ರಮೇಶ್ ಜಾರಕಿಹೊಳಿ ದೆಹಲಿಯಿಂದ ವಾಪಸ್, ಸಿದ್ದರಾಮಯ್ಯ ಜೊತೆ ಇಂದು ಭೇಟಿ
ಬೆಳಗಾವಿ, ಜನವರಿ 02: ಸಂಪುಟ ವಿಸ್ತರಣೆ ಆದಂದಿನಿಂದಲೂ ಯಾರ ಕೈಗೂ ಸಿಗದೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ನಡುಕ ಹುಟ್ಟಿಸಿದ್ದ ಶಾಸಕ ರಮೇಶ್ ಜಾರಕಿಹೊಳಿ ನಿನ್ನೆ ರಾತ್ರಿ ದೆಹಲಿಯಿಂದ ವಾಪಸ್ಸಾಗಿದ್ದಾರೆ.
ಸಂಪುಟ ವಿಸ್ತರಣೆ ಬಳಿಕ ಸಚಿವ ಸ್ಥಾನ ಕಿತ್ತುಕೊಂಡಿದ್ದಕ್ಕೆ ಬೇಸರಗೊಂಡಿದ್ದ ರಮೇಶ್ ಜಾರಕಿಹೊಳಿ ನವದೆಹಲಿಗೆ ಹೋಗಿದ್ದರು. ಅಲ್ಲಿ ಬಿಜೆಪಿಯ ಮುಖಮಡರುಗಳ ಜೊತೆ ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿತ್ತು. ಇದೇ ಸಮಯದಲ್ಲಿ ಯಡಿಯೂರಪ್ಪ ಸಹ ದೆಹಲಿಗೆ ಹೋಗಿದ್ದು ಅನುಮಾನಕ್ಕೆ ಇನ್ನಷ್ಟು ಪುಷ್ಠಿ ನೀಡಿತ್ತು.
ಈಗ ಸತತ ಒಂಬತ್ತು ದಿನಗಳ ನಂತರ ತಮ್ಮ ಕ್ಷೇತ್ರ ಗೋಕಾಖ್ಗೆ ರಮೇಶ್ ಜಾರಕಿಹೊಳಿ ವಾಪಸ್ ಬಂದಿದ್ದು, ಇಂದು ಬೆಳಿಗ್ಗೆ ಬೆಳಗಾವಿಗೆ ಬಂದಿದ್ದಾರೆ ಎನ್ನಲಾಗಿದೆ.

ರಮೇಶ್ ಜಾರಕಿಹೊಳಿ ರಾಜ್ಯಕ್ಕೆ ವಾಪಸ್ಸಾಗಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ಕಾಂಗ್ರೆಸ್ ನಾಯಕರು ಚುರುಕಾಗಿದ್ದು, ರಮೇಶ್ ಜಾರಕಿಹೊಳಿ ಅವರನ್ನು ಸಂಪರ್ಕಿಸುವ ಯತ್ನ ಮಾಡುತ್ತಿದ್ದಾರೆ. ರಮೇಶ್ ಸಹೋದರ ಸತೀಶ್ ಅವರು ಈಗಾಗಲೇ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯ ಅವರು ಇಂದು ರಾತ್ರಿ ರಮೇಶ್ ಜಾರಕಿಹೊಳಿ ಜೊತೆ ಮಾತುಕತೆ ನಡೆಸಿ ಅವರನ್ನು ಸಮಾಧಾನಪಡಿಸಲು ಯತ್ನಿಸುವ ಸಾಧ್ಯತೆ ದಟ್ಟವಾಗಿದೆ.












Click it and Unblock the Notifications