Vande Bharat Express: ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲು, ವೇಳಾಪಟ್ಟಿ
ಬೆಳಗಾವಿ, ಫೆಬ್ರವರಿ 15: ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಲು ಒಪ್ಪಿಗೆ ಸಿಕ್ಕಿದೆ. ನವೆಂಬರ್ 21, 2023ರಂದು ಪ್ರಾಯೋಗಿಕ ಸಂಚಾರವನ್ನು ನಡೆಸಿತ್ತು. ಈಗ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರೈಲನ್ನು ಬೆಳಗಾವಿಗೆ ವಿಸ್ತರಣೆ ಮಾಡಲು ಒಪ್ಪಿಗೆ ನೀಡಿದ್ದು, ಶೀಘ್ರವೇ ಸಂಚಾರ ಆರಂಭವಾಗಲಿದೆ. ಆದರೆ ಯಾವ ವೇಳಾಪಟ್ಟಿ? ಎಂಬ ಕುತೂಹಲ ಉತ್ತರ ಕರ್ನಾಟಕ ಭಾಗದ ಜನರಲ್ಲಿದೆ.
ರೈಲು ಸಂಖ್ಯೆ 20662/ 20661 ಬೆಳಗಾವಿ ತನಕ ವಿಸ್ತರಣೆಯಾಗಲಿದೆ. ತುಮಕೂರು, ದಾವಣಗೆರೆ, ಹುಬ್ಬಳ್ಳಿ, ಧಾರವಾಡದಲ್ಲಿ ನಿಲುಗಡೆ ಹೊಂದಿರುವ ರೈಲು ಬೆಳಗಾವಿ ತನಕ ಸಾಗಲಿದೆ. ಆದ್ದರಿಂದ ನಿಲ್ದಾಣ ಮತ್ತು ವೇಳಾಪಟ್ಟಿ ಬದಲಾಗಲಿದೆಯೇ? ಎಂಬುದು ಸದ್ಯದ ಪ್ರಶ್ನೆ.

ರೈಲ್ವೆ ಇಲಾಖೆ ನವೆಂಬರ್ 21, 2023ರಂದು ಬೆಂಗಳೂರು-ಬೆಳಗಾವಿ ನಡುವೆ ಪ್ರಾಯೋಗಿಕ ಸಂಚಾರವನ್ನು ನಡೆಸಿತ್ತು, ಅದು ಯಶಸ್ವಿಯಾಗಿತ್ತು. ಆದರೆ ರೈಲು ಸೇವೆ ಇನ್ನೂ ಆರಂಭವಾದ ಮೇಲೆ ಪ್ರಾಯೋಗಿಕ ಸಂಚಾರದ ವೇಳಾಪಟ್ಟಿಯನ್ನು ಅನುಸರಿಸಲಾಗುತ್ತದೆಯೇ? ಅಥವ ಹೊಸ ವೇಳಾಪಟ್ಟಿ ಸಿದ್ಧಗೊಳ್ಳಲಿದೆಯೇ? ಕಾದು ನೋಡಬೇಕಿದೆ.
ಧಾರವಾಡ ಸಂಸದ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಅಶ್ವಿನಿ ವೈಷ್ಣವ್ ಭೇಟಿ ಬಳಿಕ ಪೋಸ್ಟ್ ಹಾಕಿದ್ದು, ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಲು ಸಚಿವರು ಸಮ್ಮತಿ ನೀಡಿದ್ದಾರೆ. ರೈಲಿನ ಆರಂಭದ ವೇಳಾಪಟ್ಟಿ ಶೀಘ್ರವೇ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.
ವೇಳಾಪಟ್ಟಿ ಹೀಗಿದೆ: ಕೆಎಸ್ಆರ್ ಬೆಂಗಳೂರು-ಧಾರವಾಡ ನಡುವೆ ಸದ್ಯ ರೈಲು ವಾರದಲ್ಲಿ 6 ದಿನ ಸಂಚಾರ ನಡೆಸುತ್ತಿದೆ. ವಂದೇ ಭಾರತ್ ರೈಲು ಬೆಂಗಳೂರಿನಿಂದ ಬೆಳಗ್ಗೆ 5.45ಕ್ಕೆ ಹೊರಟು, ಧಾರವಾಡಕ್ಕೆ 12.10ಕ್ಕೆ ತಲುಪುತ್ತದೆ. ಧಾರವಾಡದಿಂದ 1.15ಕ್ಕೆ ಹೊರಟು, 7.45ಕ್ಕೆ ಬೆಂಗಳೂರು ನಗರಕ್ಕೆ ವಾಪಸ್ ಆಗಲಿದೆ.
