ಚಿಕಿತ್ಸೆಗಾಗಿ ಹೊರ ರಾಜ್ಯಗಳಿಗೆ ತೆರಳುತ್ತಿರುವ ರೋಗಿಗಳು
ಬೆಳಗಾವಿ, ನವೆಂಬರ್ 15 : ಕೆಪಿಎಂಇ ಕಾಯ್ದೆ ವಿರೋಧಿಸಿ ಖಾಸಗಿ ಆಸ್ಪತ್ರೆ ವೈದ್ಯರು ನಡೆಸುತ್ತಿರುವ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದೆ ಆದರೆ, ಸರ್ಕಾರ ವೈದ್ಯರ ಹಾದಿಗೆ ಬರುತ್ತಿಲ್ಲ, ವೈದ್ಯರೂ ತಮ್ಮ ಪಟ್ಟು ಸಡಿಲಿಸುತ್ತಿಲ್ಲ ಇದರಿಂದ ಬಡವಾಗುತ್ತಿರುವುದು ರಾಜ್ಯದ ಜನ.
ಕೆಎಂಪಿಎ ಕಾಯ್ದೆ ವಿವಾದ, ಶಾಸಕರ ಅಭಿಪ್ರಾಯ ಸಂಗ್ರಹ
ವೈದ್ಯರ ಮುಷ್ಕರದಿಂದಾಗಿ ಎರಡು ದಿನಕ್ಕೆ 6 ಮಂದಿ ಪ್ರಾಣ ಕಳೆದುಕೊಂಡಿದ್ದರು ಈ ಸಂಖ್ಯೆಗೆ ಇಂದು (ನವೆಂಬರ್ 15) ಮತ್ತೊಂದು ಸೇರ್ಪಡೆ ಆಗಿದೆ. ಹಾವೇರಿಯಲ್ಲಿ ಸಕಾಲಕ್ಕೆ ಚಿಕಿತ್ಸೆ ಸಿಗದೆ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ.
ರಾಜ್ಯದೆಲ್ಲೆಡೆ ರೋಗಿಗಳ ಪರದಾಟ ಮುಂದುವರೆದಿದೆ. ಅಗತ್ಯ ಚಿಕಿತ್ಸೆ ಬೇಕಾಗಿರುವ ಗಡಿಭಾಗದ ಕೆಲ ಅನುಕೂಲಸ್ತರು ಹೊರ ರಾಜ್ಯಗಳಿಗೆ ಹೋಗಿ ಅಧಿಕ ಹಣ ತೆತ್ತು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಗಡಿ ತಾಲೂಕಿನ ಜನರು ಪಕ್ಕದ ಮಹಾರಾಷ್ಟ್ರದ ಮಿರಜ, ಸಾಂಗ್ಲಿ , ಕಾಗಲ, ಕೊಲ್ಲಾಪುರ, ಇಂಚಲಕರಂಜಿ, ಜತ್ತ, ಸೇರಿದಂತೆ ಇತರೆ ನಗರಗಳಿಗೆ ತೆರಳಿ ದುಬಾರಿ ಹಣ ನೀಡಿ ಚಿಕಿತ್ಸೆ ಪಡೆಯುವಂತಾ ಪರಸ್ಥಿತಿ ಎದುರಾಗಿದೆ.
ವೈದ್ಯರ ಧರಣಿ: ಆರೋಗ್ಯ ಮಂತ್ರಿಯ ಹಠಮಾರಿತನಕ್ಕೆ ಇನ್ನೆಷ್ಟು ಬಲಿ?
ರಾಜ್ಯದಿಂದ ಹೊರರಾಜ್ಯಗಳಿಗೆ ಹೋಗುವ ಸಾರಿಗೆ ವೆಚ್ಚದ ಜೊತೆಗೆ ದುಬಾರಿ ವೈದ್ಯಕೀಯ ವೆಚ್ಚವನ್ನೂ ತೆತ್ತು ಚಿಕಿತ್ಸೆ ಪಡೆದುಕೊಳ್ಳಬೇಕಾಗಿರುವ ಪರಿಸ್ಥಿತಿ ರೋಗಿಗಳದ್ದು.
ಹೃದಯ ಸಂಬಂಧಿ ಕಾಯಿಲೆ, ಮಧುಮೇಹದಂತ ರೋಗಿಗಳ ಪರಸ್ಥಿತಿ ಚಿಂತಾಜನಕವಾಗಿದೆ. ಯಾವ ಕ್ಷಣದಲ್ಲಿ ಆರೋಗ್ಯದಲ್ಲಿ ಹಠಾತ್ ಏರುಪೇರಾಗಿ ಜೀವಕ್ಕೆ ಕುತ್ತು ಬಂದುಬಿಡುತ್ತದೆಯೊ ಎಂದು ಹೆದರಿ ಇನ್ನಷ್ಟು ಕುಗ್ಗಿ ಹೋಗಿದ್ದಾರೆ ಅವರು.
ಇನ್ನು ಸರ್ಕಾರಿ ಆಸ್ಪತ್ರೆಗಳು ಹೌಸ್ಪುಲ್ ಆಗಿವೆ. ರೋಗಿಗಳ ನೂಕು ನುಗ್ಗಲು ಪರಿಸ್ಥಿತಿ ಉಂಟಾಗಿ ಇರುವ ಕಡಿಮೆ ಸಂಖ್ಯೆಯ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡಲು ಹೆಣಗಾಡುತ್ತಿದ್ದಾರೆ.
ಈ ಕೂಡಲೇ ವೈದ್ಯರು ಮುಷ್ಕರ ನಿಲ್ಲಿಸಿ ಕರ್ತವ್ಯಕ್ಕೆ ಹಾಜರಾಗದಿದ್ದರೆ ಪರಿಸ್ಥಿತಿ ಇನ್ನಷ್ಟು ವಿಷಮಕ್ಕೆ ಹೋಗುವ ಸಾಧ್ಯತೆ ಇದೆ.