ಅಧಿವೇಶನ : ಬುಧವಾರ ಸದನದಲ್ಲಿ ಏನಾಯ್ತ?
ಬೆಳಗಾವಿ, ಡಿ.4 : ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಎಂಟನೇ ದಿನದ ಕಲಾಪ ಆರಂಭವಾಗಿದೆ. ಅಧಿವೇಶನವನ್ನು ವಿಸ್ತರಣೆ ಮಾಡುವ ಯಾವುದೇ ಆಲೋಚನೆ ಸರ್ಕಾರದ ಮುಂದಿಲ್ಲ. ಆದ್ದರಿಂದ ಶುಕ್ರವಾರ ಅಧಿವೇಶನ ಅಂತ್ಯಗೊಳ್ಳಲಿದೆ. ಬಾಕಿ ಉಳಿದಿರುವ ಎರಡು ದಿನಗಳ ಅಧಿವೇಶನದಲ್ಲಿ ಚರ್ಚಿಸುವ ಅಂಶಗಳ ಕುರಿತು ಶಾಸಕರ ಸಲಹೆ ಪಡೆಯಲು ಸಿಎಂ ಸಿದ್ದರಾಮಯ್ಯ ಬುಧವಾರ ಶಾಸಕಾಂಗ ಪಕ್ಷದ ಸಭೆ ನಡೆಸಿದರು.
ಶಾಸಕಾಂಗ ಪಕ್ಷದ ಸಭೆ ನಂತರ ಅಧಿವೇಶನ ಆರಂಭವಾಗಿದೆ. ಎಂಟನೇ ದಿನದ ಅಧಿವೇಶನ ಆರಂಭವಾಗುತ್ತಿದ್ದಂತೆ ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಬರಪೀಡಿತ ತಾಲೂಕುಗಳನ್ನು ಗುರುತಿಸುವಲ್ಲಿಯೂ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿ ಸದನದ ಬಾವಿಗೆ ಇಳಿದು ಆಕ್ರೋಶ ವ್ಯಕ್ತಪಡಿಸಿದರು. ಈ ವಿಷಯ ಕುರಿತು ಚರ್ಚಿಸಲು ನಿಲುವಳಿ ಸೂಚನೆ ಮಂಡಿಸಲು ಅವಕಾಶ ನೀಡಬೇಕೆಂದು ಸ್ಪೀಕರ್ ಅವರಿಗೆ ಮನವಿ ಮಾಡಿದರು. (ಮಂಗಳವಾರ ಸದನದಲ್ಲಿ ಆಗಿದ್ದೇನು?)

ಜೆಡಿಎಸ್ ಶಾಸಕ ಚೆಲುವರಾಯ ಸ್ವಾಮಿ ಸೇರಿದಂತೆ ಇತರ ಶಾಸಕರು ರೇವಣ್ಣ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ ಸದನದ ಬಾವಿಗೆ ಆಗಮಿಸಿದರು. ಇದರಿಂದ ಕಲಾಪಕ್ಕೆ ಅಡ್ಡಿಯಾಗುತ್ತದೆ ಎಂಬುದನ್ನು ಅರಿತ ಸ್ಪೀಕರ್ ಕಾಗೋಡು ತಿಮ್ಮಪ್ಪ, ನಿಯಮ 69ರ ಅಡಿ ಚರ್ಚೆ ನಡೆಸಲು ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿ ಶಾಸಕರನ್ನು ಸಮಾಧಾನ ಪಡಿಸಿ, ಕಲಾಪ ಮುಂದುವರೆಸಿದ್ದಾರೆ.
ಕ್ರಷರ್ ಗಳಿಗೆ ಕಡಿವಾಣ : ರಾಷ್ಟ್ರೀಯ ಹೆದ್ದಾರಿಯಿಂದ 100 ಮೀ ವೊಳಗೆ ಮತ್ತು ಜಿಲ್ಲಾ ರಸ್ತೆಯಿಂದ 50 ಮೀ ವೊಳಗೆ, ಕಂದಾಯ ಗ್ರಾಮ, ದೇವಾಲಯ ಹಾಗೂ ಶಾಲೆಗಳಿಂದ 500 ಮೀ ವೊಳಗೆ ಕ್ರಷರ್ ಸ್ಥಾಪನೆ ಮಾಡಲು ಅನುಮತಿ ನೀಡಬಾರದು ಎಂಬ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಹಿಂದಿನ ಬಿಜೆಪಿ ಸರ್ಕಾರ ರೂಪಿಸಿದ್ದ ಕಾಯ್ದೆಗೆ ಕೆಲವು ಬದಲಾವಣೆಗಳನ್ನು ಮಾಡಿ ಅಧಿವೇಶನದಲ್ಲಿ ಮಂಡಿಸಲಾಗಿತ್ತು.
