ಕೆಪಿಎಂಇ ಕಾಯ್ದೆ ಹಲ್ಲು ಕಿತ್ತ ಹಾವಲ್ಲ ಹಗ್ಗ : ರಮೇಶ್ ಕುಮಾರ್
ಬೆಳಗಾವಿ, ನವೆಂಬರ್ 23 : ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಕಾಯ್ದೆ ಇಂದು ವಿಧಾನಪರಿಷತ್ ನಲ್ಲಿ ಅಂಗೀಕಾರಗೊಂಡಿದೆ. ಕಾಯ್ದೆಯ ಬಗ್ಗೆ ಮಾತನಾಡಿದ ಆರೋಗ್ಯ ಸಚಿವರು ಮತ್ತೊಮ್ಮೆ ಸದನದ ಮನಗೆಲ್ಲುವಂತೆ ತಮ್ಮ ವಾಗ್ಝರಿ ಹರಿಬಿಟ್ಟಿದ್ದಾರೆ.
ಚಿತ್ರಗಳು : ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ
ನಿನ್ನೆ (ನವೆಂಬರ್ 22)ರಂದು ವಿಧಾನಸಭೆಯಲ್ಲಿ ಭಾವುಕರಾಗಿ ಮಾತನಾಡಿದ್ದ ರಮೇಶ್ ಕುಮಾರ್ ಆಗಲೂ ತಮ್ಮ ಸದಸ್ಯರ ಜೊತೆಗೆ ವಿಪಕ್ಷ ಸದಸ್ಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಆದರೆ ಇಂದು ಅತಿ ಭಾವುಕತೆಯ ಮೊರೆ ಹೋಗದ ರಮೇಶ್ ಕುಮಾರ್ ಅವರು ಸಮಚಿತ್ತದಿಂದ ಆದರೆ ಪರಿಣಾಮಕಾರಿಯಾಗಿ ಮಾತನಾಡಿ ಕಾಯ್ದೆಯನ್ನು ಸಪರ್ಥಿಸಿಕೊಂಡರು.
ಮಾಮೂಲಿನಂತೆ ಗಡಸು ಭಾಷೆ ತ್ಯಜಿಸಿ ಬಹಳ ಅಳೆದು ತೂಗಿ ಮಾತನಾಡಿದ ರಮೇಶ್ ಕುಮಾರ್ ಅವರು ಕಾಯ್ದೆಯ ಪರವಾಗಿದ್ದವರಿಗೆ, ಕಾಯ್ದೆ ಜಾರಿಯಾಗಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ ಸಚಿವರು, ಅಡ್ಡಗಾಲು ಹಾಕಿದವರಿಗೆ ನಗುತ್ತಲೆ ಕಾಲೆಳೆದರು.
ವೈದ್ಯಕೀಯ ಕಾಯ್ದೆಯಿಂದ ಭಾರಿ ಬದಲಾವಣೆ ಆಗಿಬಿಡುತ್ತದೆ ಎಂದು ಹೇಳದೆ 'ನ ಭೂತೋ ನ ಭವಿಷ್ಯತ್' ಎಂಬಂತಹಾ ಕಾಯ್ದೆಯೇನು ಇದಲ್ಲ ಎನ್ನುವುದನ್ನು ಒಪ್ಪಿಕೊಳ್ಳುತ್ತಾ ಇದು ಖಾಸಗಿ ಸಂಸ್ಥೆಗಳ ಸ್ವೇಚ್ಛಾಚಾರಕ್ಕೆ ಮೊದಲ ಕಡಿವಾಣ ಎಂದು ಸಂಯಮದಿಂದಲೇ ಮಾತನಾಡಿದರು.
ಸ್ವಯಂ ನಿಯಂತ್ರಣ ಹೇರಿಕೊಂಡವರಂತೆ ಎಲ್ಲಿಯೂ ಭಾವೋದ್ರೇಕಕ್ಕೆ ಒಳಗಾಗದೆ, ಕೋಪೋದ್ರೇಕಗಳನ್ನೂ ತಂದುಕೊಳ್ಳದೆ ಮಾತನಾಡಿದ ರಮೇಶ್ ಕುಮಾರ್ ಅವರ ಮಾತುಗಳಿಗೆ ವಿಪಕ್ಷ ಸದಸ್ಯರುಗಳೂ ತಲೆದೂಗಿದರು. ಕಾಯ್ದೆ ಬಗ್ಗೆ ರಮೇಶ್ ಕುಮಾರ್ ಏನೇನು ಹೇಳಿದರು ಮುಂದೆ ಓದಿ...

