ಆರೋಪ, ಪ್ರತ್ಯಾರೋಪಗಳಿಗೆ ಕಲಾಪ ಬಲಿ
ಬೆಳಗಾವಿ, ನ. 27: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಮೂರನೇ ದಿನದ ಕಲಾಪ ಬೆಳಗ್ಗೆ ಶಾಂತವಾಗಿ ಆರಂಭವಾದರೂ, ಸಂಜೆ ವೇಳಗೆ ರೈತನ ಆತ್ಮಹತ್ಯೆ ಕುರಿತು ಗಲಾಟೆ ನಡೆದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಕಾದಾಟಕ್ಕೆ ಸಾಕ್ಷಿಯಾಯಿತು. ಬಿ.ಎಸ್.ಯಡಿಯೂರಪ್ಪ ಬುಧವಾರ ಬೆಳಗ್ಗೆ ಧರಣಿ ಮುಂದುವರೆಸಿದರು. ಅವರನ್ನು ಮನವೊಲಿಸಲು ಆಗಮಿಸಿದ ಅಂಬರೀಶ್ ಪ್ರಯತ್ನ ಫಲ ನೀಡಲಿಲ್ಲ.
ಬುಧವಾರ ಸದನ ಆರಂಭಗೊಂಡ ತಕ್ಷಣ ವಸತಿ ಸಚಿವ ಅಂಬರೀಶ್ ಯಡಿಯೂರಪ್ಪ ಮನವೊಲಿಸಲು ಪ್ರಯತ್ನಿಸಿದರು. ಅವರನ್ನು ಕರೆತಂದು ಕುರ್ಚಿಯಲ್ಲಿ ಕೂರಿಸಿದರು. ಆದರೆ, ತಕ್ಷಣ ಎದ್ದುನಿಂತ ಯಡಿಯೂರಪ್ಪ ಸದನದ ಬಾವಿಗೆ ತೆರಳಿ ಧರಣಿ ಮುಂದುವರೆಸಿದರು. ಬಿಜೆಪಿಯ ವಿವಿಧ ನಾಯಕರು, ಕೆಲವು ಸಚಿವರು ಯಡಿಯೂರಪ್ಪ ಮನವೊಲಿಸುವ ಕಾರ್ಯ ಮಾಡಿದರು. ಆದರೆ, ಯಶಸ್ವಿಯಾಗಲಿಲ್ಲ. (ಬಿಎಸ್ವೈ, ಸಿದ್ದು ನಡುವೆ ಸದನದಲ್ಲಿ ಮಾತಿನ ಕದನ!)

ಸದನದಲ್ಲಿ ಹೇಳಿದ್ದು, ಕೇಳಿದ್ದು...
* ಯಡಿಯೂರಪ್ಪ ಶಾದಿಭಾಗ್ಯ ಯೋಜನೆಯನ್ನು ಎಲ್ಲಾ ವರ್ಗಗಳಿಗೂ ವಿಸ್ತರಿಸುವಂತೆ ಆಗ್ರಹಿಸಿ ಧರಣಿ ಮುಂದುವರೆಸಿದ್ದಾರೆ. ಒಂದು ವೇಳೆ ಈ ಸಮಯದಲ್ಲಿ ಅವರ ಆರೋಗ್ಯದಲ್ಲಿ ಏರು-ಪೇರು ಉಂಟಾದರೆ ಎಲ್ಲರಿಗೂ ಕೆಟ್ಟ ಹೆಸರು ಬರುತ್ತದೆ ಎಂದು ಜೆಡಿಎಸ್ ಶಾಸಕ ಜಮೀರ್ ಅಹಮದ್ ಖಾನ್ ಆತಂಕ ವ್ಯಕ್ತಪಡಿಸಿದರು. (ಚಿತ್ರಗಳಲ್ಲಿ ನೋಡಿ ಬೆಳಗಾವಿ ಅಧಿವೇಶನ)
* ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಮತ್ತು ಉದ್ಯಮಿ ಅಶೋಕ್ ಖೇಣಿ ಅವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಎಂದು ಕೆರೆದು ಸದನವನ್ನು ನಗುವಿನ ಅಲೆಯಲ್ಲಿ ತೇಲಿಸಿದರು. ಅಂಗನವಾಡಿ ಸುಧಾರಣೆ ಬಗ್ಗೆ ಖೇಣಿ ಇಂಗ್ಲಿಷ್ ನಲ್ಲಿ ಪ್ರಶ್ನೆ ಕೇಳಿದರು, ಅದಕ್ಕೆ ಉತ್ತರ ನೀಡಲು ನಿಂತ ಉಮಾಶ್ರೀ ಸಚಿವರಾದ ಖೇಣಿ ಅವರೇ ಎಂದ ತಕ್ಷಣ ಸದನದಲ್ಲಿ ನಗುವಿನ ಅಲೆ ಎದ್ದಿತು. ಸದನದ ಕ್ಷಮೆ ಕೇಳಿ ಅವರು ತಮ್ಮ ಉತ್ತರ ಮುಂದುವರೆಸಿದರು.
