ಗೌರಿ ಲಂಕೇಶ್ ಹತ್ಯೆ : ಬೆಳಗಾವಿಯಲ್ಲಿ ಒಬ್ಬನ ಬಂಧನ, ಇಬ್ಬರು ವಶಕ್ಕೆ
ಬೆಳಗಾವಿ, ಆಗಸ್ಟ್ 08 : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಬೆಳಗಾವಿಯಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿದೆ. ಇಬ್ಬರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪರುಶರಾಮ್ ವಾಗ್ಮೋರೆ ನೀಡಿದ ಮಾಹಿತಿ ಅನ್ವಯ ಒಬ್ಬನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಭರತ್ ಎಂದು ಗುರುತಿಸಲಾಗಿದ್ದು, ಸಂಭಾಜಿ ಗಲ್ಲಿಯ ನಿವಾಸಿಯಾಗಿದ್ದಾನೆ.

ಭರತ್ ಬಂಧಿಸಿರುವ ಎಸ್ಐಟಿ ಪೊಲೀಸರು, ಇಬ್ಬರನ್ನು ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂಬುದುನ್ನು ಬೆಳಗಾವಿ ಪೊಲೀಸರು ಖಚಿತ ಪಡಿಸಿದ್ದಾರೆ.
2017ರ ಸೆಪ್ಟೆಂಬರ್ 5ರಂದು ಗೌರಿ ಲಂಕೇಶ್ ಹತ್ಯೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 10ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ. ಪರುಶರಾಮ್ ವಾಗ್ಮೋರೆ ಬೆಳಗಾವಿಯ ಅರಣ್ಯದಲ್ಲಿ ಬಂದೂಕು ತರಬೇತಿ ಪಡೆದಿದ್ದೆ ಎಂದು ಹೇಳಿದ್ದ.
ಕೆಲವು ದಿನಗಳಿಂದ ಎಸ್ಐಟಿಯ ಕೆಲವು ಅಧಿಕಾರಿಗಳು ಬೆಳಗಾವಿಯಲ್ಲಿ ಬೀಡು ಬಿಟ್ಟಿದ್ದರು. ಅವರು ಕಲೆ ಹಾಕಿದ ಮಾಹಿತಿ ಅನ್ವಯ ಭರತ್ ಬಂಧಿಸಲಾಗಿದ್ದು, ಇಬ್ಬರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.
ಗೌರಿ ಲಂಕೇಶ್ ಅವರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಆದರೆ, ಇದುವರೆಗೂ ಎಸ್ಐಟಿ ಪೊಲೀಸರಿಗೆ ಗನ್ ಮತ್ತು ಕೃತ್ಯಕ್ಕೆ ಬಳಕೆ ಮಾಡಿದ್ದ ಬೈಕ್ ಸಿಕ್ಕಿಲ್ಲ.












Click it and Unblock the Notifications