ಬೆಳಗಾವಿ: ಸ್ಮಶಾನದಲ್ಲಿ ಮದುವೆ, ಸತೀಶ್ ಜಾರಕಿಹೊಳಿ ಪೌರೋಹಿತ್ಯ
ಬೆಳಗಾವಿ, ಡಿಸೆಂಬರ್ 06: ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಯುವ ಜೋಡಿಗಳು ಇಂದು ಸ್ಮಶಾನದಲ್ಲಿ ಮದುವೆ ಆಗಿದ್ದಾರೆ.
ಹೌದು, ಮೂಡನಂಬಿಕೆಗಳನ್ನು ಬಡಿದೋಡಿಸಬೇಕು, ವೈಚಾರಿಕತೆ ಬೆಳೆಸಬೇಕು ಎಂಬ ಉದ್ದೇಶದಿಂದ ಸ್ಮಶಾನದಲ್ಲಿ ಮದುವೆ ಮಾಡಲಾಯಿತು. ನವ ವಧು-ವರರಿಗೆ ಸತೀಶ್ ಜಾರಕಿಹೊಳಿ, ಸೇರಿದಂತೆ ಇನ್ನೂ ಹಲವು ಸ್ವಾಮೀಜಿಗಳು ಆಶೀರ್ವಾದ ಮಾಡಿದರು.
ಜಾರಕಿಹೊಳಿ ಅವರ ಮಾನವ ಬಂಧುತ್ವ ವೇದಿಕೆ ವತಿಯಿಂದ ಇಂದು ಪರಿವರ್ತನಾ ದಿನಾಚರಣೆ ಆಚರಿಸಲಾಯಿತು. ಇದೇ ಅಂಗವಾಗಿ ಸ್ಮಶಾನದಲ್ಲಿ ಮದುವೆ ಮಾಡಲಾಯಿತು. ಮದುವೆಯಾದ ಜೋಡಿಗೆ ಸತೀಶ್ ಅವರು ವೈಯಕ್ತಿಕವಾಗಿ 50 ಸಾವಿರ ನೀಡಿದರು. ಮತ್ತು ಮುಂದೆ ಸ್ಮಶಾನದಲ್ಲಿ ಮದುವೆ ಆದವರಿಗೆ 50 ನೀಡುವುದಾಗಿ ಹೇಳಿದರು.
ಬೆಳಗಾವಿಯ ಸದಾಶಿವನಗರದ ಸ್ಮಶಾನದಲ್ಲಿ ಅದೂ ಅಮಾವಾಸ್ಯೆ ದಿನ ಸಂಪಾಜಿ ಜಾಂಬೋಟಿ ಮತ್ತು ರೇಖಾ ಬಾಗೇವಾಡಿ ಜೋಡಿ ದಾಂಪತ್ಯಕ್ಕೆ ಕಾಲಿಟ್ಟರು.

ಸರ್ಕಾರದಿಂದ 2 ಲಕ್ಷ ಕೊಡಿ
ಹೀಗೆ ಸ್ಮಶಾನದಲ್ಲಿ ಮದುವೆಯಾಗಿ ವೈಚಾರಿಕತೆಗೆ ಬೆಂಬಲ ನೀಡುವ ಯುವ ಜೋಡಿಗಳಿಗೆ ಸರ್ಕಾರದಿಂದಲೇ 2 ಲಕ್ಷ ರೂಪಾಯಿ ನೀಡಬೇಕು ಎಂದು ಸತೀಶ್ ಜಾರಕಿಹೊಳಿ ಒತ್ತಾಯಿಸಿದರು. ಈ ಅಧಿವೇಶನದಲ್ಲಿ ಈ ಘೋಷಣೆ ಮಾಡಬೇಕು ಎಂದು ಅವರು ಹೇಳಿದರು.

'ವಿಚಾರಧಾರೆಯಲ್ಲಿ ಬದಲಾವಣೆ ಇಲ್ಲ'
ಆ ನಂತರ ನಡೆದ ಪರಿವರ್ತನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ವೇಳೆ ಅಧಿಕಾರ ಹೋದರೂ ಸಹ ವಿಚಾರಧಾರೆಯಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳುವುದಿಲ್ಲ. ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿ ಮೂರು ಬಾರಿ ಗೆದ್ದಿದ್ದೇನೆ, ಮುಂದಿನ ಬಾರಿಯೂ ಅದನ್ನೇ ಮಾಡುತ್ತೇನೆ ಎಂದಿದ್ದಾರೆ.

ಈ ಹಿಂದೆ ಸಹ ಮಾಡಿದ್ದರು ಸತೀಶ್
ಈ ಹಿಂದೆ ಸಹ ಸತೀಶ್ ಅವರು ಸ್ಮಶಾನದಲ್ಲಿ ಅಡುಗೆ ಮಾಡಿ ಊಟ ತಿಂದು ಅಲ್ಲಿಯೇ ಮಲಗಿ ಮೌಢ್ಯ ವಿರೋಧಿ ದಿನ ಆಚರಣೆ ಮಾಡಿದ್ದರು. ಪ್ರತಿ ಬಾರಿ ಅವರು ರಾಹುಕಾಲದಲ್ಲಿಯೇ ಚುನಾವಣೆ ನಾಮಪತ್ರ ಸಲ್ಲಿಸುವುದು ವಾಡಿಕೆ.

ಬರಗೂರು ರಾಮಚಂದ್ರಪ್ಪ ಹಾಜರು
ಪರಿವರ್ತನಾ ದಿನಾಚರಣೆಯಲ್ಲಿ ಖ್ಯಾತ ವಿಚಾರವಾದಿ ಚಿಂತಕ ಹಾಗೂ ಲೇಖಕ ಸಮಾಜ ಸುಧಾರಕ ಶ್ರೀ ಬರಗೂರು ರಾಮಚಂದ್ರಪ್ಪ ಹಾಗೂ ಶಾಸಕರಾದ ಶ್ರೀ ಸತೀಶ್ ಜಾರಕಿಹೊಳಿ ಮತ್ತು ಮಾನವ ಬಂಧುತ್ವ ವೇದಿಕೆಯ ಸಂಚಾಲಕರಾದ ಶ್ರೀ ರವೀಂದ್ರ ನಾಯಕರವರು, ಸಿದ್ಧರು ಉಪಸ್ಥಿತರಿದ್ದರು.












Click it and Unblock the Notifications