ಬೆಳಗಾವಿ ಉಪ ಚುನಾವಣೆಗೆ ಒಂದೇ ವಾರ: ಏನಾಗುತ್ತಿದೆ ಕಾಂಗ್ರೆಸ್ ನಲ್ಲಿ, ಯಾಕೀ ಗೊಂದಲ?
ಬೆಳಗಾವಿ ಉಪ ಚುನಾವಣೆಯ ಪ್ರಚಾರದ ಭರಾಟೆ ಜೋರಾಗಿ ಸಾಗುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿಯವರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದರೂ, ಕೈ ಪಕ್ಷಕ್ಕೆ ಹೋಲಿಸಿದರೆ, ಕಮಲದ ಅಬ್ಬರ ಸದ್ಯಕ್ಕೆ ಜೋರಾಗಿಯೇ ಸಾಗುತ್ತಿದೆ.
ರಾಜ್ಯ ಮಟ್ಟದ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಮುಖಂಡರು ಜಂಟಿಯಾಗಿ ಸತೀಶ್ ಜಾರಕಿಹೊಳಿ ಪರವಾಗಿ ಪ್ರಚಾರ ನಡೆಸುತ್ತಿದ್ದರೂ, ಜಾರಕಿಹೊಳಿಗೆ ಯಾಕೋ ಏನೋ ಏಕಾಂಗಿ ಭಾವ ಕಾಡುತ್ತಿದೆ.
ಬೆಳಗಾವಿ ಚುನಾವಣಾ ಕಣದಿಂದ ಸತೀಶ್ ಜಾರಕಿಹೊಳಿ ಹಿಂದಕ್ಕೆ ಸುದ್ದಿ: ಸ್ಪಷ್ಟನೆ
ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಮುಖಂಡರ ಜೊತೆಗೂಡಿ ಬಿಜೆಪಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರೆ, ಕಾಂಗ್ರೆಸ್ಸಿಗೆ ಸ್ಥಳೀಯ ಮುಖಂಡರ ಬೆಂಬಲ ಅಷ್ಟಾಗಿ ಸಿಗದೇ ಇರುವುದು ಕಾಂಗ್ರೆಸ್ಸಿಗೆ ತಲೆನೋವಾಗಿ ಪರಿಣಮಿಸುತ್ತಿದೆ.
ಬಹಿರಂಗ ಪ್ರಚಾರಕ್ಕೆ ಇನ್ನು ಕೇವಲ ಆರು ದಿನಗಳು ಇರುವಾಗ, ಕೆಪಿಸಿಸಿ ಅಧ್ಯಕ್ಷರ ಬಳಿ ತಮ್ಮ ಅಸಂತೋಷವನ್ನು ಜಾರಕಿಹೊಳಿ ತೋಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಎಲ್ಲವನ್ನೂ ಸರಿ ಪಡಿಸೋಣ ಎನ್ನುವ ಭರವಸೆಯೂ ಡಿಕೆಶಿಯಿಂದ ಸಿಕ್ಕಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
ಬೆಳಗಾವಿ ಉಪ ಚುನಾವಣೆ ಬಿಜೆಪಿಗೆ 'ಕಬ್ಬಿಣದ ಕಡಲೆ': ಕಾರಣಗಳು ಐದು
ಒಲ್ಲದ ಮನಸ್ಸಿನಿಂದ ಸ್ಪರ್ಧೆಗೆ ನಿಂತಿರುವ ಸತೀಶ್ ಜಾರಕಿಹೊಳಿ
ಒಲ್ಲದ ಮನಸ್ಸಿನಿಂದ ಸ್ಪರ್ಧೆಗೆ ನಿಂತಿರುವ ಸತೀಶ್ ಜಾರಕಿಹೊಳಿ ತಮ್ಮ ಆಪ್ತರಲ್ಲಿ ಸ್ಥಳೀಯ ಮುಖಂಡರು ಪ್ರಚಾರಕ್ಕೆ ಬರದೇ ಇರುವುದರ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಕ್ಷೇತ್ರದ ಹೆಚ್ಚಿನ ಕಡೆ ಬಿಜೆಪಿ ಶಾಸಕರು ಇರುವುದರಿಂದ ಒಗ್ಗಟ್ಟಿನಿಂದ ಹೋರಾಡಿದರೆ ಮಾತ್ರ ಗೆಲುವು ಸಾಧ್ಯ ಎಂದು ಜಾರಕಿಹೊಳಿ ರಾಜ್ಯ ಮುಖಂಡರಲ್ಲಿ ಹೇಳಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿವೆ.
