ಇದು ಪ್ರತ್ಯೇಕ ರಾಜ್ಯದ ಕೂಗಲ್ಲ: ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ
Recommended Video

ಬೆಳಗಾವಿ, ಜುಲೈ.31: ಉತ್ತರ ಕರ್ನಾಟಕ ಅಭಿವೃದ್ಧಿಗೆ ಆಗ್ರಹಿಸಿ ಇಲ್ಲಿ ಎಲ್ಲ ಸಮುದಾಯದ ಹಾಗೂ ಎಲ್ಲ ಸಂಪ್ರದಾಯದ ಸ್ವಾಮಿಗಳು ಬಂದಿದ್ದಾರೆ. ನಮ್ಮ ಪ್ರಮುಖ ಬೇಡಿಕೆ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಎಂದು ಹುಕ್ಕೇರಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದರು.
ಉತ್ತರ ಕರ್ನಾಟಕ ತಾರತಮ್ಯ ವಿರೋಧಿಸಿ ಇಂದು ಮಂಗಳವಾರ ಬೆಳಗಾವಿ ಸುವರ್ಣ ಸೌಧದ ಎದುರು ನಡೆದ ಧರಣಿ ಸತ್ಯಾಗ್ರಹಕ್ಕೆ ಆಗಮಿಸಿ ಮಾತನಾಡಿದ ಅವರು ಇದು ಪ್ರತ್ಯೇಕ ರಾಜ್ಯದ ಕೂಗಲ್ಲ. ಇಲ್ಲಿನ ಸ್ಥಳೀಯ ರಾಜಕೀಯ ಮುಖಂಡರು ಹಾಗೂ ಜನಪ್ರತಿಧಿಗಳು ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಧ್ವನಿ ಎತ್ತಬೇಕು ಎಂದರು.
ಮಾಜಿ ಶಾಸಕ ಉಮೇಶ ಕತ್ತಿ ಮಾತನಾಡಿ, ಉತ್ತರ ಕರ್ನಾಟಕ ಅಭಿವೃದ್ಧಿಗೆ ಧ್ವನಿ ಎತ್ತಿದ್ದು ನಾನು. ನಮ್ಮ ಹಿರಿಯರೆಲ್ಲರೂ ಅಖಂಡ ಕರ್ನಾಟಕವನ್ನು ಅಭಿವೃದ್ಧಿಗೊಳಿಸಬೇಕು. ಪದೇ ಪದೆ ಮಾಧ್ಯಮಗಳಲ್ಲಿ ಉ.ಕ ಬಗ್ಗೆ ಬಿಜೆಪಿ ಚರ್ಚೆ ಮಾಡಿದ್ದು ನಿಜ.

ರಾಜ್ಯದ ಮುಖ್ಯಮಂತ್ರಿಗಳು ಉ.ಕ ಅಭಿವೃದ್ದಿ ಮಾಡಬೇಕು. ಕೃಷ್ಣಾ ಬಿ ಸ್ಕೀಮ್ ಅನ್ನು ಸಿದ್ದರಾಮಯ್ಯ ಸರಕಾರ ಮತ್ತು ಕುಮಾರಸ್ವಾಮಿ ಅವರು ನಿರ್ಲಕ್ಷಿಸಿದ್ದಾರೆ. ನಾವು ಅಖಂಡ ಕರ್ನಾಟಕವನ್ನು ಕಟ್ಟೋಣ. ಅಭಿವೃದ್ಧಿ ಮಾಡದೆ ಇದ್ದಲ್ಲಿ ಪ್ರತ್ಯೇಕ ರಾಜ್ಯದ ಕೂಗನ್ನು ಎಬ್ಬಿಸಬೇಕಾಗುತ್ತದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಮಾತನಾಡಿ, ಉತ್ತರ ಕರ್ನಾಟಕಕ್ಕೆ ನೂರಕ್ಕೆ ನೂರಷ್ಟು ಅನ್ಯಾಯವಾಗಿದೆ. ಮಠಾಧೀಶರು ಯಾವುದೇ ಆದೇಶ ನೀಡಿದರೂ ಪಾಲಿಸುತ್ತೇವೆ. ಅಗತ್ಯ ಬಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ .ಸಿಎಂ ಕುಮಾರಸ್ವಾಮಿ ಅವರು ಮಠಾಧೀಶರ ಬೇಡಿಕೆಗಳನ್ನ ಆಲಿಸಬೇಕು ಎಂದರು.
ನಾಗನೂರು ರುದ್ರಾಕ್ಷಿಮಠ ಸಿದ್ದರಾಮ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತಿತರರು ಹಾಜರಿದ್ದರು.

ಇದೇ ಸಂದರ್ಭದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಮುಖಂಡರಾದ ಅಡಿವೇಶ ಇಟಗಿ ಮತ್ತು ನಾಗೇಶ ಗೋಲಶೆಟ್ಟಿ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಆಗ ನಾಗೇಶ ಗೋಲಶೆಟ್ಟಿ ಅವರನ್ನು ಪೊಲೀಸರು ಬಂಧಿಸಿ, ಪ್ರತಿಭಟನಾ ವೇದಿಕೆಗೆ ತಂದಿದ್ದ ಪ್ರತ್ಯೇಕ ರಾಜ್ಯದ ಧ್ವಜವನ್ನು ವಶಪಡಿಸಿಕೊಳ್ಳಲಾಯಿತು.












Click it and Unblock the Notifications