಕ್ಕೆ ದೇವಾಲಯ ಪ್ರವೇಶ ಮಾಡಲು ಬಿಡುತ್ತಿಲ್ಲ. ನೀರು ತರಲು ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
'ನನ್ನ ತಂದೆ-ತಾಯಿ ಗ್ರಾಮದಲ್ಲಿ ಒಂಟಿಯಾಗಿ ವಾಸವಾಗಿರುವುದರಿಂದ ಕೆಲವು ಜನರು ಆ ಜಮೀನಿನ ಮೇಲೆ ಕಣ್ಣು ಹಾಕಿದ್ದಾರೆ. ಕಳೆದ ಐದು ವರ್ಷಗಳಿಂದ ನಾನು ಸೇನೆಯಲ್ಲಿದ್ದು, ಸದ್ಯ, ಶ್ರೀನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ' ಎಂದು ಹೇಳಿದ್ದಾರೆ.
'ನಾನು ಶ್ರೀನಗರದಲ್ಲಿದ್ದೇನೆ. ನನ್ನ ಸಹೋದರ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಡ್ರೈವರ್ ಆಗಿದ್ದು, ಬೆಂಗಳೂರಿನಲ್ಲಿದ್ದಾರೆ. ಗ್ರಾಮದಲ್ಲಿ ತಂದೆ-ತಾಯಿ ಇಬ್ಬರೇ ಇದ್ದು, ಏನು ಮಾಡುವುದು ತೋಚುತ್ತಿಲ್ಲ' ಎಂದು ವಿಠಲ್ ವಿಡಿಯೋದಲ್ಲಿ ತಿಳಿಸಿದ್ದಾರೆ.












Click it and Unblock the Notifications