ಪ್ರವಾಹ: ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಯಡಿಯೂರಪ್ಪ
ಬೆಳಗಾವಿ, ಆಗಸ್ಟ್ 07: ಪ್ರವಾಹದಿಂದ ಜೀವ ಕಳೆದುಕೊಂಡ ವ್ಯಕ್ತಿಗಳ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಪರಿಹಾರವನ್ನು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ.
ಪ್ರವಾಹ ಪೀಡಿತ ಬೆಳಗಾವಿ ಜಿಲ್ಲೆಯ ನಿರಾಶ್ರಿತರ ಶಿಬಿರಕ್ಕೆ ಭೇಟಿ ನೀಡಿದ ಸಿಎಂ ಯಡಿಯೂರಪ್ಪ ಅವರು ನಿರಾಶ್ರಿತರೊಂದಿಗೆ ಮಾತನಾಡಿ ಅವರಿಗೆ ಧೈರ್ಯ ತುಂಬಿದರು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪರಿಹಾರ ಕಾರ್ಯಗಳ ಬಗ್ಗೆ ಮಾಹಿತಿ ಹಂಚಿಕೊಂಡರು.
ಪ್ರವಾಹ ಪರಿಸ್ಥಿತಿ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅಪಘಾತಕ್ಕೆ ಈಡಾಗಿ ಮೃತಪಟ್ಟ ಪಿಎಸ್ಐ ವೀರಣ್ಣ ಲಟ್ಟಿ ಅವರ ಕುಟುಂಬಕ್ಕೆ ಐವತ್ತು ಲಕ್ಷ ರೂಪಾಯಿ ನೀಡುವುದಾಗಿಯೂ ಸಿಎಂ ಅವರು ಇದೇ ಸಮಯದಲ್ಲಿ ಘೊಷಿಸಿದರು.
ಜಿಲ್ಲೆಯ 106 ಗ್ರಾಮಗಳು ಜಲಾವೃತಗೊಂಡಿದ್ದು, 29089 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ಆರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ 35, 40 ವರ್ಷದಿಂದ ಆಗದ ಅನಾಹುತ ಆಗಿದೆ, ಮಹಾರಾಷ್ಟ್ರದಲ್ಲಿ ಕೂಡಾ ಮಳೆ ಹೆಚ್ಚಾಗಿರುವುದೇ ಇದಕ್ಕೆ ಕಾರಣ ಎಂದು ಯಡಿಯೂರಪ್ಪ ಅವರು ಹೇಳಿದರು.

ಎನ್ಡಿಆರ್ಎಫ್, ಎಸ್ಡಿಆರ್ಎಫ್ ಬಳಕೆ
ರಕ್ಷಣಾ ಕಾರ್ಯಕ್ಕಾಗಿ ಎಸ್ಡಿಆರ್ಎಫ್ ಬಳಕೆ ಮಾಡಲಾಗುತ್ತಿದ್ದು ಎನ್ಡಿಆರ್ಎಫ್ ತಂಡವು ಎರಡು ದಿನಗಳಲ್ಲಿ ತಂಡಗಳು ಬರಲಿವೆ. ಅಗತ್ಯ ಬಿದ್ದರೆ ಸೇನೆಯ ನೆರವನ್ನೂ ಪಡೆಯಲಾಗುತ್ತದೆ. ಪರಿಸ್ಥಿತಿಯನ್ನು ನಿಭಾಯಿಸಲು ಅಧಿಕಾರಿಗಳ ತಂಡ ಸಜ್ಜಾಗಿದೆ ಎಂದು ಯಡಿಯೂರಪ್ಪ ಭರವಸೆ ನೀಡಿದರು.

