ಬಿಎಸ್ ವೈ ಆಡಿಯೋ ಎಫೆಕ್ಟ್: ದಿಢೀರನೇ ಬೆಂಗಳೂರಿಗೆ ತೆರಳಿದ ರಮೇಶ ಜಾರಕಿಹೊಳಿ
ಬೆಳಗಾವಿ, ನವೆಂಬರ್ 3: ಬೆಳಗಾವಿ ಜಿಲ್ಲೆ ಗೋಕಾಕ ಕ್ಷೇತ್ರದ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಭಾನುವಾರ ದಿಢೀರನೇ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ತೆರಳಿದ್ದು, ಇತರ ಅನರ್ಹ ಶಾಸಕರ ಜತೆ ಸೇರಿ ಸಭೆ ನಡೆಸುವ ಸಾಧ್ಯತೆ ಇದೆ.
ನಮಗೂ ಅನರ್ಹ ಶಾಸಕರಿಗೂ ಸಂಬಂಧ ಇಲ್ಲ ಎಂದು ಅನರ್ಹ ಶಾಸಕರ ಕುರಿತಾಗಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿಕೆ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನ ಉಂಟಾಗಿದೆ.
ಇದಕ್ಕೂ ಮುನ್ನ ಬಿಜೆಪಿ ಸಭೆಯಲ್ಲಿ ಯಡಿಯೂರಪ್ಪ ಬೇರೆ ಮಾತನಾಡಿದ್ದರು. ಈ ಕುರಿತಾಗಿ ಕಾಂಗ್ರೆಸ್ ನಿಂದ ರಾಜ್ಯಪಾಲರಿಗೆ ಹಾಗೂ ಸುಪ್ರೀಂ ಕೋರ್ಟ್ ನಲ್ಲಿ ದೂರು ನೀಡಲು ಮುಂದಾಗಿದ್ದು, ಒಟ್ಟಾರೆಯಾಗಿ ಮುಂದೇನು ಎಂಬ ಪ್ರಶ್ನೆ ಎದುರಾಗಿದೆ.

ಅತೃಪ್ತ ಶಾಸಕರ ತ್ಯಾಗದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ನಾನು ಮುಖ್ಯಮಂತ್ರಿ ಆಗಿದ್ದೇನೆ. ಅವರ ತ್ಯಾಗದ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂದು ಹುಬ್ಬಳ್ಳಿಯಲ್ಲಿ ಹೇಳಿದ್ದರು ಬಿ. ಎಸ್. ಯಡಿಯೂರಪ್ಪ. ಆ ನಂತರ ವಿರೋಧ ಪಕ್ಷಗಳು ದೂರು ನೀಡಲು ಮುಂದಾಗಿದ್ದವು. ಆಪರೇಷನ್ ಕಮಲ ಮಾಡಿದ್ದಾಗಿ ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದವು.
ಇನ್ನು ಯಡಿಯೂರಪ್ಪ ಅವರ ಆಡಿಯೋ ಬಗ್ಗೆ ರಮೇಶ ಜಾರಕಿಹೊಳಿ ವಕೀಲರ ಜತೆ ಚರ್ಚಿಸುವ ಸಾಧ್ಯತೆ ಇದೆ. ಆದರೆ ಮಾಧ್ಯಮಗಳಿಗೆ ರಮೇಶ ಜಾರಕಿಹೊಳಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.












Click it and Unblock the Notifications