ಸರ್ಕಾರಿ ವ್ಯವಸ್ಥೆ ಸರಿಪಡಿಸಲು ಖಾಸಗಿಯವರಿಗೆ ಪ್ರೋತ್ಸಾಹ
'ಮದುವೆ ಆಗುವವರೆಗೆ ಹುಚ್ವು ಬಿಡಲ್ಲ.ಹುಚ್ಚು ಬಿಡುವವರೆಗೆ ಮದುವೆ ಆಗಲ್ಲ' ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಒಂದಕ್ಕೊಂದು ಆಂತರಿಕ ಸಂಬಂಧ ಹೊಂದಿವೆ ಹಾಗಾಗಿ ಸರ್ಕಾರಿ ವ್ಯವಸ್ಥೆಯನ್ನು ಬಲಪಡಿಸಲು ಖಾಸಗಿಯವರಿಗೆ ಪ್ರೋತ್ಸಾಹ ಕೊಟ್ಟಿದ್ದೇವೆ ಎಂದರು ರಮೇಶ್ ಕುಮಾರ್.

ಬೇಕೆಂದು ಮಾಡಿದ್ದಲ್ಲ
ವೈದ್ಯರ ಮುಷ್ಕರ ಅವಧಿಯಲ್ಲಿ ಉಂಟಾದ ಸಾವು ನೋವಿಗೆ ಕ್ಷಮಾಪಣೆ ಕೋರಿದ ಆರೋಗ್ಯ ಸಚಿವರು 'ವೈದ್ಯರ ಮುಷ್ಕರದಿಂದ ಆಗಿರುವ ಸಾವಿಗಳಿಗೆ ನಾವು ಕ್ಷಮೆ ಯಾಚಿಸುತ್ತೇವೆ ಆದರೆ, ಆ ರೀತಿ ಆಗಲಿ ಎಂಬ ಉದ್ದೇಶದಿಂದ ಈ ನಿರ್ಣಯ ಕೈಗೊಂಡಿಲ್ಲ, ಕೆಲವು ವೈದ್ಯರೂ ಈ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ ಎಂದರು. ತಾಯಿ ಮಗುವಿನ ಸಂಬಂಧ ಅಳುವಿನಿಂದ ಪ್ರಾರಂಭ. ಅಳು ತಾಯಿಗೆ ಕೇಳದೇ ಹೋದಾಗ ಅದು ಗೋಳು ಆಗುತ್ತದೆ. ನಾವೀಗ ಗೋಳಿನ ಹಂತ ತಲುಪಿದ್ದೇವೆ ಎಂದು ಬಡವರ ಪರಿಸ್ಥಿತಿಯನ್ನು ಉಪಮಾನದ ಮೂಲಕ ಬಿಂಬಿಸಿದರು.

ಬಡವರ ಆರೋಗ್ಯ ಕಾಪಾಡುವ ಹೊಣೆ
ನಾವೀಗ ಇಡೀ ರಾಜ್ಯದ ಜನರ ಆರೋಗ್ಯ ಕಾಪಾಡುವ ಹೊಣೆ ಹೊತ್ತಿದ್ದೇವೆ.ಅದಕ್ಕಾಗಿಯೇ ಯೂನಿವರ್ಸಲ್ ಹೆಲ್ತ್ ಕೇರ್ ಯೋಜನೆ ಜಾರಿಗೊಳಿಸಲಾಗುತ್ತಿದೆ. ವೈದ್ಯ ನಾರಾಯಣೋ ಹರಿ ಆದರೆ ಎಲ್ಲರಿಗೂ ಒಳ್ಳೆಯದು. ಆದರೆ ಅವರು ಯಮರಾಜನ ಸಹೋದರ ಆದರೆ ಸಮಸ್ಯೆ, ಕೆಲವು ವೈದ್ಯರು ಯಮರಾಜನ ಸಹೋದರರಾದರೇ ಆಗಿದ್ದಾರೆ ಎಂದು ಸದನದಲ್ಲಿ ನಗು ಉಕ್ಕಿಸಿದರು.

