ಹಿಂಡಲಗಾ ಜೈಲಿನಲ್ಲಿ ಊಟ, ನಿದ್ದೆ ಇಲ್ಲದೆ ಬರೀ ಯೋಚನೆಯಲ್ಲೇ ರಾತ್ರಿ ಕಳೆದ ವಿನಯ್ ಕುಲಕರ್ಣಿ
ಬೆಳಗಾವಿ, ನವೆಂಬರ್ 6: ಧಾರವಾಡ ಜಿ.ಪಂ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಸಿಬಿಐ ವಶಕ್ಕೆ ಪಡೆದು, ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ, ಬೆಳಗಾವಿಯ ಹಿಂಡಲಗಾ ಜೈಲಿನ ರೆಡ್ ಝೋನ್ ಸೆಲ್ ನಲ್ಲಿ ರಾತ್ರಿ ಕಳೆದರು.
ಕೋವಿಡ್ ಹಿನ್ನೆಲೆ ಸೆಲ್ ನಲ್ಲಿ ಒಬ್ಬರನ್ನೇ ಇರಿಸಿದ್ದು, ಸಾಮಾನ್ಯ ಕೈದಿಯಂತೆ ರಾತ್ರಿ ಕಳೆದ ವಿನಯ್ ಕುಲಕರ್ಣಿಗೆ ಟಿವಿ ಸೇರಿದಂತೆ ಯಾವುದೇ ವ್ಯವಸ್ಥೆ ಒದಗಿಸಿಲ್ಲ. ಸಾಮಾನ್ಯ ಕೈದಿಗೆ ನೀಡುವ ಸೆಲ್ ಅನ್ನು ಮಾಜಿ ಸಚಿವರಿಗೂ ನೀಡಲಾಗಿದೆ.
ಮಾಜಿ ಸಚಿವ, ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ಸಿಬಿಐ ವಶಕ್ಕೆ!
ರಾತ್ರಿಯಿಡೀ ಸೊಳ್ಳೆ ಕಾಟ ತಾಳಲಾರದೆ ಸೊಳ್ಳೆ ಬತ್ತಿಯಾದರೂ ಕೊಡಿ ಎಂದು ಜೈಲು ಸಿಬ್ಬಂದಿಗೆ ಮನವಿ ಮಾಡಿಕೊಂಡಿದ್ದರು. ಊಟವೂ ಇಲ್ಲದೆ, ನಿದ್ದೆಯನ್ನೂ ಮಾಡದೆ ಬರೀ ಯೋಚನೆಯಲ್ಲೇ ವಿನಯ್ ಕುಲಕರ್ಣಿ ರಾತ್ರಿ ಕಳೆದಿದ್ದಾರೆ. ವಿಚಾರಣಾಧೀನ ಕೈದಿ ನಂ.16635 ಸಂಖ್ಯೆಯನ್ನು ಜೈಲು ಸಿಬ್ಬಂದಿ ನೀಡಿದ್ದಾರೆ.
ವಿನಯ್ ಕುಲಕರ್ಣಿಗೆ ಒಂದು ದಿನ ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯ ಆದೇಶ ಹೊರಡಿಸಿದ್ದು, ಜೈಲು ಸೇರಿ ತೀವ್ರ ಹತಾಶರಾಗಿದ್ದಾರೆ. ಬೆಳಗಿನ ಜಾವ 4 ಗಂಟೆಗೆ ಎದ್ದು, ಜೈಲಿಗೆ ಬರುವ ದಿನಪತ್ರಿಕೆಗಳನ್ನು ಓದಿದರು. ಸಾಮಾನ್ಯ ಕೈದಿಯಂತೆ ವಿನಯ್ ಕುಲಕರ್ಣಿಗೆ ಬೆಳಗ್ಗೆ ಉಪ್ಪಿಟ್ಟು ಹಾಗೂ ಟೀ ನೀಡಿದ್ದಾರೆ.
ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ವಿನಯ್ ಕುಲಕರ್ಣಿ ವಿಚಾರಣೆ ನಡೆಯಲಿದ್ದು, ಧಾರವಾಡದ 2ನೇ ಹೆಚ್ಚುವರಿ ಜಿಲ್ಲಾ ಸೆಷನ್ ನ್ಯಾಯಾಲಯದ ನ್ಯಾಯಾಧೀಶ ಪಂಚಾಕ್ಷರಿ ಅವರ ಎದುರು ಹಾಜರಾಗಲಿದ್ದಾರೆ.
ಸಿಬಿಐ ಪರ ವಕೀಲರು ಮೂರು ದಿನ ಸಿಬಿಐ ವಶಕ್ಕೆ ನೀಡುವಂತೆ ಕೋರಿದ್ದು, ಸಿಬಿಐ ಕೋರಿಕೆ ಮನ್ನಿಸದೇ ಒಂದು ದಿನ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದರು.
ನ.೭ ರಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ 55ನೇ ಹುಟ್ಟುಹಬ್ಬ ಹಿನ್ನಲೆಯಲ್ಲಿ ಇಂದಿನ ಕೋರ್ಟ್ ವಿಚಾರಣೆ ಮೇಲೆ ಕುತೂಹಲ ಹೆಚ್ಚಾಗಿದೆ. ಹೆಚ್ಚಿನ ವಿಚಾರಣೆಗೆ ಸಿಬಿಐ ವಶಕ್ಕೆ ಕೋರಲಿದ್ದಾರೆ.
ಸಿಬಿಐ ವಶಕ್ಕೆ ವಿನಯ್ ಕುಲಕರ್ಣಿಯನ್ನು ಕೋರ್ಟ್ ನೀಡಿದರೆ ಜೈಲಿನಲ್ಲಿ ಹುಟ್ಟುಹಬ್ಬ ಪಕ್ಕಾ ಆಗಲಿದೆ. ಈ ಬಾರಿ ಅದ್ಧೂರಿಯಾಗಿ ಜನ್ಮದಿನ ಆಚರಣೆಗೆ ಸಿದ್ಧತೆ ಮಾಡಿಕೊಂಡಿದ್ದರು. ಕೊಲೆ ಕೇಸ್ ನಲ್ಲಿ ಜೈಲುಪಾಲಾದ ಹಿನ್ನಲೆ ಹುಟ್ಟುಹಬ್ಬಕ್ಕೂ ಬ್ರೇಕ್ ಬೀಳುವ ಸಾಧ್ಯತೆ ಹೆಚ್ಚಾಗಿದೆ.