ಬೆಳಗಾವಿಯಲ್ಲಿ ಮಹಿಳೆಯನ್ನು ಸುಟ್ಟವರು ಸಿಕ್ಕಿಬಿದ್ದರು
ಬೆಳಗಾವಿ, ಫೆ. 26 : ಬೆಳಗಾವಿಯ ನಿಪ್ಪಾಣಿಯಲ್ಲಿ ಮಹಿಳೆಯನ್ನು ಜೀವಂತವಾಗಿ ಸುಟ್ಟು ಹಾಕಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಾಬಾಸಾಹೇಬ ಲಕ್ಷ್ಮಣ ಹಾದಿಕರ ಸಂಬಂಧಿಕನ ನೆರವಿನೊಂದಿಗೆ ತನ್ನ ಮಾಜಿ ಪ್ರೇಯಸಿಯನ್ನು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.
ಬುಧವಾರ ಮಧ್ಯಾಹ್ನ ನಿಪ್ಪಾಣಿಯ ಆಂದೋಲನ ನಗರದ ಬಳಿಯ ಮಾರ್ಕೆಟ್ನಲ್ಲಿ ಜನರ ಮುಂದೆಯೇ ಮಹಿಳೆಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿತ್ತು. ಮೃತಪಟ್ಟ ಮಹಿಳೆಯನ್ನು ರಾಜಶ್ರೀ (35) ಎಂದು ಗುರುತಿಸಲಾಗಿದೆ. ಈಕೆಯ ಮಾಜಿ ಪ್ರಿಯಕರ ಬಾಬಾಸಾಹೇಬ ಲಕ್ಷ್ಮಣ ಹಾದಿಕರನೇ ಆಕೆಯನ್ನು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದ. [ನಿಪ್ಪಾಣಿಯಲ್ಲಿ ಮಹಿಳೆಯನ್ನು ಜೀವಂತವಾಗಿ ಸುಟ್ಟರು]

ಬಂಧಿತ ಆರೋಪಿಗಳನ್ನು ಮಹಾರಾಷ್ಟ್ರದ ಬಾಬಾಸಾಹೇಬ ಲಕ್ಷ್ಮಣ ಹಾದಿಕರ (24) ಮತ್ತು ಕೊಲ್ಲಾಪುರ ಜಿಲ್ಲೆಯ ಕರವೀರ ತಾಲೂಕಿನ ರಾಮದಾಸ ಧೋಂಡಿರಾಮ ಖೋತ (26) ಎಂದು ಗುರುತಿಸಲಾಗಿದೆ. ಇಬ್ಬರೂ ಸೇರಿ ರಾಜಶ್ರೀ ಕುತ್ತಿಗೆಗೆ ಕುತ್ತಿಗೆಗೆ ಹಗ್ಗ ಬಿಗಿದು, ನಂತರ ಬೆಂಕಿ ಹಚ್ಚಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಳು.
ಇಬ್ಬರು ಪ್ರೇಮಿಗಳು : ರಾಜಶ್ರೀ ಮತ್ತು ಬಾಬಾ ಸಾಹೇಬ ಹಿಂದೆ ಪ್ರೇಮಿಗಳಾಗಿದ್ದರು. ಅವರಿಬ್ಬರ ನಡುವೆ ಅನೈತಿಕ ಸಂಬಂಧವೂ ಇತ್ತು. ಕೆಲವು ದಿನಗಳ ಹಿಂದೆ ಇಬ್ಬರು ಜಗಳವಾಡಿದ್ದರು. ಒಬ್ಬರ ಮುಖವನ್ನೊಬ್ಬರು ನೋಡಬಾರದು, ಭೇಟಿಯಾಗಬಾರದು ಎಂದು ದೂರವಾಗಿದ್ದರು.
ಬಾಬಾಸಾಹೇಬನ ಸಂಬಂಧಿಕನಾದ ರಾಮದಾಸ ಅವರು ರಾಜಶ್ರೀ ಅವರಿಗೆ ಕರೆ ಮಾಡಿ ನಿಪ್ಪಾಣಿಗೆ ಬರುವಂತೆ ಮನವಿ ಮಾಡಿದ್ದ. ಇಬ್ಬರ ನಡುವೆ ಸಂಧಾನ ನಡೆಸುವ ಮಾತುಗಳನ್ನಾಡಿದ್ದ. ಅದರಂತೆ ಬುಧವಾರ ರಾಜಶ್ರೀ ಬಂದಿದ್ದರು.
ಆಕೆಯನ್ನು ಮಾರ್ಕೆಟ್ನಲ್ಲಿನ ಪಾಳು ಬಿದ್ದ ಮಳಿಗೆ ಬಳಿ ಕರೆದುಕೊಂಡ ಇಬ್ಬರು ಆರೋಪಿಗಳು, ರಾಜಶ್ರೀ ಜೊತೆ ಜಗಳವಾಡಿ ಆಕೆಯ ಕುತ್ತಿಗೆಗೆ ಹಗ್ಗ ಬಿಗಿದು, ಬೆಂಕಿ ಹಚ್ಚಿ ಅಲ್ಲಿಂದ ಪರಾರಿಯಾಗಿದ್ದರು. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು 6 ಗಂಟೆಗಳಲ್ಲಿ ಅವರನ್ನು ಬಂಧಿಸಿದ್ದಾರೆ.












Click it and Unblock the Notifications