ಹಾವು ಮನುಷ್ಯನಿಗಿಂತ ಒಳ್ಳೆಯದು
ಕೆಪಿಎಂಇ ಕಾಯ್ದೆ ಹಲ್ಲಿಲ್ಲದ ಹಾವು ಅಲ್ಲ, ಇದು ಹಾವೇ ಅಲ್ಲ. ತಪ್ಪು ಮಾಡಿದವರನ್ನು ಸ್ವಲ್ಪ ಕಟ್ಟಿ ಹಾಕುವ ಹಗ್ಗ ಮಾತ್ರ. ಮನುಷ್ಯರಿಗಿಂತ ಹಾವುಗಳು ಒಳ್ಳೆಯವು. ಹಾವು ಕಚ್ಚಿದ್ರೆ ವಿಶನಿರೋಧಕ ಔಷಧ ಪಡೆಯಬಹುದು ಆದರೆ ಮನುಷ್ಯ ಕಚ್ಚಿದ್ರೆ ಏನು ಔಷಧ ಕೊಡೋದು. ಬಂಡವಾಳ ಹೂಡಿ, ಲಾಭ ಮಾಡಿಕೋಬೇಕು ಎಂಬುದು ವ್ಯಾಪಾರಂ ದ್ರೋಹ ಚಿಂತನಂ. ಶ್ರೀಮಂತರು ಹಾಗೂ ನವ ಶ್ರೀಮಂತರು ಎಂದು ಎರಡು ವರ್ಗವಿದೆ. ಕಷ್ಟಪಟ್ಟು ದುಡಿದು ಹಣ ಗಳಿಸಿ ಮೇಲೆ ಬಂದವರು ಶ್ರೀಮಂತರು. ಆದರೆ ದಿಢೀರ್ ಹಣ ಗಳಿಕೆ ಮಾಡಿದವರು ನವ ಶ್ರೀಮಂತರು. ಹೆಚ್ಚಿನ ಜನ ಎರಡನೇ ಹಾದಿ ಹಿಡಿದಿದ್ದಾರೆ ಇವರಿಂದಾಗಿ ಬಡವನ ಬದುಕು ದುಸ್ತರವಾಗಿದೆ.

ರಾಜಕಾರಣಿಗಳು ಸರ್ಕಾರಿ ಆಸ್ಪತ್ರೆಗೆ ಹೋಗಬೇಕು
ನಾವು ಜನಪ್ರತಿನಿದಿಗಳು ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗೆ ಹೋಗುತ್ತಿದ್ದಿದ್ದರೆ, ಕೊನೆ ಪಕ್ಷ ತಪಾಸಣೆಗಾದ್ರೂ ಹೋಗಿದ್ದಿದ್ದರೆ ಈ ಪರಿಸ್ಥಿತಿ ಇರುತ್ತಿರಲಿಲ್ಲ. ಸರ್ಕಾರಿ ಆಸ್ಪತ್ರೆಗೆ ಹೋದರೆ ಗೌರವಕ್ಕೆ ಕುಂದು ಎಂದೇ ರಾಜಕಾರಣಿಗಳು ಭಾವಿಸಿಬಿಟ್ಟಿದ್ದೇವೆ. ನಮ್ಮ ಮಕ್ಕಳು ಸರ್ಕಾರಿ ಶಾಲೆಗೆ ಹೋಗಬಾರದು, ನಾವು ಸರ್ಕಾರಿ ಆಸ್ಪತ್ರೆಗೆ ಹೋಗಬಾರದು. ಆದರೂ ಸರ್ಕಾರಿ ವ್ಯವಸ್ಥೆ ಮಾತ್ರ ಚೆನ್ನಾಗಿರಬೇಕು ಎಂದು ನಾವು ಬಯಸುತ್ತಿದ್ದೇವೆ ಇದು ದೊಡ್ಡ ಕುಚೋದ್ಯ ಎಂದು ರಾಜಕಾರಣಿಗಳ ಆಡಂಭರತನವನ್ನು ದೂಷಿಸಿದರು.