ಗುಂಡಿಕ್ಕಲು ಆದೇಶ : ಈವರೆಗೆ ನಾಲ್ವರನ್ನು ಬಲಿ ಪಡೆದು ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ಕಾಡಿನಲ್ಲಿ ಅಡಗಿರುವ ಹುಲಿಯನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲುವಂತೆ ಸರ್ಕಾರ ಆದೇಶ ನೀಡಿದೆ. ಮಂಗಳವಾರ ಸಂಜೆ ಎಚ್.ಡಿ.ಕೋಟೆ ತಾಲೂಕಿನ ಚಿಕ್ಕಬರಗಿ ಗ್ರಾಮದ ಬಸಪ್ಪ (55) ಎಂಬುವವರನ್ನು ಹುಲಿ ಕೊಂದು ಹಾಕಿತ್ತು. ಇದೆವೇಳೆ ಹುಲಿ ದಾಳಿಯಿಂದ ಮೃತಪಟ್ಟ ನಾಲ್ವರ ಕುಟುಂಬದವರಿಗೆ ಸರ್ಕಾರ ಐದು ಲಕ್ಷ ರೂ. ಪರಿಹಾರ ಘೋಷಿಸಿದೆ. (ಮೈಸೂರಿನಲ್ಲಿ ನರಭಕ್ಷಕ ಹುಲಿಗೆ ನಾಲ್ಕನೇ ಬಲಿ)
ಹೇಮಾವತಿ ನಾಲೆ ದುರಸ್ತಿಗೆ ಟೆಂಡರ್ : ಹೇಮಾವತಿ ಎಡದಂಡೆ ನಾಲೆ ದುರಸ್ತಿ ಮಾಡಲು ಶೀಘ್ರದಲ್ಲಿಯೇ ಟೆಂಡರ್ ಕರೆಯಲಾಗುವುದು ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ವಿಧಾನಪರಿಷತ್ತಿಗೆ ತಿಳಿಸಿದ್ದಾರೆ. ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಗೆ ಬರುವ ಹೇಮಾವತಿ ನಾಲೆ ದುರಸ್ತಿಗೆ ವರದಿ ಸಿದ್ಧವಾಗಿದೆ. ಟೆಂಡರ್ ಕರೆದು ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು.
ಸುವರ್ಣ ಸೌಧಕ್ಕೆ ಇಲಾಖೆ ಸ್ಥಳಾಂತರ : ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಹಲವು ಕೆಲವು ಇಲಾಖೆಗಳನ್ನು ಸ್ಥಳಾಂತರ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಸಿಎಂ ಸಿದ್ದರಾಮಯ್ಯ ವಿಧಾನಪರಿಷತ್ತಿಗೆ ತಿಳಿಸಿದ್ದಾರೆ. ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ನೇತೃತ್ವದಲ್ಲಿ ಯಾವ ಇಲಾಖೆಗಳನ್ನು ಸ್ಥಳಾಂತರ ಮಾಡಬೇಕು ಎಂದು ವರದಿ ಸಿದ್ದಪಡಿಸಲು ಸೂಚನೆ ನೀಡಲಾಗಿದೆ. ಕೃಷಿ, ಕೈಗಾರಿಕೆ, ನೀರಾವರಿ ಮತ್ತು ಕಂದಾಯ ಇಲಾಖೆಗಳನ್ನು ಸ್ಥಳಾಂತರ ಮಾಡಲಾಗುವುದು ಎಂದರು.
ಎಸ್ಮಾ ಕಾಯ್ದೆಗೆ ಅಂಗೀಕಾರ : ವಿರೋಧ ಪಕ್ಷಗಳ ವಿರೋಧದ ನಡುವೆಯೂ ಅತ್ಯವಶ್ಯಕ ಸೇವೆ ನಿರ್ವಹಣಾ ವಿಧೇಯಕ (ಎಸ್ಮಾ ಕಾಯ್ದೆ) 2013ರನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. ಸರ್ಕಾರಿ ಬಸ್ ನೌಕರರು, ವಿದ್ಯುತ್ ಇಲಾಖೆ ನೌಕರರು, ಆರೋಗ್ಯಯವರು ಸೇರಿದಂತೆ ಅತ್ಯವಶ್ಯಕ ಸೇವೆ ಒದಗಿಸುವ ಇಲಾಖೆಗಳ ಸರ್ಕಾರಿ ನೌಕರರು ಜನಸಾಮಾನ್ಯರಿಗೆ ತೊಂದರೆಯಾಗುವ ರೀತಿಯಲ್ಲಿ ಪ್ರತಿಭಟನೆ ನಡೆಸಿದರೆ, ಅವರ ವಿರುದ್ಧ ಕ್ರಮ ಕೈಗೊಳ್ಳುವ ಉದ್ದೇಶದಿಂದ ಎಸ್ಮಾ ಕಾಯ್ದೆಯನ್ನು ಸದನದಲ್ಲಿ ಮಂಡಿಸಲಾಗಿತ್ತು. ವಿರೋಧ ಪಕ್ಷಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು ಇದಕ್ಕೆ ಅನುಮೋದನೆ ದೊರಕಿದೆ.












Click it and Unblock the Notifications