ಚಿಕ್ಕೋಡಿಯಲ್ಲಿ ಮತ್ತೆ ನೀರಿನೊಂದಿಗೆ ಬಂತು ಮೊಸಳೆ
ಚಿಕ್ಕೋಡಿ, ಸೆಪ್ಟೆಂಬರ್ 10: ಉತ್ತರ ಕರ್ನಾಟಕದ ಜನರಲ್ಲಿ ಪ್ರವಾಹದ ಭೀತಿ ಒಂದೆಡೆಯಾದರೆ, ಮತ್ತೊಂದೆಡೆ ಆ ಪ್ರವಾಹದ ನೀರಿನೊಂದಿಗೆ ಬರುತ್ತಿರುವ ಹಾವು, ಮೊಸಳೆಗಳ ಭೀತಿಯೂ ಕಾಡುತ್ತಿದೆ. ಕೃಷ್ಣಾ ನದಿಯ ನೀರಿನ ಮಟ್ಟದಲ್ಲಿ ಭಾರೀ ಏರಿಕೆಯಾಗಿದ್ದು, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮಕ್ಕೆ ಪ್ರವಾಹದ ನೀರಿನೊಂದಿಗೆ ಮೊಸಳೆ ಕೂಡ ಬಂದಿದೆ.
ಸತ್ತಿ ಗ್ರಾಮದ ನಂದೇಶ್ವರ ರಸ್ತೆಯ ಅತ್ತಾರ ಜನವಸತಿ ಪ್ರದೇಶದ ಕಡೆ ಮೊಸಳೆ ಬಂದು ಸೇರಿಕೊಂಡಿದೆ. ತೋಟದಲ್ಲಿ ಕೆಲಸ ಮಾಡುತ್ತಿರುವವರಿಗೆ ಏನೋ ಶಬ್ದ ಕೇಳಿಬಂದಿದ್ದು, ಸ್ಥಳಕ್ಕೆ ಬಂದು ನೋಡಿದಾಗ ಅಲ್ಲಿ ಮೊಸಳೆ ಇರುವುದು ಕಂಡುಬಂದಿದೆ. ನಂತರ ಮೊಸಳೆಯನ್ನು ಹರಸಾಹಸ ಪಟ್ಟು ಜನರು ಹಗ್ಗದಿಂದ ಕಟ್ಟಿ ಹಾಕಿದ್ದಾರೆ. ಮೊಸಳೆ ಸೆರೆ ಹಿಡಿದು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಅಥಣಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದು ಮೊಸಳೆಯನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಜನರಲ್ಲಿ ಮಾತ್ರ ಆತಂಕ ದೂರವಾಗಿಲ್ಲ.

ಕಳೆದ ತಿಂಗಳು ಬೆಳಗಾವಿಯಲ್ಲಿ ಪ್ರವಾಹ ಸಂಭವಿಸಿದಾಗಲೂ ಇದೇ ರೀತಿ ಮೊಸಳೆಗಳು ಊರು ಸೇರಿದ್ದವು. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಚಿಂಚಲಿ ಪಟ್ಟಣದ ಅಜಿತ ನಗರದಲ್ಲಿ ಭಾರಿ ಗಾತ್ರದ ಮೊಸಳೆಯೊಂದು ಮನೆಯೊಂದರ ಛಾವಣಿ ಏರಿ ಕೂತು ಜನರಲ್ಲಿ ಆತಂಕ ಉಂಟು ಮಾಡಿತ್ತು. ಪ್ರವಾಹದಿಂದಾಗಿ ಹಾವು, ಚೇಳು ಇನ್ನೂ ಇತರ ಅಪಾಯಕಾರಿ ಜೀವಿಗಳು ಮನೆಗಳನ್ನು ಪ್ರವೇಶಿಸಿದ್ದು, ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದ್ದವು.












Click it and Unblock the Notifications