ಸ್ಥಳೀಯ ಮುಖಂಡರಾದ ಪ್ರಕಾಶ್ ಹುಕ್ಕೇರಿ
ಸ್ಥಳೀಯ ಮುಖಂಡರಾದ ಪ್ರಕಾಶ್ ಹುಕ್ಕೇರಿ ಇದುವರೆಗೂ ಸತೀಶ್ ಜಾರಕಿಹೊಳಿ ಪರವಾಗಿ ಪ್ರಚಾರಕ್ಕೆ ಬಂದಿಲ್ಲ. ಈ ಹಿಂದೆ, ಸುರೇಶ್ ಅಂಗಡಿಯವರು ನಿಧನರಾದಾಗ, ಉಪ ಚುನಾವಣೆಗೆ ಅಂಗಡಿಯವರ ಕುಟುಂಬದವರು ಕಣಕ್ಕೆ ಇಳಿದರೆ, ನಾನು ಕಾಂಗ್ರೆಸ್ ಪರ ಪ್ರಚಾರ ಮಾಡುವುದಿಲ್ಲ, ಅಂಗಡಿ ಕುಟುಂಬದ ಪರವಾಗಿ ಪ್ರಚಾರ ನಡೆಸುವುದಕ್ಕೂ ಹಿಂದೇಟು ಹಾಕುವುದಿಲ್ಲ ಎನ್ನುವ ಮಾತನ್ನು ಹುಕ್ಕೇರಿ ಹೇಳಿದ್ದರು. ಇದು ಜಾರಕಿಹೊಳಿ ಅಸಮಾಧಾನಕ್ಕೆ ಕಾರಣವಾಗಿದೆ.
ಸ್ಥಳೀಯ ಮುಖಂಡರನ್ನು ಪ್ರಚಾರಕ್ಕೆ ಕರೆತನ್ನಿ
ಇನ್ನು, ಲಕ್ಷ್ಮೀ ಹೆಬ್ಬಾಳ್ಕರ್ ಅಲ್ಲಲ್ಲಿ ಪ್ರಚಾರವನ್ನು ನಡೆಸುತ್ತಿದ್ದರೂ, ಪೂರ್ಣ ಪ್ರಮಾಣದಲ್ಲಿ ಅವರು ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿಲ್ಲ. ಇನ್ನೊಬ್ಬರು ಸ್ಥಳೀಯ ಮುಖಂಡರಾದ ಅಶೋಕ್ ಪಟ್ಟಣ್ ಕೂಡಾ ಪ್ರಚಾರದಲ್ಲಿ ಕಾಣಿಸಿಕೊಂಡಿಲ್ಲ. ಇವರೆಲ್ಲಾ ಸ್ಥಳೀಯವಾಗಿ ಪ್ರಭಾವೀ ಮುಖಂಡರು ಆಗಿರುವುದರಿಂದ ಇವರ ಮನವೊಲಿಸುವಂತೆ ಜಾರಕಿಹೊಳಿಯವರು ಡಿಕೆಶಿಗೆ ಮನವಿ ಮಾಡಿದ್ದಾರೆಂದು ಹೇಳಲಾಗುತ್ತಿದೆ.
ಕಾಂಗ್ರೆಸ್ಸಿಗೆ ಈ ಮಾತು ಹೇಳುವಂತಿಲ್ಲ
ದಿ.ಸುರೇಶ್ ಅಂಗಡಿಯವರ ಪತ್ನಿ ಮಂಗಲ ಪರವಾಗಿ ಸಚಿವ ಜಗದೀಶ್ ಶೆಟ್ಟರ್ ಪ್ರಚಾರದ ನೇತೃತ್ವವನ್ನು ವಹಿಸಿಕೊಂಡಿದ್ದಾರೆ. ಇವರಿಗೆ ಸ್ಥಳೀಯ ಮತ್ತು ರಾಜ್ಯ ಮಟ್ಟದ ನಾಯಕರು ಸಾಥ್ ನೀಡುತ್ತಿದ್ದಾರೆ. ಎಲ್ಲರೊಂದಿಗೆ ಸುರೇಶ್ ಅಂಗಡಿಯವರಿಗೆ ಇದ್ದ ಉತ್ತಮ ಬಾಂಧವ್ಯದಿಂದಾಗಿ ಬಿಜೆಪಿಗೆ ಪ್ರಚಾರದ ವಿಚಾರದಲ್ಲಿ ಯಾವುದೇ ತೊಡಕು ಆಗುತ್ತಿಲ್ಲ. ಆದರೆ, ಕಾಂಗ್ರೆಸ್ಸಿಗೆ ಈ ಮಾತು ಹೇಳುವಂತಿಲ್ಲ.