ಗೋವಾದಿಂದ ಕರೆತಂದು ಬೆಳಗಾವಿಯಲ್ಲಿ ಕೊಲೆ ಮಾಡಿದ್ರು
ಬೆಳಗಾವಿ, ಅಕ್ಟೋಬರ್ 30 : ಎಂ.ಎಂ.ಕಲಬುರ್ಗಿ ಅವರ ಹತ್ಯೆ ಪ್ರಕರಣದ ಆರೋಪಿ ರುದ್ರ ಪಾಟೀಲ್ ರೇಖಾಚಿತ್ರಕ್ಕೆ ಹೋಲುವ ಅಪರಿಚಿತ ಶವ ಬೆಳಗಾವಿಯಲ್ಲಿ ಪತ್ತೆಯಾಗಿತ್ತು. ಗೋವಾದಿಂದ ಆಗಮಿಸಿದ್ದ ಇಬ್ಬರು ಗುಂಡು ಹಾರಿಸಿ ವ್ಯಕ್ತಿಯನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.
ಅಕ್ಟೋಬರ್ 28ರಂದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಮಾಣಿಕವಾಡಿ ಗ್ರಾಮದಲ್ಲಿ ಅಪರಿಚತ ಶವ ಪತ್ತೆಯಾಗಿತ್ತು. ಶವದ ತಲೆ, ಎದೆ ಮತ್ತು ಹೊಟ್ಟೆ ಭಾಗಕ್ಕೆ ಗುಂಡು ತಗುಲಿತ್ತು. ಬೆಳಗಾವಿ ಪೊಲೀಸರು ಈ ಶವ ಯಾರದ್ದು? ಎನ್ನುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. [ಕಲಬುರ್ಗಿ ಕೊಂದವ ಶವವಾಗಿ ಪತ್ತೆ?]

ಅಪರಿಚಿತ ಶವ ಕಲಬುರ್ಗಿ ಅವರ ಹತ್ಯೆಯ ಮಾಸ್ಟರ್ ಮೈಂಡ್ ರುದ್ರ ಪಾಟೀಲ್ ಅವರದ್ದು ಎಂದು ಶಂಕಿಸಲಾಗಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ. ಗೋವಾದಿಂದ ಆಗಮಿಸಿದ್ದ ಇಬ್ಬರು ವ್ಯಕ್ತಿಗಳು ರುದ್ರ ಪಾಟೀಲ್ ಹೋಲುವ ಈ ವ್ಯಕ್ತಿಯನ್ನು ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. [ಕಲಬುರ್ಗಿ ಹತ್ಯೆಯಾಗಿ 2 ತಿಂಗಳು : ಎತ್ತ ಸಾಗಿದೆ ತನಿಖೆ?]
ಶವದ ದೇಹದಲ್ಲಿರುವ ಗುಂಡುಗಳು ಮತ್ತು ಶವದ ಅಕ್ಕಪಕ್ಕ ಸಿಕ್ಕಿರುವ ಗುಂಡುಗಳನ್ನು ಪರಿಶೀಲನೆ ನಡೆಸಿದ ಪೊಲೀಸರು ಕಂಟ್ರಿ ಮೇಡ್ ಪಿಸ್ತೂಲ್ನಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ, ಶವ ಯಾರದ್ದು ಎನ್ನುವುದು ಮಾತ್ರ ಇನ್ನೂ ನಿಗೂಢವಾಗಿದೆ. [ಕಲಬುರ್ಗಿ ಹತ್ಯೆ ಸಂಚು ರೂಪಿಸಿದ್ದು ರುದ್ರ ಪಾಟೀಲ್]
ಡಿಎನ್ಎ ಪರೀಕ್ಷೆ : ಅಪರಿಚಿತ ಶವ ರುದ್ರ ಪಾಟೀಲ್ ಅವರದ್ದು ಇರಬಹುದು ಎಂದು ಶಂಕಿಸಿರುವ ಪೊಲೀಸರು ಪಾಟೀಲ್ ಅವರ ಪೋಷಕರ ಡಿಎನ್ಎ ಸ್ಯಾಂಪಲ್ಗಳನ್ನು ಸಂಗ್ರಹಣೆ ಮಾಡಲು ಮುಂದಾಗಿದ್ದಾರೆ. ಈ ಕುರಿತು ಪೋಷಕರಿಗೂ ಮಾಹಿತಿ ರವಾನಿಸಲಾಗಿದೆ.
ರುದ್ರ ಪಾಟೀಲ್ಗಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಎಂ.ಎಂ.ಕಲಬುರ್ಗಿ, ಗೋವಿಂದ ಪನ್ಸಾರೆ, ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣ ಮತ್ತು ಗೋವಾದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ ತನಖೆ ನಡೆಸುತ್ತಿರುವ ಎನ್ಐಎ ಸಹ ಪಾಟೀಲ್ಗಾಗಿ ಹುಡುಕಾಟ ನಡೆಸುತ್ತಿದೆ.












Click it and Unblock the Notifications