ಇನ್ನು ಬೆಂಗಳೂರು-ಬೆಳಗಾವಿ ನಡುವೆ ಪ್ರಾಯೋಗಿಕ ಸಂಚಾರದ ವೇಳೆ ರೈಲು 7 ಗಂಟೆ 55 ನಿಮಿಷದಲ್ಲಿ ಬೆಳಗಾವಿ ತಲುಪಿತ್ತು. ಈ ವೇಳೆ ರೈಲು ಬೆಂಗಳೂರಿನಿಂದ 5.45ಕ್ಕೆ ಹೊರಟು, ಬೆಳಗಾವಿಯನ್ನು 1.40ಕ್ಕೆ ತಲುಪಿತ್ತು. ಬೆಳಗಾವಿಯಿಂದ 2 ಗಂಟೆಗೆ ಹೊರಟು, ಬೆಂಗಳೂರು ನಗರಕ್ಕೆ 10:10ಕ್ಕೆ ತಲುಪಿತ್ತು. ಇದೇ ವೇಳಾಪಟ್ಟಿ ಇರಲಿದೆಯೇ? ಕಾದು ನೋಡಬೇಕಿದೆ.
ಸದ್ಯದ ಮಾಹಿತಿಗಳ ಪ್ರಕಾರ ಬೆಂಗಳೂರು-ಬೆಳಗಾವಿ ನಡುವೆ ಹೊಸ ವಂದೇ ಭಾರತ್ ರೈಲು ಓಡಿಸಬೇಕೆ? ಅಥವ ಕೆಎಸ್ಆರ್ ಬೆಂಗಳೂರು-ಧಾರವಾಡ ನಡುವಿನ ರೈಲನ್ನು ವಿಸ್ತರಣೆ ಮಾಡಬೇಕೆ? ಎಂಬ ಕುರಿತು ಚರ್ಚೆಗಳು ನಡೆಯುತ್ತಿವೆ. ಇಲಾಖೆ ಅಧಿಕಾರಿಗಳು ಈ ಕುರಿತು ರೈಲ್ವೆ ಮಂಡಳಿ ಅಂತಿಮ ಸೂಚನೆಗಾಗಿ ಕಾಯುತ್ತಿದ್ದಾರೆ.
ಬೆಂಗಳೂರು-ಬೆಳಗಾವಿ ನಡುವಿನ ವಂದೇ ಭಾರತ್ ರೈಲಿಗೆ ಇರುವ ಬೇಡಿಕೆ ಹಿನ್ನಲೆಯಲ್ಲಿ ಕೆಲವು ದಿನಗಳ ಹಿಂದೆ ಪ್ರಹ್ಲಾದ್ ಜೋಶಿ ಹುಬ್ಬಳ್ಳಿಯ ನೈಋತ್ಯ ವಲಯದ ರೈಲ್ವೆ ಜನರಲ್ ಮ್ಯಾನೇಜರ್, ಡಿಆರ್ಎಂ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ವಂದೇ ಭಾರತ್ ರೈಲು ವಿಸ್ತರಣೆ ಬಗ್ಗೆ ವರದಿ ಕೇಳಿದ್ದರು. ಈ ವರದಿಯ ಆಧಾರದ ಮೇಲೆ ಸಚಿವರು ಈಗ ರೈಲು ವಿಸ್ತರಣೆಗೆ ಒಪ್ಪಿಗೆ ಕೊಟ್ಟಿದ್ದಾರೆ.
ಸದ್ಯ ಬೆಳಗಾವಿಯ ಪ್ರಯಾಣಿಕರು ಕೆಎಸ್ಆರ್ ಬೆಂಗಳೂರು-ಧಾರವಾಡ ರೈಲಿನಲ್ಲಿ ಹುಬ್ಬಳ್ಳಿ/ ಧಾರವಾಡ ತನಕ ಸಾಗಿ ಅಲ್ಲಿಂದ ಬಸ್, ಖಾಸಗಿ ವಾಹನದ ಮೂಲಕ ಬೆಳಗಾವಿಗೆ ತೆರಳುತ್ತಿದ್ದಾರೆ. ಆದರೆ ನೇರ ರೈಲು ಸೇವೆ ಆರಂಭವಾದರೆ ಅನುಕೂಲವಾಗಲಿದೆ.
ಈಗಾಗಲೇ ಬೆಳಗಾವಿಗೆ ವಂದೇ ಭಾರತ್ ರೈಲು ಸಂಪರ್ಕವಿದೆ. ಹುಬ್ಬಳ್ಳಿ-ಪುಣೆ ರೈಲು ಬೆಳಗಾವಿಯಲ್ಲಿ ನಿಲುಗಡೆ ಹೊಂದಿದೆ. ಆದರೆ ರಾಜಧಾನಿ ಬೆಂಗಳೂರು-ಬೆಳಗಾವಿ ನಡುವೆ ನೇರ ರೈಲು ಬೇಕು ಎಂಬುದು ಕುಂದಾ ನಗರಿ ಜನರ ಬಹು ವರ್ಷಗಳ ಬೇಡಿಕೆಯಾಗಿದೆ.












Click it and Unblock the Notifications