ಜಿಲ್ಲಾಧಿಕಾರಿ ಮೇಲೆ ಗರಂ ಆದ ಬಿಎಸ್ವೈ
ಜಿಲ್ಲೆಯ ಗ್ರಾಮವೊಂದರಲ್ಲಿ ಎರಡು ದಿನದಿಂದಲೂ ಮನೆಯ ಮೇಲೆ ಕುಳಿತು ರಕ್ಷಣೆಗೆ ಬೇಡುತ್ತಿರುವ ದಂಪತಿಯ ರಕ್ಷಣೆಯ ಬಗ್ಗೆ ಕೇಳಲಾದ ಪ್ರಶ್ನೆಗೆ, 'ರಕ್ಷಣೆಗೆ ಏನು ಕ್ರಮ ಕೈಗೊಂಡಿದ್ದೀರೆಂದು' ಯಡಿಯೂರಪ್ಪ ಅವರು ಜಿಲ್ಲಾಧಿಕಾರಿ ಅವರನ್ನು ಪ್ರಶ್ನಿಸಿದರು.
ಯಡಿಯೂರಪ್ಪ ಅವರಿಗೆ ಉತ್ತರಿಸಿದ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ, ಎರಡು ಹೆಲಿಕಾಪ್ಟರ್ಗಳನ್ನು ತರಿಸಲು ವ್ಯವಸ್ಥೆ ಮಾಡಲಾಗಿತ್ತು, ಆದರೆ ಅವರು ಮಳೆ ಹೆಚ್ಚಿದ್ದ ಕಾರಣ ಬೆಳಗಾವಿ ತಲುಪಿಲ್ಲ, ಯಲಹಂಕದ ವಾಯುನೆಲೆಯಲ್ಲಿ ಇವೆ ಎಂದು ಹೇಳಿದರು. ಜಿಲ್ಲಾಧಿಕಾರಿ ಉತ್ತರಕ್ಕೆ ತೃಪ್ತರಾಗದ ಯಡಿಯೂರಪ್ಪ 'ಹೆಲಿಕಾಪ್ಟರ್ಗಳು ಯಲಹಂಕದಲ್ಲಿ ಇದ್ದರೆ ಪ್ರಯೋಜನವೇನು, ಅವನ್ನು ಕೂಡಲೇ ಇಲ್ಲಿಗೆ ಕರೆತಂದು ದಂಪತಿಗಳನ್ನು ಉಳಿಸುವ ಕಾರ್ಯ ಮಾಡಿ' ಎಂದು ಎತ್ತರಿಸಿದ ದನಿಯಲ್ಲಿ ಗದರಿದರು.

ಇನ್ನೂ ಎರಡು ದಿನ ಇಲ್ಲೇ ಇರುತ್ತೇನೆ: ಯಡಿಯೂರಪ್ಪ
ಇನ್ನೂ ಎರಡು ದಿನಗಳ ಕಾಲ ಇಲ್ಲಿಯೇ ಇರುತ್ತೇನೆಂದು ಹೇಳಿದ ಯಡಿಯೂರಪ್ಪ, ನಾಳೆ ಚಿಕ್ಕೋಡಿ ಹತ್ತಿರದ ಪ್ರದೇಶ ಭೇಟಿ, ಘಟಪ್ರಭಾ ನದಿ ಪ್ರವಾಹ, ಹುಕ್ಕೇರಿ ತಾಲೂಕು, ನಿಪ್ಪಾಣಿ ತಾಲೂಕುಗಳಿಗೆ ಭೇಟಿ ನೀಡುವುದಾಗಿ ಮಾಹಿತಿ ನೀಡಿದರು. ಕೇಂದ್ರ ಸರ್ಕಾರಕ್ಕೆ ಪ್ರವಾಹದ ಬಗ್ಗೆ ಈಗಾಗಲೇ ಮಾಹಿತಿ ನೀಡಿದ್ದೇನೆ ಎಂದು ಅವರು ಹೇಳಿದರು.

ಮಹಾದಾಯಿ ಬಗ್ಗೆ ಮೋದಿ ಜೊತೆ ಮಾತು: ಬಿಎಸ್ವೈ
ಮಹದಾಯಿ ಯೋಜನೆ ಬಗ್ಗೆ ಈಗಾಗಲೇ ಮೋದಿ ಅವರ ಬಳಿ ಮಾತನಾಡಿದ್ದೇನೆ ಎಂದ ಸಿಎಂ, ಕೃಷ್ಣಾ ನದಿಗೆ ನೀರು ಬಿಡುವ ಬಗ್ಗೆ ಮಹಾರಾಷ್ಟ್ರ ಸಿಎಂ ಜೊತೆಯೂ ಮಾತುಕತೆ ಆಗಿದೆ ಎಂದು ಹೇಳಿದರು.












Click it and Unblock the Notifications