ಡಿಸೆಂಬರ್ 27ಕ್ಕೆ 'ಗಾಂಧಿ ಭಾರತ ಸಮಾವೇಶ'
ಬೆಳಗಾವಿ, ಡಿಸೆಂಬರ್ 20: ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಮತ್ತೊಂದು ಬೃಹತ್ ಸಮಾವೇಶ ಆಯೋಜನೆಗೊಳ್ಳುತ್ತಿದೆ. ಇದೇ ಡಿಸೆಂಬರ್ 27ರಂದು 'ಗಾಂಧಿ ಭಾರತ ಸಮಾವೇಶ' ಹಮ್ಮಿಕೊಳ್ಳಲಾಗಿದೆ. ಪ್ರತಿ ಜಿಲ್ಲೆಯಿಂದ ಸುಮಾರು ಸಾವಿರಾರು ಕಾರ್ಯಕರ್ತರನ್ನು ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಹೇಳಿದರು.
ಶುಕ್ರವಾರ ಬೆಳಗಾವಿಯಲ್ಲಿ ನಡೆದ "ಗಾಂಧಿ ಭಾರತ ಸಮಾವೇಶ"ದ ಪೂರ್ವಭಾವಿ ಪೂರ್ವ ಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ 1924ರ ಡಿ.27 ರಂದು ಅಧಿವೇಶನ ನಡೆದಿತ್ತು. ಅದರ ಸವಿ ನೆನಪಿಗಾಗಿ ಇದೇ ಡಿಸೆಂಬರ್ 27 ರಂದು ಬೆಳಗಾವಿಯಲ್ಲಿ 'ಗಾಂಧಿ ಭಾರತ ಸಮಾವೇಶ' ಆಯೋಜಲಾಗಿದೆ ಎಂದರು.

ಬೆಳಗಾವಿ ಕಾಂಗ್ರೆಸ್ ಅಧಿವೇಶನ ಭಾರತೀಯ ರಾಜಕಾರಣದಲ್ಲಿಯೇ ಐತಿಹಾಸಿಕ. ಸಿಡಬ್ಲೂಸಿ ಸದಸ್ಯರು, ಕೆಪಿಸಿಸಿ ಅಧ್ಯಕ್ಷರು, ಸದಸ್ಯರು ಭಾಗಿಯಾಗಲಿದ್ದಾರೆ. ಡಿ.26ರಂದು ಸಿಡಬ್ಲೂಸಿ ಸಭೆ ನಡೆಯಲಿದೆ. ಕಾಂಗ್ರೆಸ್ ಐಡಿಯಾಲಜಿ ಕುರಿತು ಚರ್ಚೆ ಆಗಲಿದೆ. ನಂತರ 27 ರಂದು ಬಹಿರಂಗ ಸಮಾವೇಶ ನಡೆಯಲಿದೆ. ಸಮಾವೇಶವನ್ನು ಯಶಸ್ವಿಗೊಳಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದರು.
ಸಮಾವೇಶಕ್ಕೆ ಪ್ರತಿ ಜಿಲ್ಲೆಯಿಂದ ಸುಮಾರು 25 ಸಾವಿರ ಕಾರ್ಯಕರ್ತರನ್ನು ಕಳುಹಿಸಿಕೊಡಬೇಕು. ಅಂದಿನ ಸಮಾವೇಶಕ್ಕೆ 03ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ನಾವು ಎರಡೂ ಸದನದಲ್ಲಿ ಖಂಡಿಸಿದ್ದೇವೆ. ಪ್ರಧಾನಿ ಮೋದಿ ಸರ್ಕಾರ ಆಡಳಿತಕ್ಕೆ ಬಂದು 11 ವರ್ಷಗಳಾದರೂ ದಲಿತರ ಮೇಲಿನ ದೌರ್ಜನ್ಯ ಕಡಿಮೆ ಆಗಿಲ್ಲ. ಅವರೆಲ್ಲ ದೇಶ ಉದ್ಧಾರ ಮಾಡುವವರಲ್ಲ. ಕೇವಲ ವೈಯಕ್ತಿಕ ಅಭಿವೃದ್ಧಿ ಹೊಂದುವವರು ಎಂದು ಟೀಕಿಸಿದರು.
ನಾವು ಸಮಾನತೆಯ ಬಗ್ಗೆ ಪ್ರೀತಿ, ಸೌಹಾರ್ದತೆಯ ಬಗ್ಗೆ ಮಾತನಾಡುತ್ತಿದ್ದೇವೆ. ಬಿಜೆಪಿಯವರು ಕೇವಲ ದ್ವೇಷ ಹಬ್ಬಿಸುತ್ತಿದ್ದಾರೆ. ಹಿಂದೂ-ಮುಸ್ಲಿ, ಹಿಂದೂ-ಕ್ರಿಶ್ಚಿಯನ್ ಮಧ್ಯೆ ದ್ವೇಷ ಹೆಚ್ಚಿಸುವುದೇ ಅವರ ಅಜೆಂಡಾ ಎಂದರು.
ಕಾಂಗ್ರೆಸ್ ಕಾರ್ಯಕರ್ತರು ಯಶಸ್ಸಿಗೆ ಕೈ ಜೋಡಿಸಬೇಕು
ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ್ ಅವರು, ಜಿಲ್ಲೆಯಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಎಲ್ಲ ಕಾರ್ಯಕರ್ತರೂ ತಮ್ಮ ತಮ್ಮ ಊರು- ಕೇರಿಗಳಿಂದ ಜನರನ್ನು ಕರೆತರುವುದರ ಜತೆಗೆ ಸಮಾವೇಷದ ಯಶಸ್ಸಿಗೆ ಕೈ ಜೋಡಿಸುವಂತೆ ಕರೆ ನೀಡಿದರು.
ಒಂದು ದೇಶ ಒಂದು ಚುನಾವಣೆಯ ವ್ಯವಸ್ಥೆಯನ್ನು ಜಾರಿಗೆ ತಂದಿರುವ ಕೇಂದ್ರ ಬಿಜೆಪಿ ಸರ್ಕಾರ, ಮುಂದಿನ ದಿನಗಳಲ್ಲಿ ಚುನಾವಣೆ ಇಲ್ಲದೇ ಆಯ್ಕೆಯಾಗುವ ಕನಸು ಕಾಣುತ್ತಿದೆ. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗಲಿದೆ. ಪ್ರಜಾಪ್ರಭುತ್ವದ ಉಳಿವಿಗಾಗಿಯೇ "ಗಾಂಧಿ ಭಾರತ ಸಮಾವೇಶ"ವನ್ನು ಆಯೋಜಿಸಿದ್ದೇವೆ ಎಂದರು.












Click it and Unblock the Notifications