ಕೊಯ್ನಾ ಜಲಾಶಯದಿಂದ ಸತತ ನೀರು ಬಿಡುಗಡೆ; ಕೃಷ್ಣಾ ನದಿ ಹೊರಹರಿವು ಹೆಚ್ಚಳ
ಬೆಳಗಾವಿ, ಆಗಸ್ಟ್ 19: ಮಹಾರಾಷ್ಟ್ರದ ಸಾತಾರಾ ಜಿಲ್ಲೆಯಲ್ಲಿರುವ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಕಳೆದೊಂದು ವಾರದಿಂದ ನಿರಂತರವಾಗಿ ನೀರು ಬಿಡಲಾಗುತ್ತಿದೆ. ಹೀಗಾಗಿ ಕೃಷ್ಣಾ ನದಿ ಹೊರಹರಿವು 2 ಲಕ್ಷ ಕ್ಯೂಸೆಕ್ಸ್ ಸಮೀಪಿಸಿದೆ.
ಇಂದಿನ ಮಾಹಿತಿ ಪ್ರಕಾರ 1.95 ಕ್ಯೂಸೆಕ್ಸ್ ಒಲಹರಿವು ಇದೆ. ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಕೊಯ್ನಾ ಜಲಾಶಯದಿಂದ 56 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಕೊಯ್ನಾ ಜಲಾಶಯಕ್ಕೆ ಒಳಹರಿವು ಜಾಸ್ತಿ ಆಗಿದೆ.
ಮಲಪ್ರಭಾ ಒಳಹರಿವು ದಿಢೀರ್ ಕುಸಿತ; ನಿಟ್ಟುಸಿರುಬಿಟ್ಟ ನದಿಪಾತ್ರದ ಜನ
ಹೀಗಾಗಿ ಕೊಯ್ನಾ ಜಲಾಶಯದಿಂದ ಕೃಷ್ಣಾಗೆ ನದಿಗೆ ನೀರು ಬಿಡುಗಡೆ ಮಾಡಲಾಗುತ್ತಿದೆ. ಮಳೆ ನಿಂತರೆ ಮಾತ್ರ ಕೊಯ್ನಾದಿಂದ ನೀರು ಬರುವ ಪ್ರಮಾಣ ತಗ್ಗಲಿದೆ ಎಂದು ಇಲ್ಲಿನ ನೀರಾವರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೃಷ್ಣಾ ನದಿಯ ಒಳಹರಿವು ಹೆಚ್ಚುತ್ತಿರುವ ಕಾರಣ ರಾಯಬಾಗ ತಾಲೂಕಿನ ಭಾವನಸೌದತ್ತಿ ಗ್ರಾಮದ ಸುಗಂಧ ದೇವಿ ದೇವಸ್ಥಾನ ಜಲಾವೃತವಾಗಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ದೇವಸ್ಥಾನಕ್ಕೆ ಭಕ್ತರ ಆಗಮನ ನಿಷೇಧಿಸಲಾಗಿದೆ. ನದಿ ಪಾತ್ರದಲ್ಲಿ ಎನ್.ಡಿ.ಆರ್.ಎಫ್ ತಂಡಗಳ ನಿಯೋಜನೆ ಮಾಡಲಾಗಿದ್ದು, ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ.