Vande Bharat Express: ವೇಳಾಪಟ್ಟಿ ಬದಲು, ಬೆಂಗಳೂರು-ಬೆಳಗಾವಿ ನಡುವೆ ವಂದೇ ಭಾರತ್ ರೈಲು
ಬೆಳಗಾವಿ, ನವೆಂಬರ್ 28: ಗಡಿನಾಡು ಬೆಳಗಾವಿ ಜನರ ಬಹಳ ದಿನಗಳ ಬೇಡಿಕೆ ಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು. ಈ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಪೂರ್ಣಗೊಂಡು ಒಂದು ವರ್ಷ ಕಳೆದರೂ ಸಹ ಇನ್ನೂ ಸಹ ರೈಲು ಸೇವೆ ಆರಂಭವಾಗಿಲ್ಲ. ಈ ಕುರಿತು ರೈಲ್ವೆ ಸಚಿವರಿಂದ ಹಿಡಿದು ಪ್ರಧಾನಿ ನರೇಂದ್ರ ಮೋದಿ ತನಕ ಎಲ್ಲರಿಗೂ ಮನವಿ ಸಲ್ಲಿಕೆ ಮಾಡಲಾಗಿದೆ. ಆದರೆ ರೈಲು ಸಂಚಾರ ಯಾವಾಗ ಆರಂಭ ಎಂಬ ಕುರಿತು ಇನ್ನೂ ಸಹ ಖಚಿತವಾದ ಮಾಹಿತಿ ಸಿಕ್ಕಿಲ್ಲ.
ಬುಧವಾರ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಅಶ್ವಿನಿ ವೈಷ್ಣವ್ ಭೇಟಿಯಾದರು. ಬೆಳಗಾವಿ ಭಾಗದ ಹಲವು ರೈಲು ಯೋಜನೆಗಳ ಕುರಿತು ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡುವ ಕುರಿತು ಮತ್ತೆ ಮನವಿ ಸಲ್ಲಿಕೆ ಮಾಡಿದರು.

2023ರ ನವೆಂಬರ್ನಲ್ಲಿ ಬೆಂಗಳೂರು-ಬೆಳಗಾವಿ ನಡುವೆ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ನಡೆದಿತ್ತು. ಈಗ ವೇಳಾಪಟ್ಟಿಯನ್ನು ಬದಲಾವಣೆ ಮಾಡಿ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಬೇಕು ಎಂದು ಬೇಡಿಕೆ ಇಡಲಾಗಿದೆ. ಇದಕ್ಕೆ ರೈಲ್ವೆ ಸಚಿವರು ಸಹ ಸ್ಪಂದಿಸಿದ್ದಾರೆ. ಆದರೆ ಯಾವಾಗ ರೈಲು ಸಂಚಾರ ಆರಂಭ? ಎಂಬುದು ಖಚಿತವಾಗಿಲ್ಲ.
ಜಗದೀಶ್ ಶೆಟ್ಟರ್ ಮಾಹಿತಿ: ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿಯಾದ ಕುರಿತು ಜಗದೀಶ್ ಶೆಟ್ಟರ್ ಫೇಸ್ಬುಕ್ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ. ನವದೆಹಲಿಯ ರೈಲ್ವೆ ಭವನದ ಕಚೇರಿಯಲ್ಲಿ ಭೇಟಿ ಮಾಡಿ, ನಮ್ಮ ಬೆಳಗಾವಿ ಜಿಲ್ಲೆಯ ವಿವಿಧ ಯೋಜನೆಗಳ ಕುರಿತು ಚರ್ಚಿಸಲಾಯಿತು ಎಂದು ಹೇಳಿದ್ದಾರೆ.
ಬೆಂಗಳೂರು-ಧಾರವಾಡ ನಡುವೆ ಸದ್ಯ ಚಲಿಸುತ್ತಿರುವ ವಂದೇ ಭಾರತ್ ರೈಲು ಸಂಚಾರವನ್ನು ಬೆಳಗಾವಿ ನಗರದ ವರೆಗೆ ವಿಸ್ತರಿಸುವ ಬಗ್ಗೆಯೂ ನಾವು ಚರ್ಚೆ ನಡೆಸಿದ್ದು, ಸಮಯವನ್ನು ಹೊಂದಿಸಿಕೊಂಡು ರೈಲು ಸೇವೆಯನ್ನು ಬೆಳಗಾವಿಯ ವರೆಗೆ ವಿಸ್ತರಿಸುವುದು ಸಾಧ್ಯ ಎಂದು ರೈಲ್ವೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದು, ಅದರಂತೆ ಈ ಬೇಡಿಕೆಯನ್ನು ಸಹ ಖಂಡಿತ ಈಡೇರಿಸುವುದಾಗಿ ರೈಲ್ವೆ ಸಚಿವರು ಭೇಟಿಯ ವೇಳೆ ತಿಳಿಸಿದರು ಎಂದು ಶೆಟ್ಟರ್ ಮಾಹಿತಿ ನೀಡಿದ್ದಾರೆ.
