ಸಂಗೊಳ್ಳಿ ರಾಯಣ್ಣನ ದೇಶಭಕ್ತಿ, ಸ್ವಾಮಿನಿಷ್ಠೆ ಯುವಕರಿಗೆ ಆದರ್ಶ: ಸಿಎಂ
ಬೆಳಗಾವಿ, ಡಿಸೆಂಬರ್ 23: ಸಂಗೊಳ್ಳಿ ರಾಯಣ್ಣ ಅವರ ತ್ಯಾಗ ಬಲಿದಾನವನ್ನು ಸಹ ಸ್ಮರಿಸುವಂತಹ ಕಾರ್ಯವನ್ನು ನಾವು ಮಾಡುತ್ತಿದ್ದೇವೆ. ಈ ಉದ್ದೇಶಕ್ಕಾಗಿ ರಾಯಣ್ಣನ ಹೆಸರಿನಲ್ಲಿ ಸೈನಿಕ ಶಾಲೆಯನ್ನು ಸಹ ರೂ.264 ಕೋಟಿ ವೆಚ್ಚದಲ್ಲಿ ಆರಂಭಿಸುವ ಜೊತೆಗೆ ಸಂಗೊಳ್ಳಿ ಮತ್ತು ನಂದಗಡಗಳನ್ನು ಯಾತ್ರಾ ಸ್ಥಳಗಳಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸಂಗೊಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು ರಾಯಣ್ಣನ ದೇಶಭಕ್ತಿ ಮತ್ತು ಸ್ವಾಮಿಭಕ್ತಿ ಯುವಕ ಯುವತಿಯರಿಗೆ ಪ್ರೇರಣೆಯಾಗಲಿ, ತನ್ಮೂಲಕ ನಾಡಿನಾದ್ಯಂತ ದೇಶಪ್ರೇಮ ಬೆಳೆಯಲಿ ಎಂಬ ಉದ್ದೇಶದಿಂದ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.

ನಮ್ಮ ಸರ್ಕಾರ ಮೊಟ್ಟ ಮೊದಲ ಬಾರಿಗೆ ಕಿತ್ತೂರು ರಾಣಿ ಚೆನ್ನಮ್ಮನ ಜಯಂತಿಯನ್ನು ಅಕ್ಟೋಬರ್ 23ರಂದು ಸರ್ಕಾರದ ವತಿಯಿಂದ ಆಚರಣೆ ಮಾಡಿದ್ದೇವೆ ಎಂಬ ಹೆಮ್ಮೆಇದೆ ಎಂದ ಅವರು ಬ್ರಿಟೀಷರ ವಿರುದ್ಧ ಹೋರಾಡಿದ ವೀರ ಮಾತೆಗೆ ಸಲ್ಲಿಸುವ ಗೌರವವಿದು ಎಂದರು.
ಐತಿಹಾಸಿಕ ಕಿತ್ತೂರು ಕ್ಷೇತ್ರವನ್ನು ರೂ.275 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ನಾವು ನಿರ್ಧರಿಸಿದ್ದೇವೆ. ಸುಮಾರು 64 ಕೆರೆಗಳಿಗೆ ರೂ.250 ಕೋಟಿ ವೆಚ್ಚದಲ್ಲಿ ನೀರು ತುಂಬಿಸುವ ಯೋಜನೆಯನ್ನು ಜಾರಿಗೊಳಿಸುತ್ತಿದ್ದೇವೆ. ಇದೆಲ್ಲದರ ಹಿಂದೆ ಶಾಸಕ ಇನಾಂದಾರ್ ಅವರ ಸತತ ಪರಿಶ್ರಮವಿದೆ ಎಂದರು.












Click it and Unblock the Notifications