ವೈದ್ಯರೇ ಹುಷಾರ್, ಹೀಗೆ ಮಾಡಿದರೆ ಅಮಾನತ್ತಾಗುತ್ತೀರ...
ಬೆಳಗಾವಿ, ನವೆಂಬರ್ 20 : ಸರ್ಕಾರಿ ವೈದ್ಯರೇನಾದರೂ ಸರ್ಕಾರಿ ಆಸ್ಪತ್ರೆಯ ಔಷಧಿ ಕೇಂದ್ರ ಬಿಟ್ಟು ಆಚೆಯ ಖಾಸಗಿ ಮೆಡಿಕಲ್ ಶಾಪ್ ಗಳಲ್ಲಿ ಔಷದಿ ತೆಗೆದುಕೊಳ್ಳಲು ಸೂಚಿಸಿದರೆ ಅಮಾನತ್ತಾಗುವುದು ಗ್ಯಾರಂಟಿ.
ಇಂದು (ನವೆಂಬರ್ 20) ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ಈ ವಿಷಯ ಸ್ಪಷ್ಟಪಡಿಸಿದರು.

ಸರ್ಕಾರಿ ಆಸ್ಪತ್ರೆ ವೈದ್ಯರು ರೋಗಿಗಳಿಗೆ ಹೊರಗಡೆಯಿಂದ ಔಷಧಿ ಖರೀದಿಸುವಂತೆ ಚೀಟಿ ಬರೆದುಕೊಟ್ಟರೆ ಅವರನ್ನು ಅಮಾನತು ಮಾಡುವ ಆದೇಶ ಹೊರಡಿಸಲಾಗಿದೆಯಾ? ಎಂದು ಬಿ.ಜೆ.ಪಿ ಸದಸ್ಯ ರಾಮಚಂದ್ರಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವರು 'ಹೊರಗೆ ಔಷಧಿ ಕೊಳ್ಳುವಂತೆ ಸೂಚಿಸುವ ವೈದ್ಯರನ್ನು ಅಮಾನತು ಮಾಡಲಾಗುವುದು' ಎಂದರು.
ಮುಂದೆ ಉತ್ತರಿಸಿದ ಸಚಿವರು 'ವೈದ್ಯರು ರೋಗಿಗಳಿಗೆ ಹೊರಗಿನಿಂದ ಔಷಧ ಖರೀಧಿ ಮಾಡಲು ಚೀಟಿ ಬರೆದುಕೊಡುತ್ತಿದ್ದರಿಂದ ಆರೋಗ್ಯ ಇಲಾಖೆಯ ಆಸ್ಪತ್ರೆಗಳಲ್ಲಿ ಕೊಟ್ಯಂತರ ರೂಪಾಯಿ ಮೌಲ್ಯದ ಔಷಧಗಳ ಎಕ್ಸಪೈರಿ ಡೇಟ್ ಆಗಿ ಸ್ಟಾಕ್ ಹಾಗೇ ಉಳಿದಿತ್ತು. ಹೀಗಾಗಿಯೇ ವೈದ್ಯರು ಬ್ರಾಂಡೆಡ್ ಮೆಡಿಸನ್ ಖರೀಧಿಗೆ ಚೀಟಿ ಬರೆದುಕೊಡುವುದನ್ನು ನಿಷೇಧಿಸಿದ್ದೇವೆ' ಎಂದರು.

ಅಕಸ್ಮಾತ್ ಸರ್ಕಾರಿ ಆಸ್ಪತ್ರೆಯ ಔಷದಾಲಯದಲ್ಲಿ ಅವಶ್ಯಕ ಔಷಧಿ ಇಲ್ಲದಿದ್ದ ಪಕ್ಷದಲ್ಲಿ ಜನರಿಕ್ ಮೆಡಿಕಲ್ ಗೆ ಹೋಗಿ ಕೊಳ್ಳುವಂತೆ ಮಾತ್ರ ಚೀಟಿ ಕೊಡಬೇಕಷ್ಟೆ ಎಂದು ಅವರು ಹೇಳಿದರು.
ಜೊತೆಗೆ ತೀರಾ ತುರ್ತು ಪರಿಸ್ಥಿತಿಯಲ್ಲಿ ಹೊರಗಿನಿಂದ ಔಷಧ ಖರೀಧಿಸಲು ವೈದ್ಯರಿಗೇ ಸರ್ಕಾರವೇ ಹಣ ನೀಡುವ ವ್ಯವಸ್ಥೆ ಮಾಡಲಾಗಿದೆ ಹಾಗಾಗಿ ಖಾಸಗಿ ಮೆಡಿಕಲ್ ಸ್ಟೋರ್ ಗಳಿಗೆ ಸರ್ಕಾರಿ ಆಸ್ಪತ್ರೆಯ ರೋಗಿಗಳನ್ನು ಕಳಿಸುವಂತಿಲ್ಲ ಎಂದರು.
ವೈದ್ಯರು ಔಷಧ ಮಾರಾಟಗಾರರ ಜೊತೆ ಮಾಡಿಕೊಳ್ಳುವ ಅನೈತಿಕ ವ್ಯವಹಾರಿಕ ಸಂಬಂಧದ ಬಗ್ಗೆಯೂ ಮಾತನಾಡಿದ ಸಚಿವರು, 'ಖಾಸಗಿ ಮೆಡಿಕಲ್ ರೆಪ್ರಸೆಂಟಿಟೀವ್ ಗಳು ಸರ್ಕಾರಿ ವೈದ್ಯರನ್ನು ಭೇಟಿ ಮಾಡುವುದು, ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಖಾಸಗಿ ಮೆಡಿಕಲ್ ಸ್ಟೋರ್ ಪ್ರಾರಂಭಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ' ಎಂದರು.
ಪ್ರತಿ ಹದಿನೈದು ದಿನಗಳಿಗೊಮ್ಮೆ ವೈದ್ಯರು ತಮ್ಮ ಇಂಟೆಂಡ್ ಸಲ್ಲಿಸಿ ಇಲಾಖೆಯಿಂದಲೇ ಜನರಿಕ್ ಮೆಡಿಸನ್ ಪಡೆಯಲು ಅವಕಾಶವಿದೆ, ಇಂಟೆಂಡ್ ಸಲ್ಲಿಸಿದ 48 ಗಂಟೆಗಳಲ್ಲಿ ಔಷಧ ಪೂರೈಕೆ ಮಾಡಲಾಗುತ್ತದೆ, ಯಾವುದೇ ಕಾರಣಕ್ಕೂ ಆಸ್ಪತ್ರೆ ಗಳಲ್ಲಿ ಅವಧಿ ಮೀರಿದ ಔಷಧಗಳ ಸಂಗ್ರಹ ಇಡುವುದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.












Click it and Unblock the Notifications