ಮಹಾರಾಷ್ಟ್ರದಲ್ಲಿ ಭಾರಿ ಮಳೆ: ಬೆಳಗಾವಿಯಲ್ಲಿ ಉಕ್ಕಿ ಹರಿಯುತ್ತಿರುವ ನದಿಗಳು
ಬೆಳಗಾವಿ, ಅಕ್ಟೋಬರ್ 16: ಮಹಾರಾಷ್ಟ್ರದ ಸಹ್ಯಾದ್ರಿ ಬೆಟ್ಟ ಹಾಗೂ ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಮಳೆ ಆರ್ಭಟಕ್ಕೆ ಜನ-ಜಾನುವಾರುಗಳಿಗೆ ಸಂಕಷ್ಟ ಎದುರಾಗಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಅಧಿಕ ಪ್ರಮಾಣದಲ್ಲಿ ಕುಂಭದ್ರೋಣ ಮಳೆಯಾಗುತ್ತಿದೆ. ಮಹಾರಾಷ್ಟ್ರದಲ್ಲಿ ಕೂಡ ಭಾರಿ ಮಳೆಯಾಗುತ್ತಿದ್ದು, ಕೊಯ್ನಾ ಜಲಾಶಯಕ್ಕೆ ಅಧಿಕ ಪ್ರಮಾಣದಲ್ಲಿ ನೀರು ಬರುತ್ತಿದೆ.
ಹೀಗಾಗಿ ಕೊಯ್ನಾ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗುತ್ತಿದ್ದು, ಕೃಷ್ಣಾ ನದಿ ತೀರದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಕೃಷ್ಣಾ ನದಿಯ ಹೊರಹರಿವು 80 ಸಾವಿರ ಕ್ಯೂಸೆಕ್ಸ್ ದಾಟಿದ್ದು, ಕಟಾವಿಗೆ ಬಂದಿದ್ದ ಕಬ್ಬು ಜಲಾವೃತಗೊಂಡಿದೆ.

ಬೆಳಗಾವಿ ಜಿಲ್ಲೆಯಾದ್ಯಂತ ಕಳೆದ ನಾಲ್ಕೈದು ದಿನಗಳಿಂದ ಅಬ್ಬರಿಸಿದ್ದ ಮಳೆರಾಯ ಎರಡು ದಿನಗಳಿಂದ ಶಾಂತನಾಗಿದ್ದಾನೆ. ಬೆಳಗಾವಿ ನಗರ ಸೇರಿ ಜಿಲ್ಲೆಯಾದ್ಯಂತ ಎರಡು ದಿನಗಳಿಂದ ಮೋಡ ಕವಿದ ವಾತಾವರಣ ಇದೆ. ಆದರೆ ಎಲ್ಲೂ ಅಷ್ಟೇನೂ ಮಳೆ ಆಗಿಲ್ಲ.
ಕಳೆದ ನಾಲ್ಕು ದಿನಗಳ ಹಿಂದೆ ವಾಯುಭಾರ ಕುಸಿತದ ಪರಿಣಾಮ ಬೆಳಗಾವಿ ನಗರ ಸೇರಿದಂತೆ ಹುಕ್ಕೇರಿ, ಖಾನಾಪುರ, ಕಿತ್ತೂರು, ಸವದತ್ತಿ, ಬೈಲಹೊಂಗಲ, ಅಥಣಿ ಸೇರಿದಂತೆ ವಿವಿಧ ಭಾಗಗಳಲ್ಲಿ ಅಪಾರ ಪ್ರಮಾಣದಲ್ಲಿ ಮಳೆಯಾಗಿತ್ತು.
ಹಲವೆಡೆ ಮನೆಗಳು ಕುಸಿದಿದ್ದು, ರಸ್ತೆ-ಸೇತುವೆಗಳೆಲ್ಲ ಜಲಾವೃತಗೊಂಡಿವೆ. ಘಟಪ್ರಭಾ, ಮಲಪ್ರಭಾ, ವೇದಗಂಗಾ, ದೂದಗಂಗಾ, ಮಾರ್ಕಂಡೇಯ ನದಿಗಳು ಕೂಡ ಉಕ್ಕಿ ಹರಿಯುತ್ತಿವೆ. ಎರಡು ದಿನಗಳಿಂದ ಮಳೆ ಅಬ್ಬರ ಕಡಿಮೆ ಆಗಿದ್ದು, ಕಬ್ಬು ಬೆಳೆಗಾರರು ನಿರಾಳರಾಗಿದ್ದಾರೆ.












Click it and Unblock the Notifications