ಬೆಂಗಳೂರು-ಬೆಳಗಾವಿ ನಡುವೆ ವಂದೇ ಭಾರತ್ ರೈಲು ಬೇಕು ಎಂಬ ಬೇಡಿಕೆಗೆ ರೈಲ್ವೆ ಇಲಾಖೆ ಬೇಗನೇ ಸ್ಪಂದಿಸಿತು. ರೈಲಿನ ಪ್ರಾಯೋಗಿಕ ಸಂಚಾರವೂ ಸಹ ಯಶಸ್ವಿಯಾಗಿ ನಡೆಯಿತು. ಆದರೆ ರೈಲು ಸಂಚಾರ ಮಾತ್ರ ಆರಂಭವಾಗಲಿಲ್ಲ. ಬೆಳಗಾವಿ-ಬೆಂಗಳೂರು ವಂದೇ ಭಾರತ್ ರೈಲು ಯಾವಾಗ? ಎಂದು ಜನರು ಪದೇ ಪದೇ ಕೇಳುತ್ತಿದ್ದಾರೆ.
ಸದ್ಯ ರೈಲು ಸಂಖ್ಯೆ 20662/ 20661 ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವೆ ಸಂಚಾರವನ್ನು ನಡೆಸುತ್ತಿದೆ. ಈ ರೈಲಿಗೆ ಉತ್ತಮ ಸ್ಪಂದನೆ ಸಿಕ್ಕಿದ್ದು ಸಂಪೂರ್ಣ ಭರ್ತಿಯಾಗಿ ಸಂಚಾರ ನಡೆಸುತ್ತಿದೆ. ಬೆಳಗಾವಿಗೆ ಹೋಗುವ ಜನರು ಬೆಂಗಳೂರಿನಿಂದ ವಂದೇ ಭಾರತ್ ರೈಲಿನಲ್ಲಿ ಹುಬ್ಬಳ್ಳಿ ಅಥವ ಧಾರವಾಡಕ್ಕೆ ಬಂದು ಅಲ್ಲಿಂದ ಬೆಳಗಾವಿಗೆ ಬಸ್ ಮೂಲಕ ಸಂಚಾರ ನಡೆಸಬೇಕಿದೆ. ಆದ್ದರಿಂದ ಬೆಳಗಾವಿ ತನಕ ರೈಲು ವಿಸ್ತರಣೆ ಮಾಡಬೇಕು ಎಂದು ಬೇಡಿಕೆ ಇಡಲಾಗಿದೆ.
ರೈಲು ಸಂಖ್ಯೆ 20662 ಧಾರವಾಡ-ಕೆಎಸ್ಆರ್ ಬೆಂಗಳೂರು ನಡುವೆ 6 ದಿನ (ಮಂಗಳವಾರ ಹೊರತುಪಡಿಸಿ) ಸಂಚಾರ ನಡೆಸುತ್ತಿದೆ. ರೈಲು 13:15ಕ್ಕೆ ಧಾರವಾಡದಿಂದ ಹೊರಟು, ಎಸ್ಎಸ್ಎಸ್ ಹುಬ್ಬಳ್ಳಿ 13:35/ 13:40, 15:38/ 15:40 ದಾವಣಗೆರೆ, 18:18/ 18:20 ತುಮಕೂರು, 18.58/19:00 ಯಶವಂತಪುರ, 19:45 ಕೆಎಸ್ಆರ್ ಬೆಂಗಳೂರು ಆಗಮಿಸಿ/ ನಿರ್ಗಮಿಸಲಿದೆ.
ರೈಲು ಸಂಖ್ಯೆ 20661 ಕೆಎಸ್ಆರ್ ಬೆಂಗಳೂರು-ಧಾರವಾಡ 6 ದಿನ (ಮಂಗಳವಾರ ಹೊರತುಪಡಿಸಿ) 5:45ಕ್ಕೆ ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ ಹೊರಟು, ಯಶವಂತಪುರ 05.55/ 05.57, ತುಮಕೂರು 06.32/ 06.34, ದಾವಣಗೆರೆ 09.15/ 09.17, ಎಸ್ಎಸ್ಎಸ್ ಹುಬ್ಬಳ್ಳಿ 11.00/ 11.05, ಧಾರವಾಡ 12.10 ಆಗಮಿಸಿ/ ನಿರ್ಗಮಿಸಲಿದೆ. ರೈಲು ಬೆಳಗಾವಿ ತನಕ ವಿಸ್ತರಣೆಯಾದರ ವೇಳಾಪಟ್ಟಿಯೂ ಬದಲಾಗಲಿದೆ.












Click it and Unblock the Notifications