ಗೋವಾ ಸರ್ಕಾರದ್ದು 'ಕೀಳು ರಾಜಕಾರಣ': ಎಂ.ಬಿ.ಪಾಟೀಲ್
ಬೆಳಗಾವಿ, ಡಿಸೆಂಬರ್ 22: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ನಿನ್ನೆ ಗೋವಾ ಮುಖ್ಯಮಂತ್ರಿ ಅವರು ಬರೆದ ಪತ್ರವನ್ನು ಮುಂದಿಟ್ಟುಕೊಂಡು ಖಂಡಿತಾ ಮಹದಾಯಿ ನೀರು ತಂದೇ ತರುತ್ತೇನೆ ಎಂದಿರುವ ಬೆನ್ನಲ್ಲೆ ಇಂದು ರಾಜ್ಯ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಸುದ್ದಿಗೋಷ್ಠಿ ಮಾಡಿ ಮಹದಾಯಿ ವಿವಾದದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್ ಮಹದಾಯಿ ವಿವಾದ ಬಗೆಹರಿಸಲು ಕಾಂಗ್ರೆಸ್ ಸರ್ಕಾರದಿಂದ ಆಗಿರುವ ಕಾರ್ಯಗಳ ಪಟ್ಟಿ ನೀಡಿದರು. ಯಡಿಯೂರಪ್ಪ ಅವರ ಮಹದಾಯಿ ಹೋರಾಟ ಚುನಾವಣಾ ಗಿಮಿಕ್ ಎಂದರು.

'ಗೋವಾ ಚುನಾವಣೆಗೆ ಮುಂಚೆ ಮತ್ತು ನಂತರ ಸಿದ್ದರಾಮಯ್ಯ ಅವರು, ಗೋವಾ ಸಿಎಂ ಗೆ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದರು. ಆಗ ಅಲ್ಲಿನ ನೀರಾವರಿ ಸಚಿವ ಪಾಲೇಕರ್ ಅವರು ಕೆಟ್ಟ ಶಬ್ದ ಬಳಸಿ "ಡರ್ಟಿ ಪಾಲಿಟಿಕ್ಸ್" ಅಂತ ಪ್ರತಿಕ್ರಿಯೆ ಬರೆದು ನಮ್ಮ ಮುಖ್ಯಮಂತ್ರಿಗಳನ್ನು ಅಪಮಾನ ಮಾಡಿದ್ದರು ಎಂದು ಹೇಳಿದರು.
ಮನೊಹರ್ ಪರಿಕ್ಕರ್ ಸಂವಿಧಾನಾತ್ಮಕವಾಗಿ ಸರ್ಕಾರಕ್ಕೆ ಪತ್ರ ಬರಿಬೇಕಿತ್ತು. ಆದರೆ ಯಡಿಯೂರಪ್ಪನವರಿಗೆ ಬರೆದಿದ್ದಾರೆ. ಇದು 'ಡರ್ಟಿ ಪಾಲಿಟಿಕ್ಸ್' ಎಂದ ಅವರು ಇದೊಂದು ಚುನಾವಣಾ ತಂತ್ರ ಅಷ್ಟೆ ಎಂದು ಜರಿದರು.
'ನಮಗೆ ಪತ್ರ ಬರೆದಿಲ್ಲ ಅನ್ನುವುದು ನಮ್ಮ ಬೇಸರ ಅಲ್ಲ, ಜನರ ಹಾಗೂ ರೈತರ ಸಲುವಾಗಿ ಪ್ರತಿಷ್ಠೆ ಬದಿಗಿಟ್ಟು ರಾಜ್ಯದ ಹಿತದೃಷ್ಠಿಯಿಂದ ಯಾವುದೇ ಪ್ರತಿಷ್ಠೆಗೆ ಒಳಗಾಗದೇ ರಾಜ್ಯ ಸರ್ಕಾರವು ಯಾವುದೇ ಸ್ಥಳ ಹಾಗೂ ಯಾವುದೇ ದಿನಾಂಕದಂದು ಚರ್ಚಿಸಲು ಸಿದ್ಧವಾಗಿದೆ. ಆದರೆ ಈ ವಿಚಾರವನ್ನು ಒಂದೇ ಸಭೆಯಲ್ಲಿ ಇತ್ಯರ್ಥಗೊಳಿಸಬೇಕು ಎಂದು ಅವರು ಹೇಳಿದರು.
ಮಹಾದಾಯಿ ಟ್ರಿಬ್ಯುನಲ್ ನಲ್ಲಿ ನಾವು 36.558 ಟಿಎಂಸಿ ನೀರು ಕೇಳಿದ್ದೀವೆ, ಹಾಗೂ ರಾಜ್ಯಕ್ಕೆ 2002ರಲ್ಲಿ ಕೇಂದ್ರ ಸರ್ಕಾರದ ನಿಲುವಿನಂತೆ ಈಗಾಗಲೇ 7.56 ಟಿಎಂಸಿ ನೀರನ್ನು ತುರ್ತಾಗಿ ಬಳಸಲು ಅನುವು ಮಾಡಿಕೊಟ್ಟಲ್ಲಿ ಅನುಕೂಲವಾಗಲಿದೆ ಎನ್ನುವುದು ನಮ್ಮ ನಿಲುವು. ಈ ಕುರಿತು ಚರ್ಚಿಸಲು ಕೂಡಲೇ ಎರಡು-ಮೂರು ದಿನದಲ್ಲಿ ಸಭೆ ಕರೆಯಬೇಕೆಂಬುದು ನಮ್ಮ ಕೋರಿಕೆ ಎಂದು ಅವರು ಹೇಳಿದರು.
ಸಿಎಂ ಸಿದ್ದರಾಮಯ್ಯ ತಮ್ಮ ಪೂರ್ವ ನಿಯೋಜಿತ ಕಾರ್ಯಕ್ರಮ ಬಿಟ್ಟು ಮಹದಾಯಿ ಸಂಬಂಧಿತ ಮಾತುಕತೆಗೆ ಬರಲು ಸಿದ್ದರಿದ್ದಾರೆ. ಆದರೆ ಹಂತ ಹಂತದ ಸಭೆಗಳ ಮೂಲಕ ವಿಳಂಬ ಮಾಡುವುದು ಬೇಡ. ಇದು ಕೇವಲ ರಾಜಕೀಯ ಆಗಬಾರದು ಎಂದು ಮನವಿ ಮಾಡಿಕೊಂಡರು.












Click it and Unblock the Notifications