ಅಮಿತ್ ಶಾಗೆ ದೂರು ನೀಡಲು ಕೆಲ ಬಿಜೆಪಿ ಶಾಸಕರ ನಿರ್ಧಾರ
ಬೆಳಗಾವಿ, ಜನವರಿ 15: ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ವರಿಷ್ಠ ಅಮಿತ್ ಶಾ ಅವರಿಗೆ ದೂರು ನೀಡಲು ಕೆಲ ಬಿಜೆಪಿ ಶಾಸಕರು ನಿರ್ಧಾರ ಮಾಡಿದ್ದಾರೆ ಎನ್ನುವ ವಿಚಾರಕ್ಕೆ ಡಿಸಿಎಂ ಲಕ್ಷ್ಮಣ್ ಸವದಿ ಪ್ರತಿಕ್ರಿಯೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಡಿಸಿಎಂ ಲಕ್ಷ್ಮಣ್ ಸವದಿ, ನಮ್ಮಲ್ಲಿರುವ ಸಣ್ಣಪುಟ್ಟ ವ್ಯತ್ಯಾಸ ಬಗ್ಗೆ ಮನೆ ಯಜಮಾನರಿಗೆ ದೂರು ನೀಡುವುದರಲ್ಲಿ ತಪ್ಪೇನಿಲ್ಲ. ನಮ್ಮ ಮನೆ ಯಜಮಾನರಿಗೆ ದೂರು ಕೊಡಲಿ, ಅವರು ಎಲ್ಲ ಸರಿಪಡಿಸುತ್ತಾರೆ ಎಂದರು.
ಈಗಾಗಲೇ ಸಿಎಂ ನಿಮ್ಮ ದೂರು ವರಿಷ್ಠರಿಗೆ ನೀಡಿ, ಸಾರ್ವಜನಿಕವಾಗಿ ಮಾತನಾಡಬೇಡಿ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ವರಿಷ್ಠರ ಜೊತೆ ಚರ್ಚಿಸಿ ಸಂಪುಟ ಪುನಾರಚನೆ ನಿರ್ಧಾರ ಮಾಡಲಿದ್ದಾರೆ ಎಂದು ಡಿಸಿಎಂ ಸವದಿ ಹೇಳಿದರು.

ಸಿಎಂ ಯಡಿಯೂರಪ್ಪ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆ ವಿಚಾರವಾಗಿ ಮಾತನಾಡಿದ ಲಕ್ಷ್ಮಣ್ ಸವದಿ, ಮಂತ್ರಿ ಸ್ಥಾನ ಸಿಗದಿದ್ದಾಗ ಆಕ್ರೋಶದಲ್ಲಿ ಕೆಲ ಮಾತುಗಳು ಬಂದಿರುತ್ತವೆ. ಆ ಮಾತುಗಳನ್ನು ನಾವ್ಯಾರು ಅಪಾರ್ಥ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಯತ್ನಾಳ್ ಸಹ ಪಕ್ಷದ ಹಳೆಯ ಕಾರ್ಯಕರ್ತರು ಎಂದು ತಿಳಿಸಿದರು.
ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೂ ಕೆಲ ಅಸಮಾಧಾನ ಇರಬಹುದು, ಮುಂದಿನ ದಿನಗಳಲ್ಲಿ ಎಲ್ಲಾ ಸರಿ ಹೋಗುತ್ತದೆ. ಸಿಎಂ ಯಡಿಯೂರಪ್ಪ ಕುಟುಂಬದವರೇ ಅಧಿಕಾರದಲ್ಲಿದ್ದಾರೆ ಎಂಬ ಆರೋಪಕ್ಕೆ ಉತ್ತರಿಸಿದ ಡಿಸಿಎಂ ಲಕ್ಷ್ಮಣ್ ಸವದಿ, ಯಡಿಯೂರಪ್ಪ ಸಿಎಂ ಇದ್ದಾರೆ, ಅವರ ಒಬ್ಬ ಮಗ ಸಂಸದ ಇದ್ದಾರೆ, ಇನ್ನೊಬ್ಬ ಮಗ ರಾಜ್ಯ ಬಿಜೆಪಿ ಉಪಾಧ್ಯಕ್ಷ ಇದ್ದಾರೆ.
ಯಾವ ಅಳಿಯನೂ, ಇಲ್ಲ ತಮ್ಮನ ಮಕ್ಕಳು ಇಲ್ಲ. ಏಕೆ ತಲೆ ಕೆಡಿಸಿಕೊಳ್ತೀರಿ ಎಂದರು. ಇದೇ ವೇಳೆ ಸಿಡಿ ಹೊರ ಬಂದಾಗ ಅದರ ಬಗ್ಗೆ ಚರ್ಚೆ ಮಾಡೋಣ ಎಂದು ಸಾರಿಗೆ ಸಚಿವರೂ ಲಕ್ಷ್ಮಣ್ ಸವದಿ ಸ್ಪಷ್ಟಪಡಿಸಿದರು.












Click it and Unblock the Notifications