ಹನಿ ನೀರನ್ನೂ ಕರ್ನಾಟಕಕ್ಕೆ ಕೊಡುವುದಿಲ್ಲ: ಗೋವಾ ಜಲ ಸಚಿವ
ಬೆಳಗಾವಿ, ಜನವರಿ 16: ಕರ್ನಾಟಕ ಸರ್ಕಾರ ತನ್ನ ಸಾಕ್ಷಿಧಾರರಿಗೆ ದಿನವೊಂದಕ್ಕೆ 50000 ಸಾವಿರ ನೀಡಿ ಸುಳ್ಳು ಸಾಕ್ಷಿ ಹೇಳಿಸಿದೆ ಎಂದು ಗೋವಾ ಜಲಸಚಿವ ವಿನೋದ್ ಪಾಳೇಕರ್ ಆರೋಪ ಮಾಡಿದ್ದಾರೆ. ಇದೇ ವಿನೋದ್ ಪಾಳೇಕರ್ 'ಕನ್ನಡಿಗರು ಹರಾಮಿಗಳು' ಎಂದು ಹೇಳಿಕೆ ನೀಡಿ ವಿವಾದ ಸೃಷ್ಠಿಸಿದ್ದರು.
'ಮಹದಾಯಿ ನೀರಿಗಾಗಿ ಕನ್ನಡಿಗರು ಎಷ್ಟೇ ಪ್ರತಿಭಟನೆ ಮಾಡಿದರೂ ಒಂದು ಹನಿ ಕೂಡಾ ನೀರು ಕೊಡುವ ಪ್ರಶ್ನೆಯೇ ಇಲ್ಲ' ಎಂದು ಎಂದು ಅವರು ಉದ್ಧಟತನದಿಂದ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ಮಹದಾಯಿಗಾಗಿ ಗೋವಾ ಫಾರ್ವರ್ಡ್ ಪಾರ್ಟಿ ಮತ್ತು ಬಿಜೆಪಿ ನೇತೃತ್ವದ ಗೋವಾ ಸರ್ಕಾರ ಯಾವುದೇ ತ್ಯಾಗ, ಬಲಿದಾನಕ್ಕೆ ಸಿದ್ಧವಿದೆ ಆದರೆ ನೀರು ಕೊಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಗೋವಾ ಸಚಿವರ ಹೇಳಿಕೆ : ಯಾರು, ಏನು ಹೇಳಿದರು?
ಗೋವಾ ರಾಜ್ಯಕ್ಕೆ ಮಹದಾಯಿ ಒಂದೇ ಜಲ ಮೂಲ ಎಂದು ಹೇಳಿದ ಅವರು ಮಹದಾಯಿ ವಿಚಾರದಲ್ಲಿ ಕರ್ನಾಟಕವು ಸುಪ್ರಿಂ ಕೋರ್ಟ್ ಆದೇಶ ಉಲ್ಲಂಘಿಸಿ ಕಾಮಗಾರಿ ನಡೆಸಿದೆ, ಈ ವಿಚಾರವನ್ನು ನ್ಯಾಯಾಧಿಕರಣದ ಗಮನಕ್ಕೆ ಗೋವಾ ಸರ್ಕಾರ ತರಲಿದೆ ಎಂದಿದ್ದಾರೆ.
ಮಹದಾಯಿ ವಿಚಾರದಲ್ಲಿ ಕರ್ನಾಟಕವು ನ್ಯಾಯಾಂಗ ನಿಂದನೆ ಮಾಡಿದ್ದು. ಗೋವಾ ಸರ್ಕಾರ ಕರ್ನಾಟಕದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಿದೆ ಎಂದು ಪಾಳೇಕರ್ ಹೇಳಿದ್ದಾರೆ.