"ಒಕ್ಕಲಿಗರ ಅಭಿವೃದ್ಧಿ ನಿಗಮ ರಚನೆಗೆ ನಾನು ಒತ್ತಾಯಿಸುತ್ತೇನೆ"
ಬೆಳಗಾವಿ, ನವೆಂಬರ್ 24: "ಸರ್ಕಾರ ಒಕ್ಕಲಿಗರ ಅಭಿವೃದ್ಧಿ ನಿಗಮವನ್ನು ರಚಿಸಬೇಕು. ಅದರಲ್ಲಿ ಎರಡು ಮಾತಿಲ್ಲ. ತಕ್ಷಣವೇ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ ಮಾಡಲು ನಾನು ಒತ್ತಾಯಿಸುತ್ತೇನೆ" ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಡಿಸಿಎಂ ಅಶ್ವತ್ಥ ನಾರಾಯಣ್.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮಾತನಾಡಿದ ಅವರು, "ಮರಾಠಾ ಜನರ ಅಪೇಕ್ಷೆ ಮೇರೆಗೆ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಗಿದೆ. ಅವರು ಕನ್ನಡಿಗರು, ಕನ್ನಡ ನಾಡಿನಲ್ಲಿರುವಂಥವರು. ಅವರಿಗೆ ಹಕ್ಕಿದೆ. ಹಾಗಾಗಿ ಅವರಿಗೆ ನಿಗಮ ರಚನೆ ಮಾಡಿದ್ದೇವೆ. ಈ ನಾಡು ಎಲ್ಲರಿಗೆ ಸೇರಿದ್ದು. ಎಲ್ಲಾ ಸಮುದಾಯಕ್ಕೆ ನಿಗಮ ಕೊಡಬೇಕು" ಎಂದು ಹೇಳಿದರು.
ಈ ಸಂದರ್ಭ ಸಂಪುಟ ವಿಸ್ತರಣೆ ಕುರಿತು ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟ ವಿಸ್ತರಣೆಗೆ ಆಸಕ್ತಿ ತೋರಿದ್ದಾರೆ. ಹಲವರಿಗೆ ಸಚಿವರಾಗುವ ಅವಕಾಶವಿದೆ. ಸಿ.ಪಿ.ಯೋಗೇಶ್ವರ್ ಸಚಿವರಾಗಬೇಕೆಂದು ನಾನು ಒತ್ತಾಯಿಸಿದ್ದೇನೆ. ಅವರು ಸಚಿವರಾಗಬೇಕು ಎನ್ನುವುದು ನನ್ನ ಬಯಕೆ ಎಂದರು.

ಡಿಸೆಂಬರ್ 5ರಂದು ಬೆಳಗಾವಿಯಲ್ಲಿ ರಾಜ್ಯ ಕಾರ್ಯಕಾರಿಣಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾರ್ಯಕಾರಿಣಿಯಲ್ಲಿ ಅಭ್ಯರ್ಥಿ ಬಗ್ಗೆ ಚರ್ಚೆ ಆಗಲ್ಲ. ಕೋರ್ ಕಮಿಟಿ ಕುರಿತು ಚರ್ಚೆ ನಡೆಸಲಾಗುವುದು. ಮೂರು ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಸವಕಲ್ಯಾಣ ಉಪಚುನಾವಣೆಗೆ ಬಿ.ವೈ.ವಿಜಯೇಂದ್ರ ಸ್ಪರ್ಧೆ ವಿಚಾರವಾಗಿ ಮಾತನಾಡಿ, ವಿಜಯೇಂದ್ರ ಅಭ್ಯರ್ಥಿ ಆಗುವ ಬಗ್ಗೆ ಪಕ್ಷ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದರು.












Click it and Unblock the Notifications