ಬೆಂಕಿ ಇಟ್ಟವರಿಗೆ ಗುಂಡಿಕ್ಕಿ ಕೊಲ್ಲಿ ಎಂದ ಕೇಂದ್ರ ಸಚಿವರು!
ಬೆಳಗಾವಿ, ಆಗಸ್ಟ್.12: ಬೆಂಗಳೂರಿನ ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ) ಮತ್ತು ದೇವರ ಜೀವನಹಳ್ಳಿ(ಡಿ.ಜೆ.ಹಳ್ಳಿ)ಯಲ್ಲಿ ದಾಂಧಲೆ ನಡೆಸಿದವರನ್ನು ಸ್ಥಳದಲ್ಲೇ ಗುಂಡಿಕ್ಕಿ ಕೊಲ್ಲಬೇಕು ಎಂದು ಕೇಂದ್ರ ಸಚಿವ ಸುರೇಶ್ ಅಂಗಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Recommended Video
ಬೆಳಗಾವಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಸುರೇಶ್ ಅಂಗಡಿಯವರು ಬೆಂಗಳೂರಿನಲ್ಲಿ ನಡೆದ ಘಟನೆಯು ವ್ಯವಸ್ಥಿತಿ ಸಂಚು ಎಂದು ಆರೋಪಿಸಿದರು. ಶಾಸಕರ ಮನೆ, ಪೊಲೀಸ್ ಠಾಣೆ, ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ಹಿಂದೆ ಬೆಳಗಾವಿಯಲ್ಲಿ ಬೀಮ್ಸ್ ಆಸ್ಪತ್ರೆ ಮುಂದೆ ಆಂಬ್ಯುಲೆನ್ಸಗೆ ಬೆಂಕಿ ಹಚ್ಚಲಾಗಿತ್ತು. ಇದೆಲ್ಲ ದೇಶದ್ರೋಹಿಗಳ ಕೃತ್ಯ ಎಂದರು.
ರಾಜ್ಯ ಬಿಜೆಪಿ ಸರ್ಕಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಬಿಂಬಿಸಲು ಕೆಲವು ದುಷ್ಠ ಶಕ್ತಿಗಳು ಯತ್ನಿಸಿವೆ. ಪತ್ರಕರ್ತರು, ಅಮಾಯಕರ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಕೇಂದ್ರ ಸಚಿವ ಸುರೇಶ್ ಅಂಗಡಿಯವರು ಕಿಡಿ ಕಾರಿದ್ದಾರೆ.

ಶೂಟ್ ಆಂಡ್ ಸೈಟ್ ಆರ್ಡರ್:
ಈ ಹಿಂದೆ ರೈಲಿಗೆ ಬೆಂಕಿ ಹಚ್ಚಿದ ಸಂದರ್ಭದಲ್ಲಿ ಪೊಲೀಸರಿಗೆ ಶೂಟ್ ಆಂಡ್ ಸೈಟ್ ಮಾಡಬೇಕು ಎಂದು ನಾನೇ ಹೇಳಿದ್ದೆನು ಎಂದು ಸಚಿವ ಸುರೇಶ್ ಅಂಗಡಿ ಹೇಳಿದರು. ಅಲ್ಲದೇ ಬೆಂಗಳೂರಿನಲ್ಲಿ ಬೆಂಕಿ ಹಚ್ಚಿದವರಿಗೆ ಪೊಲೀಸರು ಗುಂಡಿಕ್ಕಿ ಕೊಲ್ಲಬೇಕು ಎಂದು ಹೇಳಿದರು. ಬೆಂಗಳೂರಿನಲ್ಲಿ ನಡೆದ ಘಟನೆ ನಿಭಾಯಿಸಲು ರಾಜ್ಯ ಸರ್ಕಾರ ಸಮರ್ಥವಾಗಿದೆ. ಸಿಎಂ ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೋಮ್ಮಾಯಿ ಸಮರ್ಥರಿದ್ದಾರೆ ಎಂದರು.
ಸೈಬರ್ ಕ್ರೈಂಗೆ ದೂರು ನೀಡಲಿಲ್ಲ:
ಒಂದು ಸಮುದಾಯದ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದಲ್ಲಿ ಸೈಬರ್ ಕ್ರೈಂ ಪೊಲೀಸರಿಗೆ ಈ ಬಗ್ಗೆ ದೂರು ನೀಡಬಹುದಿತ್ತು. ಪೊಲೀಸರು ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುತ್ತಿದ್ದರು. ಅದನ್ನು ಬಿಟ್ಟು ದಾಂಧಲೆ ನಡೆಸಿದವರ ವಿರುದ್ಧ ಇದೀಗ ಸರ್ಕಾರವು ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಎಂದು ಸಚಿವ ಸುರೇಶ್ ಅಂಗಡಿ ತಿಳಿಸಿದರು.












Click it and Unblock the Notifications