* ಮೂರು ವರ್ಷಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮಿನಿ ವಿಧಾನಸೌಧ ನಿರ್ಮಿಸಲಾಗುವುದು ಎಂದು ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ವಿಧಾನಪರಿಷತ್ತಿನಲ್ಲಿ ಭರವಸೆ ನೀಡಿದ್ದಾರೆ. ಕಾಂಗ್ರೆಸ್ ಸದದ್ಯ ಟಿ.ಜಾನ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ 495 ಕೋಟಿ ರೂ ಅನುದಾನ ಮೀಸಲಾಗಿಡಲಾಗಿದೆ ಎಂದರು. ಮಿನಿ ವಿಧಾನಸೌಧವಿಲ್ಲದ ಜಿಲ್ಲೆಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಸ್ಥಳ ಗುರುತಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಸದನಕ್ಕೆ ತಿಳಿಸಿದರು.
* ಬಗರ್ ಹುಕುಂ ಸಮಿತಿಯಲ್ಲಿದ್ದ ಭ್ರಷ್ಟಾಚಾರವನ್ನು ತಡೆಗಟ್ಟಲು ಹೊಸ ಸಮಿತಿಯೊಂದನ್ನು ರಚಿಸಲಾಗುವುದು ಎಂದು ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ. ಶಾಸಕರು ಅಧ್ಯಕ್ಷರಾಗಿರುವ ಈ ಸಮಿತಿಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರೂ ಸದಸ್ಯರಾಗುವುವಂತೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು. ಸದ್ಯ ಇರುವ ಸಮಿತಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ದೂರಿದೆ. ಈ ಹಿನ್ನಲೆಯಲ್ಲಿ ಹೊಸ ಸಮಿತಿ ರಚಿಸಲು ತೀರ್ಮಾನಿಸಲಾಗಿದ್ದು, ಅದರ ಕರಡು ರಚಿಸಲಾಗಿದೆ. ಮುಂದಿನ ಅಧಿವೇಶನದಲ್ಲಿ ಅದನ್ನು ಮಂಡಿಸಿ ಒಪ್ಪಿಗೆ ಪಡೆದು ಸಮಿತಿ ರಚಿಸಲಾಗುವುದು ಎಂದು ಹೇಳಿದರು.
* ಮಂಗಳವಾರ ಸಿಬಿಐ ವಿಶೇಷ ನ್ಯಾಯಾಲಯದಿಂದ ಸದನದಲ್ಲಿ ಭಾಗವಹಿಸಲು ಅನುಮತಿ ಪಡೆದಿದ್ದ ಕಾರವಾರ ಶಾಸಕ ಸತೀಶ್ ಸೈಲ್ ಮತ್ತು ಕೂಡ್ಲಿಗಿ ಶಾಸಕ ನಾಗೇಂದ್ರ ಬುಧವಾರ ಸದನಲ್ಲಿ ಭಾಗವಹಿಸಿದ್ದರು. ಅವರು ಯಾರೊಂದಿಗೂ ಮಾತುಕತೆ ನಡೆಸಬಾರದು ಮತ್ತು ಮಾಧ್ಯಮಗಳಿಗೆ ಹೇಳಿಕೆ ನೀಡಬಾರದು ಎಂದು ನ್ಯಾಯಾಲಯ ಷರತ್ತು ವಿಧಿಸಿದ್ದರಿಂದ ಮೌನವಾಗಿದ್ದರು. (ನಾಗೇಂದ್ರ, ಸತೀಸ್ ಸೈಲ್ ಅಧಿವೇಶನಕ್ಕೆ ಹೋಗಬಹುದು)
* ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗಾಗಿ ಸರ್ಕಾರ 109 ಕೋಟಿ ರೂ.ಗಳನ್ನು ನೀಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ. ವಿಧಾನಸಭೆಯಲ್ಲಿ ಈ ಕುರಿತು ಹೇಳಿಕೆ ನೀಡಿದ ಅವರು, ರಸ್ತೆಗಳ ಕಾಮಗಾರಿಗಳ ಗುಣಮಟ್ಟದ ಕುರಿತು ಪರಿಶೀಲನೆ ನಡೆಸಲು ಶಾಸಕರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ ಎಂದು ಹೇಳಿದರು. ಟಾರ್ ರಸ್ತೆಯ ಗುಂಡಿಗಳನ್ನು ಮುಚ್ಚಲು ಪ್ರತಿ ಕಿ.ಮೀಗೆ 10 ಲಕ್ಷ, ಜಲ್ಲಿ ರಸ್ತೆ 6 ಲಕ್ಷ ಮತ್ತು ಮಣ್ಣಿನ ರಸ್ತೆ 5 ಲಕ್ಷ ಹಣ ನಿಗದಿ ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.












Click it and Unblock the Notifications