ವೈದ್ಯರಿಗೆ ಮನವರಿಕೆ ಆಗಿದೆ
ವೈದ್ಯರಿಗೆ ಜೈಲು ಶಿಕ್ಷೆ ನೀಡುವ ಪ್ರಸ್ತಾಪ ಈ ವಿಧೇಯಕದಲ್ಲಿ ಇಲ್ಲವೇ ಇಲ್ಲ. ಇರೋದು ಹೆಚ್ಚುವರಿ ಶುಲ್ಕ ಪಡೆಯುವ ವೈದ್ಯಕೀಯ ಸಂಸ್ಥೆಗಳಿಗೆ ದಂಡ ವಿಧಿಸುವ ವಿಷಯ ಮಾತ್ರ. ಆದರೆ ಕೆಲವರು ಹಾಗಂತ ಪುಕಾರು ಹುಟ್ಟಿಸಿದ್ರು. ವೈದ್ಯರಲ್ಲಿ ಆತಂಕ ಉಂಟುಮಾಡಿದರು ಅವರಿಗೆ ಈಗಲಾದರೂ ಮನವರಿಕೆ ಆಗಿದೆ ಅಂತಾ ಭಾವಿಸುತ್ತೇನೆ ಎಂದು ಹೇಳಿದರು ರಮೇಶ್ ಕುಮಾರ್. ಗ್ರಾಮೀಣ ಸೇವೆ ಕಡ್ಡಾಯಗೊಳಿಸುವ ಬಗ್ಗೆಯೂ ಮಾತನಾಡಿದ ಅವರು ಎಲ್ಲರಿಗೂ ಗ್ರಾಮೀಣ ಸೇವೆ ಕಡ್ಡಾಯ ಮಾಡಿದ ಆದೇಶ ಸರಿಯಲ್ಲ. ಯಾರು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಉಚಿತ ವೈದ್ಯಕೀಯ ಸೀಟು ಪಡೆದು ವ್ಯಾಸಂಗ ಮಾಡಿರುತ್ತಾರೋ ಅವರಿಗೆ ಮಾತ್ರ ಗ್ರಾಮೀಣ ಸೇವೆ ಕಡ್ಡಾಯ ಮಾಡಬೇಕು ಎಂದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಸಿಟಿವಿ
ನಾವು ನಾಚಿಕೆ ಬಿಟ್ಟವರ ವಿಷಯದಲ್ಲಿ ತಲೆಕೆಡಿಸಿಕೊಂಡಿದ್ದೇವೆ ಎಂದು ಸರ್ಕಾರಿ ಆಸ್ಪತ್ರೆಗಳ ಭ್ರಷ್ಟ ಅಧಿಕಾರಿಗಳ ಬಗ್ಗೆ ಕೋಪಗೊಂಡ ರಮೇಶ್ ಕುಮಾರ್ ಅವರು, ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಶ್ರಮಿಕರು ನಿಜವಾಗಲೂ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಯಾರೋ ಒಂದಿಬ್ಬರು ತಪ್ಪು ಮಾಡುತ್ತಾರೆ. ಅದನ್ನೂ ತಪ್ಪಿಸಲು ಸಿಸಿ ಟಿವಿ ಅಳವಡಿಕೆ ಚಿಂತನೆ ಇದೆ ಎಂದರು.

ಹೆಣ ಇಟ್ಟುಕೊಂಡು ಮಾಡುವ ವ್ಯಾಪಾರಕ್ಕೆ ಕಡಿವಾಣ
ಕಾಯ್ದೆಯ ಬಗ್ಗೆ ಆಶಾವಾದಿತ್ವದಿಂದ ಮಾತನಾಡಿದ ಸಚಿವರು ಹೆಣವಿಟ್ಟುಕೊಂಡು ಹಣಕ್ಕೆ ಒತ್ತಾಯಿಸುವ ಕ್ರೂರ ನೀಚ ಪದ್ದತಿಯನ್ನು ನಾವು ಕೊನೆಗಾಣಿಸುತ್ತಿದ್ದೇವೆ. ಸರ್ಕಾರಿ ಆರೋಗ್ಯ ಯೋಜನೆಗಳ ಚಿಕಿತ್ಸಾ ದರ ನಿಗದಿ ಮಾಡಿದ್ದವರು ಖಾಸಗಿ ಆಸ್ಪತ್ರೆಗಳವರೇ. ಈಗ ತಜ್ಞರೊಂದಿಗೆ ಚರ್ಚಿಸಿ ದರ ಮರು ನಿಗದಿ ಮಾಡಲಾಗುತ್ತದೆ. ಸರ್ಕಾರಿ ಆರೋಗ್ಯ ಯೋಜನೆಗಳ ಚಿಕಿತ್ಸಾ ದರ ನಿಗದಿ ಮಾಡಿದ್ದವರು ಖಾಸಗಿ ಆಸ್ಪತ್ರೆಗಳವರೇ, ಈಗ ಅದರ ದರವನ್ನೂ ಮರು ನಿಗದಿ ಮಾಡಲಾಗುತ್ತದೆ ಎಂದರು.












Click it and Unblock the Notifications