ಉತ್ತರ ಕರ್ನಾಟಕ ಬಂದ್ ವಿರೋಧಿಸಿ ಕನ್ನಡಪರ ಸಂಘಟನೆಗಳಿಂದ ಹೂ ವಿತರಣೆ
Recommended Video

ಬೆಳಗಾವಿ, ಆಗಸ್ಟ್.02: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬಂದ್ ಗೆ ಬಹುಪಾಲು ಸಂಘಟನೆಗಳು ಬೆಂಬಲ ನೀಡಿಲ್ಲ. ಬೆಳಗಾವಿಯಲ್ಲಿ ಕನ್ನಡಪರ ಸಂಘಟನೆಗಳು ಬಂದ್ ವಿರೋಧಿಸಿ ಹೋರಾಟ ನಡೆಸಿದ್ದು, ಬಂದ್ ಮಾಡದಂತೆ ಜನರಲ್ಲಿ, ವ್ಯಾಪಾರಸ್ಥರಲ್ಲಿ ಮನವಿ ಮಾಡುತ್ತಿವೆ.
ಬೆಳಗಾವಿ ನಗರ ಸೇರಿ ಜಿಲ್ಲೆಯಾದ್ಯಂತ ಬಂದ್ ಬಿಸಿಯಿಲ್ಲ. ಎಂದಿನಂತೆ ಸರ್ಕಾರಿ ಬಸ್ ಸೇವೆ, ಆಟೋ ಮತ್ತು ಖಾಸಗಿ ವಾಹನ ಸಂಚಾರ ಸಾಮಾನ್ಯವಾಗಿವೆ. ಹೋಟೆಲ್, ಅಂಗಡಿ ಮುಗ್ಗಟ್ಟುಗಳು ಸಹ ತೆರೆದಿವೆ.
ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತ ಬಾಬು ಸಂಗೋಡಿ ಹಾಗೂ ಕರವೇ ಮುಖಂಡ ದೀಪಕ ಗುಡಗನಟ್ಟಿ ನೇತೃತ್ವದಲ್ಲಿ ಉತ್ತರ ಕರ್ನಾಟಕ ಬಂದ್ ಇಲ್ಲ ಅಂತ ಹೂ ನೀಡುವುದರ ಮೂಲಕ ಬಂದ್ ಗೆ ವಿರೋಧ ವ್ಯಕ್ತಪಡಿಸಲಾಗುತ್ತಿದೆ.

ಪ್ರಯಾಣಿಕರಿಗೆ, ಅಂಗಡಿ ಮಾಲೀಕರಿಗೆ ಹಾಗೂ ಆಟೋ ಚಾಲಕರು ಸೇರಿದಂತೆ ಬಸ್ ನಿಲ್ದಾಣದಲ್ಲಿ ಸೇರಿದ ಜನರಿಗೆ ಹೂ ವಿತರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಬಂದ್ ಬೇಡವೆಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಆದರೆ ಉತ್ತರ ಕರ್ನಾಟಕ ರೈತ ಸಂಘದಿಂದ ಮಾತ್ರ ಬಂದ್ ಆಚರಿಸುತ್ತಿದ್ದು, ಬೆಳಗಾವಿ, ರಾಮದುರ್ಗ, ಸವದತ್ತಿ ಸೇರಿ ವಿವಿಧ ತಾಲೂಕಿನಲ್ಲಿ ಬೀದಿ ಹೋರಾಟ ನಡೆಸಲಿವೆ. ಸಂಘವು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನಾ ರಾಲಿ ನಡೆಸಲು ನಿರ್ಧರಿಸಿರುವುದು ತಿಳಿದು ಬಂದಿದೆ.
ಬಂದ್ ಹಿನ್ನೆಲೆ ಬಿಗಿ ಪೋಲಿಸ್ ಭದ್ರತೆ ವ್ಯವಸ್ಥೆ ಕಲ್ಪಿಸಲಾಗಿದೆ.












Click it and Unblock the Notifications